Wednesday 20 December 2017

ಪುಟ್ಟಿ ಕಾಲೇಜ್ ಅಲ್ಲಿ ಈ ವಾರ ಪೂರಾ fun ವೀಕ್. ಈ ವಾರ ಓದುವಿಕೆಗೆ ತಿಲಾಂಜಲಿ ಇಟ್ಟಿದ್ದಾಳೆ! ದಿನಕ್ಕೊಂದು ತರದ ಬಟ್ಟೆ ,ಅದನ್ನ ಹಿಂದಿನ ಸಂಜೆ ಹುಡುಕೋದಕ್ಕೆ ಟ್ರೈ ಮಾಡೋದಕ್ಕೆ ಅಂತಲೇ ಮೀಸಲಿಟ್ಟಿದ್ದಾಳೆ!! ದಿನಾ ಬೆಳಿಗ್ಗೆ 'ಏಳು ಮಗ ಟೈಮ್ ಆಯ್ತು' ಅಂದ್ರೆ 'ಇನ್ನೊಂದ್ ಹತ್ ನಿಮಿಷ್ ಮಾ'ಅಂತ ಗೋಗರೆದು ಆಮೇಲೆ ಎದ್ದು ಟೈಮ್ ಆಯ್ತು ಅಂತ ಪರದಾಡೋ ಹುಡುಗಿ ಈಗ ಬೇಗಬೇಗ ಎದ್ದು ತಯಾರಾಗ್ತಾಳೆ !! 'ತಿಂಡಿ ನೀನೆ ತಿನ್ನಿಸ್ಬಿಡು' ಅಂತ ಗೋಳಾಡಿಸ್ತಾಳೆ ..
ಈವತ್ತು ರಾಜಕಾರಣಿಗಳ ದಿನ ಅಂತೆ.. ಒಂದು ಕಾಟನ್ ಸೀರೆ ತೆಗೆದು ಉಟ್ಕೊಂಡು ರೆಡಿ ಆದ್ಲು (ಈ ಸೀರೆನ ದಿನಾ ಹೆಂಗ್ ಮೈನ್ಟೈನ್ ಮಾಡ್ತೀರೋ ತಾಯಂದಿರ ನಿಮಗೊಂದು ನಮಸ್ಕಾರ ಅಂದ್ಲು ), ದಿನದಂತೆ ಜುಟ್ಟು ಕಟ್ಟದೆ ಒಂದು ಪುಟ್ಟ ಜಡೆ ಹಾಕಿಕೊಂಡಳು . ಒಂದು ಪುಟ್ಟ ವಾಚ್ ಕಟ್ಟಿಕೊಂಡ್ಲು . ಸರ ಹಾಕ್ಕೋ ಅಂದೆ 'ಮಾ, U kno I am a very sincere Politician, ಯಾವನ್ ರೈಡ್ ಮಾಡಿದ್ರು ನನ್ನ ಮನೆಯಲ್ಲಿ ಏನಿರೋದಿಲ್ಲ ಅಂತ ಹೇಳೋಕೆ ಹಿಂಗ್ ಇರೋದು' ಅಂದ್ಳು !! (ಮೂಗಿನ ಮೇಲೆ ಬೆರಳಿಟ್ಟುಕೊಂಡೆ !!)..ಎಲ್ಲಾ ಆಯ್ತು ಕಾಲೇಜ್ಗೆ ಹೊರಟಳು. ಸೀರೆ ಹಾಕ್ಕೊಂಡು ಒಂದೇ ಬದಿಯಲ್ಲಿ ಗಾಡಿಯಲ್ಲಿ ಕುಳಿತಾಗ ಶುರು ಆಯ್ತು ಅವಳ ವರಾತ .'ಮಾ, ಮೆಲ್ಲ್ಗೆ ಓಡ್ಸು ಪ್ಲೀಸ್' ಅಂತ. ದಿನ ಡ್ರಾಪ್ ಮಾಡೋವಾಗ 'ಅದೇನ್ ಗಾಡಿ ಓಡಿಸ್ತಿರೋ ಏನೋ ಗಂಡಹೆಂಡತಿ , ನಮ್ಮಣ್ಣ ಓಡಿಸ್ತಾನೆ ನೋಡು ಹಂಗ್ ಓಡಿಸಬೇಕು , ಅದ್ಯಾವ್ ಮಗ DL ಕೊಟ್ಟನೋ ನಿಮ್ಮಿಬ್ಬರಿಗೆ ' ಅಂತ ಹಿಂದೆ ಕೂತು ವಟಗುಟ್ಟುತ್ತಾ ಇದ್ದವಳು ಇವಳೇನಾ ಅನಿಸೋ ಹಾಗೆ !
ಗಾಡಿ ಇಳೀತಾ ಹೇಳ್ತಾಳೆ 'ಈವತ್ತು ಗಂಡ್ ಐಕ್ಳಿಗೆಲ್ಲ ಪಾಠ ತಲೆಗೆ ಹೋಗಲ್ಲ ಬಿಡು , ಕಾಲೇಜ್ ಹಾಳ್ ಮಾಡಿ ಬರ್ತೀವಿ'
ಇನ್ನು ಈಗ ತೊಡೆಯ ಮೇಲೆ ಮಲಗಿದ್ದ ಮಗಳ ನೆನಪು .... And I Cherish Every moment with Them :)))) <3

Thursday 30 November 2017

ನನಗೊಂದಿಷ್ಟು ನಗುವ ಸಾಲವಾಗಿ ಕೊಟ್ಟಿರು ಬದುಕೇ 
ನನ್ನಳಲ ಇತರರಿಗೆ ಹಂಚುವ ಮನಸಿಲ್ಲ ಅಂದಿದ್ದಳವಳು ಅಂದು ..... 
ಪಡೆದ ಸಾಲವ ಹಂಚುತ್ತಲೇ ಬಂದಿದ್ದಾಳೆ 
ಅವಳವರು ಎನಿಸಿಕೊಂಡವರೆಲ್ಲರಿಗೂ
ಅವಳಲ ಒಡಲಾಳದಲಿ ಬಚ್ಚಿಟ್ಟು ....
ಅಂದು ಸಾಲ ಕೊಡಲು ನಿಂತ ಬದುಕು 
ಇಲ್ಲಿಯವರೆಗೂ ಕೊಟ್ಟದ್ದ ಮರಳಿ ಕೇಳದೆ 
ನಗೆಯ ಸಾಲವ ನೀಡುತ್ತಲೇ ಇದೆ 
ಅವಳಲ ತನ್ನ ಒಡಲಾಳದಲಿ ಬಚ್ಚಿಟ್ಟುಕೊಂಡು ........
'ನಿನ್ನ ಭುಜದ ಮೇಲೆ ತಲೆಯಿಟ್ಟು ಒಂದಷ್ಟು ಹೊತ್ತು ಕೂರಬೇಕು '
'ಅಷ್ಟೇನಾ ' ಕಣ್ಣಲ್ಲಿ ಅದೇ ತುಂಟತನ 
'ಹೂಂ, ಅಷ್ಟೇ .. ಅದೆಷ್ಟೋ ವರ್ಷಗಳಾಗಿತ್ತು ಅಲ್ವ ನಾವಿಬ್ಬರೇ ಹೀಗೆ ಏಕಾಂತವಾಗಿ ಇದ್ದು .. '
'ಮದ್ವೆಗೆ ಮೊದಲೇನೋ ....."
ಮಕ್ಕಳ ಜವಾಬ್ದಾರಿ ಮುಗಿಸಿ ನಿರಾಳವಾಗಿ ಕುಳಿತ ಇಬ್ಬರ ಮೊಗದಲ್ಲೂ ನಗು.... ))
ಕಥೆ ಹೇಳಿ ತುಂಬಾ ದಿನಗಳಾಗಿತ್ತು ಅಲ್ವೇ  ಇಲ್ಲೊಂದು ಕಥೆಯಿದೆ ನೋಡಿ 
ಒಂದೂರು, ಊರಲ್ಲಿ ಒಂದೇ ಬಾವಿ , ಕುಡಿಯುವ ನೀರಿಗೆ ಎಲ್ಲಾ ಅಲ್ಲಿಂದಲೇ ನೀರು ತೆಗೆದುಕೊಳ್ತಾ ಇದ್ರು. 
ಒಮ್ಮೆ ಆ ಬಾವಿಯೊಳಗೆ ಒಂದು ನಾಯಿ ಬಿದ್ದು ಹೋಯ್ತು. ನೋಡಿದ್ರೋ ಅಥವ ನೋಡಲಿಲ್ಲವೋ -ಒಟ್ಟಾರೆ ಆ ನಾಯಿಯನ್ನ ಯಾರೂ ಹೊರ ತೆಗೆಯಲಿಲ್ಲ. ನಾಯಿ ಅಲ್ಲೇ ಸತ್ ಹೋಯ್ತು. ಒಂದೆರಡು ದಿನಗಳಾದ ಮೇಲೆ ನೀರು ನಾರತೊಡಗಿತು. ಬಳಸಲು ಅನರ್ಹವಾಗ್ತಾ ಹೋಯ್ತು. ಆದರೂ ನಾಯಿಯನ್ನ ಎತ್ತಬೇಕೆಂದು ಯಾರಿಗೂ ಅನಿಸಲಿಲ್ಲ ! ಜನ ಕುಡಿಯುವ ನೀರಿಗೆ ಒದ್ದಾಡತೊಡಗಿದರು. ಕಡೆಗೆ ಊರ ಹೊರಗಿನ ದೇಗುಲದ ಬಳಿಯಿದ್ದ ಹಿರಿಯ ಸನ್ಯಾಸಿಯೊಬ್ಬರನ್ನ ಪರಿಹಾರ ಕೇಳಿದ್ರು. ಸನ್ಯಾಸಿ 'ಒಂದಷ್ಟು ಗಂಗಾ ಜಲ ತಂದು ನೀರಿಗೆ ಹಾಕಿ, ನೀರಿನ ಪಾವಿತ್ರ ಹಿಂದಕ್ಕೆ ಬರುತ್ತದೆ ' ಅಂದ. ಜನ ಹಾಗೆ ಮಾಡಿದ್ರು. ಆದರೂ ನೀರು ಕುಡಿಯಲು ಯೋಗ್ಯವಾಗಲಿಲ್ಲ. ಜನ ಮತ್ತೆ ಸನ್ಯಾಸಿಯನ್ನ ಕೇಳಿದಾಗ ಒಂದಷ್ಟು ಹೋಮ, ಹವಾನ ಮಾಡಿಸಿ' ಅಂದ . ಜನ ಅದನ್ನೂ ಮಾಡಿದರು.ನೀರು ಶುದ್ಧವಾಗಲಿಲ್ಲ. ಮತ್ತೊಮ್ಮೆ ಕೇಳಿದಾಗ ಸನ್ಯಾಸಿ 'ನೀರಿಗೆ ಒಂದಷ್ಟು ಸುಣ್ಣ ಹಾಕಿ ಮತ್ತೆ ತಿಳಿಯಾಗಬಹುದು' ಅಂದ . ಜನ ಮತ್ತೆ ಹಿಂದಿರುಗಿ ಬಂದಾಗ ಸನ್ಯಾಸಿ ಅಚ್ಚರಿಗೊಂಡ . 'ಇನ್ನೂ ನೀರು ತಿಳಿಯಾಗಲಿಲ್ಲವೇ?' ಎಂದಾಗ ಜನರು 'ಇಲ್ಲಾ ' ಎಂದರು. ಸನ್ಯಾಸಿ 'ಅಲ್ಲಾ, ನೀವು ಸತ್ತ ನಾಯಿಯನ್ನ ಹೊರ ತೆಗೆದಿರಿ ತಾನೇ"? ಎಂದು ಪ್ರಶ್ನಿಸಿದ. ಈಗ ಜನ 'ನೀವು ಹೇಳಲೇ ಇಲ್ಲವಲ್ಲ ಸ್ವಾಮೀ ' ಎಂದರು .ಸನ್ಯಾಸಿ ನಕ್ಕುಬಿಟ್ಟ . 'ಕೊಳೆಯನ್ನೇ ತೆಗೆಯದೆ ಶುದ್ದಿ ಮಾಡಲು ಹೇಗೆ ಸಾಧ್ಯ' ಎಂದ . ಮೊದಲು ಸತ್ತ ನಾಯಿಯನ್ನ ಹೊರಹಾಕಲು ಹೇಳಿದ ....
ಮನದ ಮಲಿನವನ್ನ ತೆಗೆಯದೆ ಮನಸ್ಸಿಗೆ ಶಾಂತಿ ಎಲ್ಲಿಂದ ಅಲ್ವೇ? ಹಚ್ಚಿದ ಕಡ್ಡಿ ಬೇರೆಯವರನ್ನಸುಡುವ ಮುನ್ನ ತನ್ನನ್ನು ತಾನೇ ಸುಟ್ಟುಕೊಂಡಿರುತ್ತದೆ ಅದಕ್ಕೆ ಅರಿವಿಲ್ಲದೆ !
ಹಿರಿಯ ಗೆಳೆಯರೊಬ್ಬರು ಕಳಿಸಿದ್ರು. ಅನುವಾದಿಸಿ ಹಂಚಿಕೊಂಡೆ ಅಷ್ಟೇ 
ಅಂದೆಂದೋ ನನ್ನ 
ನೋಯಿಸಿದ್ದವರು 
ನನ್ನೆದಿರು ಬಂದು 
ಅಸಹಾಯಕರಂತೆ ನಿಂತಾಗ 
ನಾ ಅನುಭವಿಸಿದ 
ಯಾರಿಗೂ ಕಾಣದಂತೆ
ಸೆರಗಿನೊಳಗೆ ಬಚ್ಚಿಟ್ಟಿದ್ದ ನೋವೆಲ್ಲಾ 
ಒಮ್ಮೆಗೇ ಇಣುಕಿಬಿಡುತ್ತದೆ....... 
ಅಂದು 
ಒತ್ತಟ್ಟಿಗೆ 
ಮುಚ್ಚಿಟ್ಟಿದ್ದ ಅಸಹನೆಯೆಲ್ಲಾ 
ಇಂದು ಹೊರತೂರಿಬಿಡಲೇ ಅನಿಸುವಾಗ
ಇದು 
ಅಂದಿನ ನನ್ನದೇ ಅಸಹಾಯಕತೆಯ 
ಮತ್ತೊಂದು ರೂಪವೇನೋ ಅನಿಸಿ
ಅಳುವಿಗೆ ಭುಜ ನೀಡಿಬಿಡುತ್ತೇನೆ .... 
ಅವರ ಮೊಗದ ಅಪರಾಧೀಭಾವ ಕಂಡು 
ನನ್ನ ಒಳಮನ ಸಂತ್ವಾನಗೊಳ್ಳುತ್ತಿದೆಯೇೆ?? !!!! 
ಅಲ್ಲೆಲ್ಲೋ ನನ್ನ ಮನಸ್ಸು ಹೇಳುತ್ತದೆ 
ನೀ ಮೇಲೆ ಕಾಣುವಷ್ಟು ಒಳ್ಳೆಯವಳಲ್ಲ !!
ನೀ ಒಳ್ಳೆಯವಳಲ್ಲ .!!!!
ಹೌದೇನೋ 
ಆದರೂ 
ನಾನೂ ಮನುಷ್ಯಳೇ ತಾನೇ ಎಂದು ತಿಪ್ಪೆ ಸಾರಿಸಿಬಿಡುತ್ತೇನೆ .. 
ಒಳ್ಳೆಯವಳೆಂಬ ಮುಖವಾಡ ತೊಟ್ಟು ..... !!

Thursday 9 November 2017

ಒಬ್ಬ ರಾಜ. ಸುಭಿಕ್ಷದ ಕಾಲದಲ್ಲಿ ಏನೂ ಕೆಲಸವಿಲ್ಲದೆ ತೊಂದರೆಗಳಿಲ್ಲದೆ ಇದ್ದಾಗ ತನ್ನ ಆಸ್ಥಾನದಲ್ಲಿ ಮಂತ್ರಿಮಂಡಲಗಳೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ್ದಾಗ ಒಂದು ಪ್ರಶ್ನೆ ಕೇಳ್ತಾನೆ . 'ಮಂತ್ರಿಗಳೇ, ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಮಗಳಿಗೆ ಬದುಕಿನಲ್ಲಿ ಸುಖಸಂತಸ ಇರಬೇಕೆಂದು ತುಂಬಾ ಆಸೆ ಆಕಾಂಕ್ಷೆಗಳಿರುತ್ತವೆ. ಪ್ರತಿ ಹೆಣ್ಣುಮಗಳು ಮದುವೆಯಾಗಿ ಹೋಗುವಾಗ ಮನದಲ್ಲಿ ಅನಿಸುವ ಅತೀ ಇಷ್ಟದ ಆಸೆ ಯಾವುದು ಹೇಳಿ?" 
ಮಂತ್ರಿ ಹಾಗು ಇತರರು 'ಗಂಡ ಒಳ್ಳೆಯವನಾಗಿರಬೇಕು, ಅತ್ತೆ ಮಾವ ಒಳ್ಳೆಯವರಾಗಿರಬೇಕು, ಒಳ್ಳೆ ಮುದ್ದಾದ ಮಕ್ಕಳಾಗಬೇಕು , ಇತ್ಯಾದಿ ಇತ್ಯಾದಿ' ಉತ್ತರಗಳನ್ನ ಹೇಳ್ತಾರೆ . ರಾಜ ಸಂಪ್ರೀತನಾಗೋದಿಲ್ಲ. 'ನಾಳೆ ಬೆಳಗ್ಗೆಯವರೆಗೆ ಸರಿಯಾದ ಸಮಂಜಸ ಉತ್ತರ ನೀಡದಿದ್ದರೆ ಶಿಕ್ಷೆಗೆ ಗುರಿಯಾಗುವಿರಿ' ಅಂತಾನೆ . ಮಂತ್ರಿ ಎಷ್ಟೇ ಪ್ರಯತ್ನಿಸಿದರೂ ಉತ್ತರ ಸಿಗೋದಿಲ್ಲ. ತುಂಬಾನೇ ಬೇಸರದಿಂದ ಕುಳಿತಿರುವಾಗ ಅವನ ಮಗ ಕಾರಣ ಕೇಳ್ತಾನೆ . ಮಂತ್ರಿ ಹಿಂಗ್ಹಿಂಗೆ ಅಂತ ಹೇಳ್ತಾನೆ. ಅಪ್ಪ ಅಂದ್ರೆ ಮಗನಿಗೆ ತುಂಬಾನೇ ಪ್ರಾಣ . ತಂದೆಯ ಸಮಸ್ಯೆಗೆ ಉತ್ತರ ಯೋಚಿಸುತ್ತಾ ಒಂದು ಹಳೆಯ ಛತ್ರದ ಬಳಿ ಕುಳಿತಾಗ ಒಬ್ಬ ಭಿಕ್ಷುಕಿ ಕಾಣ್ತಾಳೆ . ಅವಳು ಮಂತ್ರಿಕುಮಾರನನ್ನ ಬೇಸರಕ್ಕೆ ಕಾರಣ ಕೇಳ್ತಾಳೆ. ತುಂಬಾ ಕುರೂಪಿಯಾಗಿದ್ದ ಆಕೆಯನ್ನ ಕಂಡು ಪ್ರಶ್ನೆಗೆ ಉತ್ತರಿಸಬೇಕೆಂದೆನಿಸದಿದ್ದರೂ ಮಂತ್ರಿಕುಮಾರ ಸೌಜನ್ಯದಿಂದ ಕಾರಣ ಹೇಳ್ತಾನೆ . ಅವಳು ನಸುನಕ್ಕು 'ನೀನು ನನ್ನ ಮದುವೆಯಾಗುವೆ ಎಂದು ಭಾಷೆ ನೀಡಿದರೆ ನಾ ಉತ್ತರ ನೀಡ್ತೀನಿ' ಅಂತಾಳೆ. ಚಕಿತಗೊಂಡ ಮಂತ್ರಿಕುಮಾರ ಕೋಪಗೊಂಡರೂ ತಂದೆಗಾಗಿ ಒಪ್ಪಿಕೊಳ್ತಾನೆ ! ಸರಿ ಬೆಳಿಗ್ಗೆ ರಾಜನ ಆಸ್ಥಾನದಲ್ಲಿ ಭಿಕ್ಷಿಕಿ ರಾಜನಿಗೆ ಉತ್ತರಿಸುತ್ತಾಳೆ ' ಪ್ರತಿ ಹೆಣ್ಣು ಮಗಳಿಗೂ ಮದುವೆಯಾಗಿ ಹೋಗುವ ಮನೆಯಲ್ಲಿ ತನ್ನ ತವರಿನಲ್ಲಿದ್ದ ಸ್ವತಂತ್ರ ಇದ್ದರೆ ಸಾಕೆಂದು ಹಂಬಲಿಸುತ್ತಾಳೆ . ಅದೊಂದಿದ್ದರೆ ಉಳಿದದ್ದೆಲ್ಲ ಅವಳು ಪಡೆಯಬಲ್ಲಳು ' ಎನ್ನುತ್ತಾಳೆ ! ರಾಜ ಸಂತುಷ್ಟನಾಗುತ್ತಾನೆ . ಈಗ ಮಂತ್ರಿಗೆ ಅವಳನ್ನ ತನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕಲ್ಲ ಎಂಬ ದುಃಖವಾಗುತ್ತದೆ. ಆದರೆ ಮಂತ್ರಿಯ ಮಗ ಆಕೆಗೆ ಕೊಟ್ಟ ಮಾತಿನಂತೆ ಆಕೆಯನ್ನ ವಿವಾಹವಾಗುವೆ ಎನ್ನುತ್ತಾನೆ . ಅವನ ನಿಷ್ಠೆಗೆ ಮೆಚ್ಚಿ ದೇವತೆಯೊಬ್ಬಳು ಪ್ರತ್ಯಕ್ಷವಾಗಿ 'ನಿನ್ನ ನಿಷ್ಠೆಗೆ ಮೆಚ್ಚಿದ್ದೇನೆ , ನಿನಗೊಂದು ವರಕೊಡುತ್ತೇನೆ , ಇವಳನ್ನ ನಾ ಸುಂದರಿಯಾಗಿ ಮಾಡುತ್ತೇನೆ , ಆದ್ರೆ ಹಗಲಿನಲ್ಲೊ , ರಾತ್ರಿಯಲ್ಲೊ ಎಂಬ ಆಯ್ಕೆ ನಿನ್ನಾದು ಅಂತಾಳೆ. " ಹಗಲಿನಲ್ಲಿ ಮನೆತುಂಬ ಕಳಕಳೆಯಾಗಿ ಓಡಾಡುವ ಪತ್ನಿಯನ್ನ ಬೇಡುತ್ತಾನೋ ಅಥವಾ ರಾತ್ರಿಯಲ್ಲಿ ಅವನ ಮನದಿಚ್ಛೆಯನ್ನ ಪೂರೈಸುವ ಮಡದಿಯನ್ನೋ ' ಎಂದು ಎಲ್ಲರೂ ಅಚ್ಚರಿಗೊಳ್ಳುತ್ತಾರೆ... ಮಂತ್ರಿಕುಮಾರ ಒಂದು ಘಳಿಗೆ ಯೋಚಿಸಿ "ಅದನ್ನ ಅವಳಿಚ್ಛೆಗೆ ಬಿಡುತ್ತೇನೆ " ಅನ್ನುತ್ತಾನೆ !!! ದೇವತೆ ಅವನನ್ನು ಹರಸಿ ಅವಳನ್ನ ಸುರಸುಂದರಿಯನ್ನಾಗಿಸಿ ಮಾಯವಾಗುತ್ತಾಳೆ:).
ಓದಿದೆ ಅನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ...
ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳಿಗೆ ತವರಿನ ಬಂಧುತ್ವ ನೀಡಿದರೆ ಬಹಳಷ್ಟು ಮನೆಗಳು ಸ್ವರ್ಗವಾಗುತ್ತವೇನೋ !!
(ಎಲ್ಲಾ ಹೆಣ್ಣುಮಕ್ಕಳು ಹಾಗಲ್ಲ, ಸೊಸೆಯಂದಿರೂ ಒಳ್ಳೆಯವರಾಗಿರಬೇಕು, ಇತ್ಯಾದಿ ಇತ್ಯಾದಿ ಹೇಳಿಕೆಗಳು ಬಗ್ಗೆ ಅರಿವಿದೆ .. ಐದು ಬೆರಳೂ ಸಮವಿಲ್ಲ ಅಲ್ವೇ!! )
ಮೊನ್ನೆ ಮೊನ್ನೆ ಒಂದ್ ದಿನ ಎಂದಿನಂತೆ ಪುಟ್ಟಿನ ಕಾಲೇಜಿಂದ ಕರ್ಕೊಂಡ್ ಬರೋಕೆ ಹೋಗಿದ್ದೆ . ಗಾಡಿ ಹತ್ತಿದ ಕೂಡ್ಲೆ ಎಂದಿನಂತೆ "ಕಥೆ" ಶುರು ಮಾಡಿದ್ಲು ."ಊಟ ಮಾಡ್ದ ಕುಳ್ಳಿಮಾ? " ಇನ್ನೂ ನಾ ಉತ್ತರಿಸಿಯೇ ಇರಲಿಲ್ಲ ಆಗ್ಲೇ 'ಮಾ, ಈವತ್ತು ನಮ್ ಕ್ಲಾಸ್ ಅಲ್ಲಿ ೮ ಜನ "ಸೀಸು" . ಪ್ರಿನ್ಸಿ ಪೇರೆಂಟ್ಸ್ ಕರೆಸಿದ್ರು ' ಅಂದ್ಲು . (ಇವಳು ಕಾಲೇಜ್ಗೆ ಹೋಗೋಕೆ ಶುರು ಮಾಡಿದ ಮೇಲೆ ನನ್ನ ಪದಭಂಡಾರಕ್ಕೆ ಸುಮಾರು ಹೊಸಹೊಸ ಪದಗಳನ್ನ ಸೇರಿಸಿದ್ದಾಳೆ!! ಅಂತಹದೇ ಇದೂ ಒಂದು ಸೀಸು -ಸಿಕ್ಕಿಹಾಕೊಳ್ಳೋದು) 'ಯಾಕ್ ಮಗ' ಅಂದೆ. ಮೊನ್ನೆ ಕ್ಲಾಸಿಂದ ಎಪಿಎಸ್(!!) ( ಅಂದ್ರೆ ಎಸ್ಕೇಪ್/ಚಕ್ಕರ್!!) ಆಗಿ ತಲಕಾಡಿಗೆ ಹೋಗಿದ್ರಂತೆ. ಸಿಕ್ಕಿಹಾಕಿಕೊಂಡು ಅವರ ಅಪ್ಪಅಮ್ಮನ್ನ ಕರೆಸಿದ್ರು. ಆಫೀಸ್ ಈವತ್ತು ರಣರಂಗ ಆಗೋಗಿತ್ತು " ಅಂತೆಲ್ಲ ಹೇಳಿದ್ಲು. 'ನೀ ಹೋಗಿರ್ಲಿಲ್ಲ ತಾನೇ ' ಅಂತ ಕಾಲೆಳೆದೆ. 'ನಾವ್ ಗೊತ್ತಲ್ಲ, ಹಂಗೆಲ್ಲಾ ಹೇಳ್ದೆ ಹೋಗೋ ಸೀನೇ ಇಲ್ಲ, ನಿನ್ನ "ಅಳಿಯನ"(!!!) ಜೊತೆ ಹೋದ್ರು ಹೇಳ್ಬಿಟ್ ಹೋಯ್ತಿನಿ ಬಿಡಮ್ಮ' ಅಂದ್ಲು .'ಕರ್ಮ ಮಾರಾಯ್ತಿ ನಿಂದು, ಅಮ್ಮ ಅನ್ನೋ ಭಯನೇ ಇಲ್ಲ ' ಅಂತ ಬೈಕೊಂಡು ಬಂದೆ . ಕಿಸಿಕಿಸಿ ನಗುತ್ತಾ ಬೆನ್ನಿಗೆ ಒರಗಿ "ಲವ್ ಯು ಮಾ' ಅಂದ್ಲು ..
ಒಂದೆರಡು ದಿನ ಆಗಿತ್ತು . ಸುಮಾರು ೨ ಗಂಟೆಯಲ್ಲಿ ಕಾಲೇಜಿಂದ ಕರೆ ಬಂತು . 'ನಾವು, ___ ಕಾಲೇಜಿಂದ" ಅಂದ್ರು. ಪುಟ್ಟಿ ಹೇಳಿದ್ದ ಮಾತುಗಳು ನೆನಪಿಗೆ ಬಂದು ಒಂದಷ್ಟು ಬೆಚ್ಚಿದಂತಾಗಿ "ಹೇಳಿ ' ಅಂದೆ . "ನೀವು ಕೃತಿ ಮಂಜುನಾಥ್ ಪೇರೆಂಟಾ"? ಅಂದ್ರು. 'ಹೌದು ಹೇಳಿ ' ಅಂದೆ . 'ಎರಡನೇ ಟರ್ಮ್ ಫೀಸ್ ಬಾಕಿ ಇದೆ ಮೇಡಂ' ಅಂದ್ರು. ಇಲ್ಲಾ, ಕಟ್ಟಿ receipt ಕೂಡ ಆಫೀಸಿಗೆ ಕಳಿಸಿದ್ದೀನಿ. ಆಗ್ಲೇ ೧೫ ದಿಂದ ಮೇಲಾಯ್ತು ಒಮ್ಮೆ ಚೆಕ್ ಮಾಡಿ' ಅಂದೆ . 'ಕಟ್ಟಿದ್ರೆ ಸರಿ ಮೇಡಂ, ಸಾರಿ ಮೇಡಂ ' ಅಂತ ಫೋನ್ ಇಟ್ರು.
ಮನಸ್ಸು ಅದೆಷ್ಟು ವಿಚಿತ್ರ ಅಲ್ವೇ ! ಕ್ಷಣಗಳಲ್ಲಿ ಎಲ್ಲಿಂದೆಲ್ಲಿಗೋ ಹೋಗಿಬಿಡುತ್ತದೆ . ಒಳಿತಿಗಿಂತ ಕೆಡುಕೇ ಅಥವಾ ಕೆಡುಕಿನ ಭಯವೇ ಮನಸ್ಸಿನ ಪದರದಲ್ಲಿ ಅವಿತಿರುತ್ತದೇನೋ ಅನಿಸುವಂತೆ ! ಅದೆಷ್ಟೇ ನಂಬಿಕೆಯಿದ್ದರೂ ಅಲ್ಲೆಲ್ಲೋ ಒಂದು ಸಣ್ಣ ಅಪನಂಬಿಕೆಯ ಎಳೆ ಹುದುಗಿ ಕುಳಿತಂತೆ.....
ಪುಟ್ಟಿಗೆ ಸಂಜೆ "ಹಿಂಗ್ ಹಿಂಗೇ ಮಗ , ಭಯ ಆಯ್ತು, ನೀ ಚಕ್ಕರ್ ಹಾಕಿ ಎಲ್ಲಾದ್ರೂ ಹೋಗಿದ್ಯೇನೋ ಅಂತ" ಅಂದೆ . "ಮೌ,ನಾ ಹೇಳಿಲ್ವ, ಹೋಗೋದಾದ್ರೆ ಹೇಳೇ ಹೋಗ್ತೀನಿ ನಿನ್ನಳಿಯನ ಜೊತೆ ಅಂತ , ಸುಮ್ನೆ ಟೆನ್ಶನ್ ಮಾಡ್ಕೋ ಬೇಡ ಸರಿನಾ.... ಈಗ ಒಂದಿನ್ನೂರು ಈ ಕಡೆ ತಳ್ಳು, ನಾಳೆ ನನ್ ಫ್ರೆಂಡ್ ಬರ್ತ್ಡೇ ಐತೆ !!!" ಅಂದ್ಳು ..
ಪುಣ್ಯ ಮಾಡಿ ಹೆತ್ತಿದ್ದೀನಿ ಇವಳನ್ನ ....))ಇವ್ಳು ಉದ್ದಾರ ಅಗೋ ಚಾನ್ಸ್ ಇಲ್ಲ ......
ಹೆಂಡತಿ ಕೊಟ್ಟ ಟೀ ಆಸ್ವಾದಿಸುತ್ತಾ ಆರಾಮವಾಗಿ ಟಿವಿ ನೋಡ್ತಾ ಇದ್ದ ಪತಿ ರಾಯ . ಫೋನ್ ಟ್ರಿಂಗುಟ್ಟಿತು . 
'ಹಲೋ'
'ಹಲೋ ಸಾರ್ ಮಂಜುನಾಥ್ ಆವ್ರಾ?'
ಹೆಣ್ಣು ದನಿ ಕೇಳುತ್ತಲೇ ಮೊಗ ಅರಳಿತು ದನಿ ಮೆದುವಾಯ್ತು ' ಹುಂ , ಹೇಳಿ ಮೇಡಂ'
'ಸಾರ್, ನಿಮಗೆ ಒಂದು ಬಹುಮಾನದ ಕೂಪನ್ ಇದೆ . ಸಂಜೆ ನಿಮ್ಮ "ಫ್ಯಾಮಿಲಿ" ಕರ್ಕೊಂಡ್ ಬಂದು ತೆಗೆದುಕೊಂಡು ಹೋಗಿ ಸಾರ್ "
ಹೆಂಡತಿ ಅಡುಗೆ ಮನೆಯಲ್ಲಿರುವುದನ್ನ ಖಚಿತಪಡಿಸಿಕೊಂಡು 'ಫ್ಯಾಮಿಲಿ ಅಂದ್ರೆ ?!'
"ಸಾರ್ ನಿಮ್ ವೈಫ್ ಸರ್ "
"ನನ್ ವೈಫು ಸಿಟ್ಕೊಂಡು ಅವರಮ್ಮನ ಮನೆಗೆ ಹೋಗಿದ್ದಾಳೆ, ಬೇರೆ ಯಾರನ್ನಾದ್ರೂ ಕರ್ಕೊಂಡ್ ಬರಬಹುದಾ ಮೇಡಂ? "
ಪಾಪ ಆ ಕಡೆ ಮಾತನಾಡುತ್ತಿದ್ದವರು ಸ್ವಲ್ಪ ಗೊಂದಲಗೊಂಡಿರಬೇಕು
'ಸಾರ್, ಬಂದ್ ಮೇಲೆ ಕರ್ಕೊಂಡ್ ಬನ್ನಿ ಪರ್ವಾಗಿಲ್ಲ "
'ಅವ್ಳು ಬರೋದಿಲ್ಲ ಕಣಮ್ಮ"
'ಹೋಗ್ಲಿ ಬಿಡಿ ಸಾರ್ !!!!!!"
'ಹೋಗ್ಲಿ ಬಿಡಿ ಅಂದ್ರೆ ಕರ್ಕೊಂಡ್ ಬರಬೇಡಿ ಅಂತಾನಾ ಅಥವಾ 'ಅವ್ಳು' ಹೋದ್ರೆ ಹೋಗ್ಲಿ ಅಂತಾನಾ?'
"........."
"ಹಲೋ"
"........."
"ಹಲೋ "
ಕುಡಿದ ಟೀ , ತಿಂದ ತಿಂಡಿ ಹೆಚ್ಚಾದ್ರೆ ಹಿಂಗೇನೆ .....cholesterolನ ಮಹಿಮೆ ...
ಇದೊಂದು ಹಳೆಯ ಸೀರೆ. ಸುಮಾರು ೨೫ ವರ್ಷ ಹಳೆಯದೇನೋ . ನನ್ನ ಮಗಳು ವೈದ್ಯೆಯಾಗಿ ಹೊರಬರುತ್ತಾಳೆ ಅನ್ನೋ ಖುಷಿಗೆ ಅಮ್ಮ (ಅದ್ಯಾರೋ ಅವರ ಗೆಳತಿ ವಿದೇಶಕ್ಕೆ ಹೋಗಿದ್ದಾಗ ತರಿಸಿ.. ಆಗೆಲ್ಲ ವಿದೇಶಿ ಸೀರೆ ಅನ್ನೋದು ಹಮ್ಮು!!!) ನನ್ನ ೨೨ ಹುಟ್ಟುಹಬ್ಬಕ್ಕೆ ಕೊಡಿಸಿದ್ದು. ಅದ್ಯಾಕೋ ಅದರ ಮೇಲಿರುವ ಬಳೆಗಳ ಚಿತ್ತಾರ ತುಂಬಾನೇ ಇಷ್ಟವಾಗಿತ್ತು. ಕೃತಿ ಹುಟ್ಟಿ ಒಂದೈದಾರು ವರ್ಷಗಳವರೆಗೂ ಆಸೆ ಪಟ್ಟು ಹಾಕಿಕೊಳ್ತಾ ಇದ್ದೆ. ಆಮೇಲೆ ಸೀರೆ ಚಿಕ್ಕದಾಗ್ತಾ (!!) ಹೋಯ್ತು  ಹಾಗೆ ಇಟ್ಟುಬಿಟ್ಟಿದ್ದೆ. ಈಗೊಂದಷ್ಟು ದಿನಗಳ ಹಿಂದೆ ಬೀರು ಜೋಡಿಸ್ತಾ ಇದ್ದೆ. ಇಬ್ರು ಹೈಕ್ಳು ಮೊಬೈಲ್ ಹಿಡ್ಕೊಂಡು ಹಾಸಿಗೆ ಮೇಲೆ ಬಿದ್ಕೊಂಡು ತಲೆ ಹರಟೆ ಮಾಡ್ತಾ ಕೂತಿದ್ವು. ಪುಟ್ಟಿ 'ಮಾ,ಈ ಸೀರೆ ನನಗೆ ಇಡು, ಇದು ನನಗೆ ಇಡು, ಆ ಡಬ್ಬ ಸೀರೆ ನಿನ್ನ ಸೊಸೆಗೆ ಕೊಟ್ಬಿಡು' ಅಂತೆಲ್ಲ ಮಗನನ್ನ ರೇಗಿಸ್ತಾ ಇದ್ಳು. ನಾನು ಇದು ಇಂತಹ ಸಮಯದಲ್ಲಿ ತಂದಿದ್ದು, ಇದು ಇಂತಹವರು ಕೊಡಿಸಿದ್ದು ಅಂತೆಲ್ಲ ಹೇಳ್ತಾ ಜೋಡಿಸ್ತಾ ಇದ್ದೆ. ಸರಿ ಈ ಸೀರೆ ನೋಡಿ ಹಿಂಗ್ಹಿಂಗೆ ಅಂತ ಹೇಳ್ತಾ ಇದ್ದೆ . ಈ ಸೀರೆ ಇಡುವಾಗ 'ಇದು ನನಗೆ ಕುಳ್ಳಿಮಾ' ಅಂದ್ಳು ಪುಟ್ಟಿ. ಮಗರಾಯನಿಗೆ ಅದ್ಯಾಕೆ ಈ ಸೀರೆ ಇಷ್ಟಾ ಆಯ್ತೋ ಗೊತ್ತಿಲ್ಲ 'ಲೇ, ಈ ಸೀರೆ ನನಗೆ ಬೇಕು' ಅಂತ ಎತ್ಕೊಂಡ. ಇಬ್ರೂ ಒಂದಷ್ಟು ಹೊತ್ತು ಕಿತ್ತಾಡಿಕೊಂಡ್ರು. ಆಮೇಲೆ ಅವ್ನು ಅದನ್ನ ಎತ್ತಿಕೊಂಡು ಹೋಗಿ ಪ್ಯಾಕ್ ಮಾಡಿ ಅವನ ಬೀರುಲಿ ಭದ್ರ ಮಾಡಿಕೊಂಡ !!
ಮೊನ್ನೆ ಮೊನ್ನೆ ಪುಟ್ಟಿ 'ಮಾ, ನನ್ನ ಮದುವೆಯಲ್ಲಿ ನಾ ಏನ್ ಕೇಳಿದ್ರು ಕಾರ್ತಿ ಕೊಡ್ತಾನೆ/ಕೊಡಿಸ್ತಾನೆ ಅಲ್ವ "? ಅಂದ್ಳು. 'ಹ್ಮ್, ಅವನಿಗೆ affordable ಆಗಿದ್ರೆ ಕೊಡಿಸ್ತಾನೆ ಮಗ, ನಿನಗಲ್ಲದೆ ಇನ್ಯಾರಿಗೆ ಕೊಡಿಸ್ತಾನೆ ಹೇಳು, ಆದರು ಅದೇನ್ ಬೇಕು ಹೇಳಿದ್ರೆ ಅಪ್ಪನೋ, ನಾನೋ ಕೊಡಿಸ್ತೀವೀ ಅಲ್ವ ? ಅವನ ಮೇಲ್ಯಾಕೆ ಕಣ್ಣು" ಅಂದೆ "ಮಾ, ನಿನ್ನ ಮಗನಿಗೇನು ಕಷ್ಟ ಕೊಡಲ್ಲ ಬಿಡು, ಆ ಸೀರೆ ಪ್ಯಾಕ್ ಮಾಡಿ ಬಚ್ಚಿಟ್ಟುಕೊಂಡಿದ್ದಾನಲ್ಲ ಅದನ್ನ ಕಿತ್ಕೋಬೇಕು ಅದ್ಕೆ!" ಅಂದ್ಲು ಮುಖ ಊದಿಸಿಕೊಂಡು..  
ಒಡವೆಗಳಿಗೆ, ಆಸ್ತಿಗೆ ಜಗಳ ಆಡೋ ಹೈಕ್ಳನ್ನ ನೋಡಿದ್ದೀನಿ.. ಉಟ್ಕೊಳ್ದೆ ಇಟ್ಟಿದ್ದ ಹಳೆ ಸೀರೆಗೆ ಈ ಮಟ್ಟಿಗೆ 'ಡೀಲ್' ಮಾಡೋ ಐಕ್ಳನ್ನ ನೋಡಿರ್ಲಿಲ್ಲ ))
ಆ ಸೀರೆ ಅವನ ಹೆಂಡ್ತಿ ಉಟ್ಕೊಳ್ತಾಳೋ ಇಲ್ವೋ, ಇಲ್ಲ ಪುಟ್ಟಿ ಉಟ್ಕೊಳ್ತಾಳೋ ಇಲ್ವೋ ಗೊತ್ತಿಲ್ಲ ....ಆದರೆ Feeling ಸುಂಸುಮ್ನೆ ಮುದ್ಮುದ್ದು ))))

ಮೊನ್ನೆ ಮೊನ್ನೆ ಮನೆಗೆ ಬಂದ ಹಿರಿಯ ಗೆಳೆಯರೊಬ್ಬರೊಡನೆ ಮಾತಾಡ್ತಾ ಇದ್ವಿ . ಮಾತಿಗೆ ಮಾತು ಬಂದು ಮಕ್ಕಳನ್ನ ಬೆಳೆಸುವ ವಿಷ್ಯಕ್ಕೆ 'ಊರ ಬಾಗಿಲು ಕಾಯ್ದು ದೊಡ್ಡ ಬೋರೇಗೌಡ ಅನಿಸಿಕೊಂಡಂತೆ' ಅಂದ್ರು ಮಂಜು .
ಅದಕ್ಕಾ ಹಿರಿಯರು 'ಸಾಂಬನ ಕಥೆ ಗೊತ್ತಲ್ಲ? ಕೃಷ್ಣನ ಮಗ ಸಾಂಬನದು?" ಅಂದ್ರು ಮತ್ತೆ ಮುಂದುವರೆಸಿದರು "ಸಾಂಬ ಜಾಂಬವತಿ-ಕೃಷ್ಣನ ಮಗ. ತನ್ನ ತಂದೆಯ ವೇಷ ಧರಿಸಿ ತಂದೆಯ ಉಪಪತ್ನಿಯರನ್ನೇ ಮೋಸಗೊಳಿಸುತ್ತಾನೆ. ಕೋಪಗೊಂಡ ಅಪ್ಪ ಮಗನಿಗೆ ಚರ್ಮವ್ಯಾದಿಯ ಶಾಪ ನೀಡುತ್ತಾನೆ . ಸಾಂಬ ಸೂರ್ಯದೇವನಿಗೆ ದೇಗುಲಗಳನ್ನ ಕಟ್ಟಿಸಿ ಶಾಪ ವಿಮುಕ್ತಿಗೊಳ್ಳುತ್ತಾನೆ.(sun temple Konarak) 
ದುರ್ಯೋಧನನ ಮಗಳನ್ನ ಅಪಹರಿಸಿ ಸಿಕ್ಕಿಬಿದ್ದು ಯಾದವರಿಗೂ-ಕೌರವರಿಗೂ ಯುದ್ಧಕ್ಕೆ ಬೀಳುವಂತಾದಾಗ ಆತನ ದೊಡ್ಡಪ್ಪ ಬಲರಾಮ ನಿಂತು ರಾಜಿ ಮಾಡಿಸುತ್ತಾನೆ.
ಕಡೆಗೆ ಒಮ್ಮೆ ದೂರ್ವಾಸರು ಹಾಗು ಇತರ ಮುನಿಗಳು ದ್ವಾರಕೆಗೆ ಕೃಷ್ಣನ ದರ್ಶನಕ್ಕೆಬಂದಾಗ ಒನಕೆಯನ್ನ ಉದರಕ್ಕೆ ಸುತ್ತಿಕೊಂಡು ಗರ್ಭಿಣಿಯಂತೆ ನಟಿಸಿ 'ತನಗೆಂತ ಮಗು ಹುಟ್ಟುವುದೆಂದು ಅವರನ್ನ ಹಾಸ್ಯ ಮಾಡುವಂತೆ ಕೇಳಿದಾಗ ಕೋಪಗೊಂಡ ಮುನಿಗಳು ನಿನಗೊಂದು ಒನಕೆ ಹುಟ್ಟಲಿ, ಅದರಿಂದಲೇ ಯದುಕುಲ ಕೊನೆಯಾಗಲಿ ಅಂತ ಶಾಪ ನೀಡುತ್ತಾರೆ. ಕಡೆಗೊಂದು ದಿನ ಮುನಿಗಳ ಶಾಪದಂತೆ ಸಾಂಬ ಒನಕೆಕೆ ಜನ್ಮ ನೀಡುತ್ತಾನೆ . ಅದನ್ನೆಲ್ಲ ಚೂರು ಚೂರು ಮಾಡಿ ಯಮುನೆಯ ತಟದಲ್ಲಿ ಎಸೆದು ಬಿಡುತ್ತಾನೆ. ಯಾದವೀ ಕಲಹ ಶುರುಗುವಷ್ಟರಲ್ಲಿ ಈ ಒನಕೆಯ ಚೂರುಗಳು ದೊಡ್ಡ ಹುಲ್ಲಿನ ಜಂಡುಗಳಾಗಿ ಬೆಳೆದು ಯಾದವರು ಅವುಗಳಿಂದಲೇ ಆಯುಧ ಮಾಡಿ ಬಡಿದಾಡಿ ಸಾಯುತ್ತಾರೆ. ಕಡೆಗೆ ಕೃಷ್ಣ ಕೂಡ ನೊಂದು ಯಮುನೆಯ ತಟದಲ್ಲಿ ಆ ಹುಲ್ಲು ಜೊಂಡಿನ ನಡುವೆ ಮಲಗಿದ್ದಾಗ ಜರ ಎಂಬ ಬೇಟೆಗಾರ ಅವನನ್ನು ಯಾವುದೋ ಪ್ರಾಣಿ ಅಲ್ಲಿ ಮಲಗಿದೆಂದು ಭ್ರಮಿಸಿ ಬಾಣಹೂಡಿಬಿಡುತ್ತಾನೆ.. ಅಲ್ಲಿಗೆ ಯದುಕುಲದ ಪರಿಸಮಾಪ್ತಿಯಾಗುತ್ತದೆ ' ಅಂದ್ರು .
ಅಮ್ಮ ಅಪ್ಪನಾಗೋದು ಅಂದ್ರೆ ಕೇವಲ ದೈಹಿಕವಾಗಲ್ಲ ಮಾನಸಿಕವಾಗಿ ದೈವಿಕವಾಗಿ ಕೂಡ ಮಕ್ಕಳನ್ನ ಬೆಳೆಸಬೇಕೇನೋ. ಒಂದಷ್ಟು ಸಮಯ, ಒಂದಷ್ಟು ಪ್ರೀತಿ, ಒಂದಷ್ಟು ಅಪ್ಪನಾಗಿ, ಅಮ್ಮನಾಗಿ ಮಕ್ಕಳೊಡನೆ ಮಾತುಕತೆ ಅಗತ್ಯವೇನೋ ಅಲ್ವೇ ...
ಹಂಚಿಕೊಳ್ಳಬೇಕು ಅನಿಸ್ತು .... 

Wednesday 9 August 2017

ೆಯಲ್ಲಿ ಒಂದು ಪುಟ್ಟ ಹುಡುಗಿ, ಕಾರ್ತಿಗಿಂತ ಒಂದ್ಮೂರು ವರ್ಷ ದೊಡ್ಡವಳೇನೋ, ಶಾಲೆಗೆ ಹೋಗುವಾಗ ದಿನಾ ಮಾತನಾಡಿಸ್ತಾ ಇದ್ದೆ. ಒಂದೆರಡು ತಿಂಗಳುಗಳ ನಂತರ ಗಾಡಿಯಲ್ಲಿ ನಾನು ಮಂಜು ಹೋಗುವಾಗ ಆ ಹುಡುಗಿ ತನಗಿಂತ ಒಂದಾರೇಳು ವರ್ಷದ ಹುಡುಗಿ ಜೊತೆ ಆಗಾಗ ಕಾಣಿಸ್ತಾ ಇತ್ತು. ಆ ದೊಡ್ಡ ಹುಡುಗಿ ಫೋನ್ ಅಲ್ಲಿ ಯಾರ ಜೊತೆಗೆ ಮಾತಾಡ್ತಾ ಇದ್ರೆ ಇದು ಪಕ್ಕದಲ್ಲಿ ನಿಂತಿರ್ತಾ ಇತ್ತು. ಆ ದೊಡ್ಡ ಹುಡುಗಿ ತನ್ನ safetyಗಾಗಿ ಇವಳನ್ನ ಜೊತೆಗೆ ಕರ್ಕೊಂಡು ಬಂದು ಜೊತೆ ನಿಲ್ಲಿಸಿಕೊಂಡು ಗಂಟಿಗಟ್ಟಲೆ ಮಾತಾಡ್ತಾ ಇತ್ತು ಅನಿಸುತ್ತೆ (ಯಾರ ಜೊತೆ, ಏನು ಮಾತಾಡ್ತಾ ಇದ್ದಳೋ ನನಗೆ ಅಪ್ರಸ್ತುತ .. ಆದರೆ ಹೋಗ್ತಾ ಬರ್ತಾ ಇದ್ದವರು ಆಕೆಯನ್ನ ನೋಡೋ ರೀತಿ ಇಷ್ಟ ಆಗ್ತಾ ಇರ್ಲಿಲ್ಲ ). ಈ ಹುಡುಗಿ ಪಕ್ಕದಲ್ಲೇ ಸುಮ್ನೆ ನಿಂತಿರ್ತಾ ಇತ್ತು . ಒಂದೆರಡ್ಮೂರು ಬಾರಿ ನೋಡಿದ ನಂತರ ಒಂದ್ ದಿನ ಎಂದಿನಂತೆ ಮಾತನಾಡಿಸಿದ ಹುಡುಗಿಯನ್ನ 'ಪುಟ್ಟ, ನಿನ್ನ ಅಲ್ಲಿ ನೋಡ್ದೆ , ಯಾಕ್ ಅಲ್ಲಿ ಇಲ್ಲಿ ನಿಂತ್ಕೊಳ್ತೀಯಪ್ಪ? ಅಪ್ಪ ಅಮ್ಮ ನೋಡಿದ್ರೆ ಬೇಜಾರ್ ಮಾಡ್ಕೊಳ್ತಾರೆ. ನಿನ್ ಫ್ರೆಂಡ್ಸ್ ಜೊತೇನೆ ಹೋಗು, ದೊಡ್ಡೋರ ಜೊತೆ ಯಾಕಪ್ಪ 'ಅಂದೆ . ಮನೆಯ ಹೊರಗೆ ಕಾಂಪೌಂಡ್ ಅಲ್ಲೇ ಇದ್ದ ಅವರಮ್ಮ "ಏನ್ ಸುನೀತಾ "ಅಂದ್ರು . 'ಏನಿಲ್ಲ ಟೆಸ್ಟ್ ಆಯ್ತಾ ಅಂತ ಕೇಳ್ತಾ ಇದ್ದೆ ಅಷ್ಟೇ' ಅಂದೆ.
ಅದೇ ಕೊನೆ ನಾ ಆ ಮಗುವನ್ನ ರಸ್ತೆ ಬದಿಯಲ್ಲಿ ನೋಡಿದ್ದು. ಮನೆಯ ಮುಂದೆ ತನ್ನ ಸಮಾನ ವಯಸ್ಸಿನ ಮಕ್ಕಳ ಜೊತೆ ಆಡ್ಕೊಂಡು, ಚೆಂದ ಅಂಕಗಳನ್ನ ತೆಗೆದು ಇಂಜಿನಿಯರಿಂಗ್ ಮುಗಿಸಿದ್ಳು. ಅಲ್ಲೆಲ್ಲೋ ಒಂದು ಕಡೆ ಕೆಲ್ಸಕ್ಕೆ ಕೂಡ ಹೋದ್ಳು . ಮೊನ್ನೆಮೊನ್ನೆ ಅವರಮ್ಮ 'ಮಗಳಿಗೆ ಮದ್ವೆ ಫಿಕ್ಸ್ ಆಯ್ತು ಸುನೀತಾ ' ಅಂತ ಸಂತಸ ಹಂಚಿಕೊಂಡ್ರು . ಪುಟ್ಟ ಹುಡುಗಿ ಈಗಿನ್ನು ಕಣ್ಣ ತುಂಬಿ ನಿಂತು 'ಇನ್ ಮೇಲೆ ಹೋಗೋಲ್ಲ ಆಂಟಿ' ಅಂದ ನೆನಪು . ಆಗಲೇ ಅದಕ್ಕೆ ಮದುವೆ  ಮತ್ತೊಂದು ನಾಲ್ಕುವರ್ಷಕ್ಕೆ ಅದರ ಮಗು ನನ್ನ 'ಅಜ್ಜಿ ' ಅನ್ನುವುದೇನೋ
ಮನಸ್ಸು ನೀಲಿನೀಲಿ ))
ಬದುಕು ತುಂಬಾ ಸುಂದರ, ನಾವು ಆರಿಸಿಕೊಳ್ಳುವ ಹಾಗೆ ....
ನೆನ್ನೆ ಹೂ ತರಲು ನಮ್ಮ ಕೆ ಆರ್ ಮಾರುಕಟ್ಟೆಗೆ ಹೋಗಿದ್ವಿ . ಹೂವಿನ ಬೆಲೆ ಸ್ವಲ್ಪ ಜಾಸ್ತಿನೇ ಇತ್ತು. ಮಂಜುಗೆ ಹೇಳ್ದೆ ' ಈಗ್ಲೇ ಹಿಂಗಾದ್ರೆ ಇನ್ನ ಹಬ್ಬಕ್ಕೆ ಅಂತೂ ಕೇಳೋದೇ ಬೇಡವೇನೋ ಅನ್ನೋ ಅಷ್ಟು ಜಾಸ್ತಿ ಆಗುತ್ತೆ ಅಲ್ವ ಮಂಜು' . 'ಒಂದು ಬ್ಯಾಗ್ ಹೋಲಿಸಿ ಕೊಡ್ತೀನಿ ಬಿಡವ್ವಾ ' ಅಂದ್ರು.... ರೇಗಿಹೋಯ್ತು ! 
ನಮ್ಮ ರಸ್ತೆಗೆ ಬೆಳಿಗ್ಗೆಬೆಳಿಗ್ಗೆ ಒಬ್ರು "ಲೇಡಿ' ವಾಕಿಂಗ್ಗೆ ಬರ್ತಾರೆ . ಹೆಗಲಿಗೆ ಒಂದು ಚೀಲ ತಗುಲಿಸಿಕೊಂಡು ಹೋಗ್ತಾರೆ. ಯಾರೂ ಇಲ್ಲದೆ ಇದ್ರೆ ಯಾರ ಮನೆಯ ಮುಂದೆ ಹೂ ಇದೆಯೋ ಅಲ್ಲಿಂದ "ಕೇವಲ" ಒಂದೋ ಎರಡೋ ಕಿತ್ಕೊಂಡು ಟಕ್ ಅಂತ ಚೀಲಕ್ಕೆ ಹಾಕಿ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ವಾಕಿಂಗ್ ಮುಂದುವರೆಸುತ್ತಾರೆ . ಅದೆಷ್ಟು ಚೆಂದದ reflex action ಅಂತೀರಾ ... ಮೂರು ಬೀದಿಯ ವಾಕಿಂಗ್ ಮುಗಿಸೋ ಹೊತ್ತಿಗೆ ಆವತ್ತಿನ ಪೂಜೆಗೊ, ಷೋಗೆ ಇಡೋದಕ್ಕೋ ಹೂವಿನ ವ್ಯವಸ್ಥೆ ಆಗಿಹೋಗಿರುತ್ತೆ . ಬ್ಯಾಗ್ ತಂದ ಕಾರಣ ಹಾಲು ತೆಗೆದುಕೊಳ್ಳಲು ಅನಿಸೋ ಹಾಗೆ ಕಡೆಗೆ ಬ್ಯಾಗಲ್ಲಿ ಮೂಲೆಯ ಡೈರಿಯಿಂದ ಹಾಲು ಸೇರುತ್ತದೆ! ಮತ್ತೆ ಮೂರು ರಸ್ತೆಗಳ ಆಚೆಯ ಆಕೆಯ ಅಪಾರ್ಟ್ಮೆಂಟ್ ಸೇರಿಕೊಳ್ಳುತ್ತಾರೆ . (ನಾ ಲೇಡಿ ಅಂದಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ !!) ಮಂಜುನಾಥ ಪ್ರಭುಗಳು ಆ ಸಮಯದಲ್ಲಿ ಡ್ಯೂಟಿಗೆ ಹೋಗುವ ಮೊದಲು ಕಾರು ಒರೆಸಿ ಹೂ ಹಾಕ್ತಾ ಇರ್ತಾರೆ... ಆಕೆಗೆ ಕಾರಿನ ಮರೆಯಲ್ಲಿರೋರು ಕಾಣೋದಿಲ್ಲ ! ಒಮ್ಮೆ ಹಾಗೇ ಕೀಳುವಾಗ ಇವರಿದ್ದಿದ್ದನ್ನ ನೋಡಿ ಮುಜುಗರಗೊಂಡು 'ಯಾವ ಹೂವು ಅಂತ ನೋಡಿದೆ ಅಷ್ಟೇ ಸಾರ್' ಅನ್ದರಂತೆ ! ನನ್ನ ಪತಿದೇವರು ಸುಮ್ನೆ ಹಲ್ಲು ಬಿಟ್ಟರಂತೆ !! (ಇನ್ನೇನು ಮಾಡೋಕೆ ಆಗುತ್ತೆ ! ಹೆಣ್ಣು ಮಕ್ಕಳನ್ನ ಬೈಯೋಕೆ ಆಗುತ್ತಾ ಅಂತಾರೆ!!! ಅಲ್ವ ಮತ್ತೆ!!) ...
ನನಗೆ ರೇಗಿದ್ದು ಯಾಕೆ ಅಂತ ಗೊತ್ತಾಯ್ತಲ್ವಾ ))))).
ಅಜ್ಜಿ ಮೊಮ್ಮಗನಿಗೆ :"ಮಗ ಹೋಗಿ ತನಿ ಎರೆದು ಬರೋದಲ್ವಾ ... ಒಳ್ಳೆಯದಾಗುತ್ತೆ "
ಮೊಮ್ಮಗ : "ಕೊಡಮ್ಮ ಹೋಗ್ ಬರ್ತೀನಿ "
ಅಮ್ಮ ಬಾಳೆಹಣ್ಣು,ಹಾಲು, ಕರ್ಪೂರ ಕೊಟ್ಲು 'ನಾ ಆಮೇಲೆ ಹೋಗಿ ಬರ್ತೀನಿ ,ನೀ ಹಾಲು ಕೊಟ್ಟು ಕರ್ಪೂರ ಹಚ್ಚಿ ಬಾ ಸಾಕು'
ಮೊಮ್ಮಗ ಹೋದ. ಒಂದ್ಹತ್ತು ನಿಮಿಷ ಬಿಟ್ಟು ಬಂದ .. 
ಅಜ್ಜಿ 'ಎರೆದ ಮಗ' 
ಮೊಮ್ಮಗ "ಹ್ಮ್ಮ್ ಅಜ್ಜಿ ' ಅಂದ
ಅಮ್ಮ ಅಡುಗೆ ಮನೆಯಲ್ಲಿ ಚಪಾತಿ ಲಟ್ಟಿಸ್ತಾ ಇದ್ಳು . 'ತಿಂಡಿ ರೆಡಿನಾ ಅಮ್ಮಾ ' ಅಂತ ಜೋರಾಗಿ ಕೇಳಿ, ಒಳಗೆ ಬಂದು 'ಬಾಳೆಹಣ್ಣು ಹಸುಗೆ ಕೊಟ್ಟೆ , ನಾಯಿಗೆ ಹಾಲು ಹಾಕಿದ್ದೀನಿ , ಕರ್ಪೂರ ಹಚ್ಚಿ ಬಂದಿದ್ದೀನಿ , ನಿಮ್ಮತ್ತೆ ಮುಂದೆ ಭಜನೆ ಶುರು ಮಾಡಬೇಡ ಆಯ್ತಾ , ನೀ ಹೆಂಗು ಮತ್ತೆ ಅಭಿಷೇಕಕ್ಕೆ ಅಂತ ಹಾಲು ಕೊಡ್ತೀಯಲ್ಲ " ಅಂದ ತಲೆ ಸವರುತ್ತಾ ...
ಅಪ್ಪನದೇ ಡ್ರಾಮ ಕಂಪನಿ ಅಲ್ವೇ  ಡೈಲಾಗ್ ಹೆಂಗೆ ಬದಲಾಗುತ್ತೆ ?? ಅದ್ ಹೆಂಗೆ ಬ್ಯಾಲನ್ಸ ಮಾಡೋದು ಅಂತ ಅರಿತವ )))
ಈಗಷ್ಟೇ ಎಲೆಕ್ಟ್ರಿಕ್ ಬಿಲ್ ಬಂತು. ರಸೀದಿ ಹಾಕ್ತಾ ಇದ್ದವ್ರು ಪಕ್ಕದ ಮನೆಯಾಕೆಗೆ 'ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂತ ಹೇಳಿ ಹೋದ್ರು. ಒಂದು ಕ್ಷಣ ಮನಸ್ಸು ವಿಷಾದದ ಕಡಲಾಗಿಹೋಯ್ತು..ಮಂಜು ಅಪಘಾತಕ್ಕೆ ಸಿಲುಕಿ ಪೆಟ್ಟು ಮಾಡಿಕೊಂಡಾಗ ಎದುರಿಸಿದ ಬದುಕಿನ ಪುಟಗಳೆಲ್ಲಾ ತೆರೆದುಕೊಂಡಂತೆ ...
ಸುಮಾರು ೨೦೦೦ ಇಸವಿಯಲ್ಲಿ ಆಗಸ್ಟ್ ತಿಂಗಳ ಒಂದು ದಿನ ಮಂಜು ಏಟು ಮಾಡಿಕೊಂಡಾಗ ನನ್ನ ಚಿಕ್ಕ ಕೂಸಿಗೆ ಬರೀ ೪ ತಿಂಗಳು! ಅಮ್ಮ ತಮ್ಮ,ನಾದಿನಿ, ತಮ್ಮಂದಿರಂತಹ ಕಸಿನ್ಸ್ ಇಲ್ಲದೆ ಇದ್ದಿದ್ದರೆ ಬಹುಶಃ ಅದೇನ್ ಆಗಿಹೋಗ್ತಾ ಇದ್ನೋ ಗೊತ್ತಿಲ್ಲ ! ಬದುಕಿನ ಪಾಠ ಕಲಿತ ದಿನಗಳವು. ಮೈಸೂರ೦ತ ಮೈಸೂರಲ್ಲಿ ಮಂಜು ಕಾಲು ಸರಿ ಹೋಗದೆ ಇದ್ದಾಗ ಬೆಂಗಳೂರಿನ ಆಸ್ಪತ್ರೆಗೆ ಓಡಾಡಿ ಒಂದಷ್ಟು ಸರಿ ಹೋದಾಗ ಗೆದ್ದು ಬಂದಂತೆ. ಹಬ್ಬ ಅಂದರೆ ಸಂಭ್ರಮಿಸುತ್ತಿದ್ದ ನನಗೆ ದಿನಗಳೇ ಮರೆತು ಹೋಗಿತ್ತೇನೋ! ದೀಪಾವಳಿಯ ಹಿಂದಿನ ಬೆಳಿಗ್ಗೆ ಮೈದುನನನ್ನ ಮಂಜು ಜೊತೆ ಬಿಟ್ಟು, ಮಂಜುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ದುಡ್ಡು ತರಲು ತಮ್ಮನೊಡನೆ ಮೈಸೂರಿಗೆ ಬಂದಾಗ, ಸಮಯಕ್ಕೆ ಸರಿಯಾಗಿ ಹೇಳಿದವರು ಹಣ ನೀಡದಿದ್ದಾಗ ಅಮ್ಮ ಅವಳ ಸರವನ್ನೇ ಅಡವಿಟ್ಟು ನೀ ತಗೊಂಡು ಹೋಗು ಮಗ , ನಾ ಬಿಡಿಸಿಕೊಳ್ತೀನಿ ' ಅಂತ ಹಣ ನೀಡಿದ್ಳು ! ಸಂಜೆ ಹೊರಡುವಷ್ಟರಲ್ಲಿ ಮೈದುನ 'ಬಾಬ್, ನನ್ನ ಹೆಂಡ್ತಿ ಸಿಟ್ಕೊಂಡಿದ್ದಾಳೆ , ಹಬ್ಬ ಇನ್ನೂ ಮನೆಗೆ ಬರಲಿಲ್ವಲ್ಲಾ ಅಂತ ನೀವು ಇನ್ನು ಹೊರಟಿಲ್ವಾ ' ಅಂದಾಗ ಸಿಸ್ಟರ್ಗೆ ಫೋನ್ ಮಾಡಿ 'ನಾ ಬರೋವರೆಗೂ ಮಂಜುನ ನೋಡಿಕೊಳ್ಳಿ ಪ್ಲೀಸ್ 'ಅಂದಾಗ ಅದ್ಯಾವ ಜನ್ಮದ ಅಕ್ಕತಂಗಿಯರೋ ಎಂಬಂತೆ ನೋಡಿಕೊಂಡಿದ್ದರು. ಅಮ್ಮನ ಮನೆಯಲ್ಲಿದ್ದ ನನ್ನನ್ನ ನೋಡಿದ ಮತ್ತೊಬ್ಬ ಮೈದುನ 'ಇದ್ಯಾಕ್ ಅತ್ಗೆ ಇಲ್ಲಿದ್ದೀರಾ, ಮನೆಗೆ ಹೋಗಿ ದೀಪ ಹಚ್ಚೋದಲ್ವಾ' ಅಂದಾಗ ಸುಮ್ನೆ ನಕ್ಕುಬಿಟ್ಟಿದ್ದೆ ಕಣ್ಣಲಿ ಹನಿ ತುಂಬಿ! ಒಂದಷ್ಟು ಕಾಲು ಸರಿಯಾಗಿ ಬಂದ ಮಗನನ್ನ ನೋಡಿದ ಅತ್ತೆ 'ಮೊದ್ಲೇ ಕರ್ಕೊಂಡ್ ಹೋಗಿದ್ರೆ ನನ್ ಮಗ ಇಷ್ಟ್ ನೋವೇ ತಿಂತಾ ಇರ್ಲಿಲ್ಲ ' ಅಂದಾಗ ಅದ್ಯಾಕೋ ಸಂಕಟ ಒತ್ತರಿಸಿತ್ತು.. ವಾಪಸ್ಸು ಬಂದು ಅಮ್ಮನ ಮನೆಯಲ್ಲಿ ಒಂದಷ್ಟು ಸುಧಾರಿಸಿಕೊಂಡು ಮತ್ತೆ ನಮ್ಮದೇ ಮನೆಗೆ ಬಂದಾಗ ಹೀಗೆ sameee ಮೇಲೆ ಹೇಳಿದಂತೆ ''ಬಿಲ್ ಕಟ್ಟಿಲ್ಲ ಅಂತ ತೋರಿಸ್ತಾ ಇದೆ. ೧೫ರ ಒಳಗೆ ಕಟ್ಬಿಡಿ .ಇಲ್ಲ ಅಂದ್ರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತಾರೆ ' ಅಂದಿದ್ರು ವಿದ್ಯುತ್ ಇಲಾಖೆಯವರು !!
ಅಮೇಲಿನದೆಲ್ಲ ಛಲಕ್ಕೆ ಬಿದ್ದಂತ ಬದುಕು! ಪುಟ್ಟ ಕಾರ್ತಿ, ಕೃತಿ, ಮಂಜು, ನಾನು ..... ಇಲ್ಲಿಯ ತನಕ ಹೀಗೆ ನಗಲು ತೆಗೆದುಕೊಂಡ ಹಠ ಅಹ್ ....
ಬದುಕು ಸುಂದರ. ಅದೆಷ್ಟೇ ಕಷ್ಟ ಬಂದರೂ ಗೆಲ್ಲಬಹುದು .. ಒಂದು ಜೊತೆ, ಒಂದಷ್ಟು ಹಠ ಸಾಕೇನೋ .. ಜೊತೆಗೆ ಯಾವುದೋ ಒಂದು ಶಕ್ತಿ ..ಬೀಳದಂತೆ ತಡೆ ಹಿಡಿವ ಶಕ್ತಿ, ಇನ್ಯಾರ ಮೂಲಕವೋ ನಮ್ಮನ್ನ ಗೆಲ್ಲಿಸುವ ಶಕ್ತಿ ಇದೆಯೇನೋ ...
ಬೆಳಗಾಗ ನಾ ಎದ್ದು ಯಾರ್ಯಾರ ನೆನೆಯಲಿ ಎಂದಾಗ ,ನಾ ನೆನೆಯಲು, ನೆನೆದು ಅಭಾರಿಯಾಗಿರಲು, ಆಭಾರಿಯಾಗಿ ಹಾರೈಸಲು ಅದೆಷ್ಟು ಜನರಿದ್ದಾರೆ ನನಗೆ : ಅಂತಹವರ ಸಂತತಿ ಹೊಳೆದಂಡೆಯ ಗರಿಕೆ ಹಂಗೆ ಬೆಳೆಯಲಿ ))))
ಬರೆಯಲು ಒಂದು ನೆಪ ಅಷ್ಟೇ ಅಂದ್ರಾ 
ರಾತ್ರಿ ಅಷ್ಹೊತ್ತಲ್ಲಿ ಪುಟ್ಟಿ ಎಬ್ಬಿಸಿದ್ಳು 'ಮಾ, ಬಾ ಗ್ರಹಣ ನೋಡೋಣ' ಅಂತ . ಅದಕ್ಕೆ ನಿರಾಸೆ ಯಾಕೆ ಅಂತ ಮಾಳಿಗೆಯ ಮೇಲೆ ಹೋದ್ವಿ.ಮೋಡ ಕವಿದಿತ್ತು. ಮೋಡಗಳ ನಡುವೆಯೇ ಒಂದಷ್ಟು ನೋಡಿ ಮತ್ತೆ ಬಂದು ಮಲಗಿದ್ವಿ...
ಸಣ್ಣವರಿದ್ದಾಗ ಈ ಗ್ರಹಣಗಳು ಸಂಭವಿಸಿದರೆ ಅಮ್ಮ ರಾತ್ರಿ ಏನನ್ನು ಉಳಿಸ್ತಾ ಇರಲಿಲ್ಲ. ಅಪ್ಪಿತಪ್ಪಿ ಉಳಿದರೆ ನಾಯಿಗೆ ಹಾಕಿಬಿಡ್ತಾ ಇದ್ಲು. ನೀರಿಗೆ, ತುಪ್ಪಕ್ಕೆ ಒಂಚೂರು ದರ್ಭೆ ತಂದು ಹಾಕ್ತಾ ಇದ್ಳು . ಬೆಳಿಗ್ಗೆ ನೀರು ಬಂದ್ರೆ ಇರೋಬರೋ ನೀರನ್ನೆಲ್ಲಾ ಬಾಗಿಲಿಗೋ ಗಿಡಕ್ಕೋ ಹಾಕಿ ಹೊಸ ನೀರು ತುಂಬುತ್ತಾ ಇದ್ಲು. ನಾವು ಒಂದಷ್ಟು ರೇಗಿಸ್ತಾ ಇದ್ವಿ , ಆ ನಲ್ಲಿಯವ್ನೂ ರಾತ್ರಿ ದರ್ಭೆ ಹಾಕಿದ್ನಾ ಅಂತಾ. ಆಸ್ಪತ್ರೆಯ ಔಷಧಿಗೆ ಏನಾಗೋದಿಲ್ವ ಅಂತ ರೇಗಿಸ್ತಾ ಇದ್ವಿ.
ಮದ್ವೆ ಆದ ಮೇಲೆ ಕಾರ್ತಿ ಇನ್ನು ಬಸುರಲ್ಲಿದ್ದಾಗ ಬಂದ ಸೂರ್ಯ ಗ್ರಹಣದ ದಿನ ಅತ್ತೆ , ಮಂಜು ನನ್ನ ರೂಮಿನ ಕಿಟಕಿಗೆಲ್ಲ ದಪ್ಪದಪ್ಪ ಕಂಬಳಿಗಳನ್ನ ಕಟ್ಟಿ ನಾ ಹೊರಗೇ ಬಾರದ ಹಾಗೆ ಕಾವಲಿದ್ರು ! ಆಮೇಲೆ ತಲೆಗೆ ನೀರೆರೆಸಿ ತುಪ್ಪದ ದೀಪ ಹಚ್ಚಿಸಿದ್ರು!! (ಅಮ್ಮನ್ನ ರೇಗಿಸಿದ ಹಾಗೆ, ಅಮ್ಮನಿಗೆ ಉಲ್ಟಾ ಹೊಡೆಯೋ ಹಾಗೆ ಅತ್ತೆಗೆ ಉಲ್ಟಾ ಹೊಡೆಯಲಾಗುತ್ತದೆಯೇ?!)
ಬೆಳಿಗ್ಗೆಬೆಳಿಗ್ಗೆ ಪುಟ್ಟಿಗೆ ಅವರಜ್ಜಿ 'ತಲೆ ಸ್ನಾನ ಮಾಡು ಮಗ' ಅಂದ್ರು . 'ಸರಿ ಅಜ್ಜಿ' ಅಂದ್ಳು . ಅಡುಗೆ ಮನೆಗೆ ಬಂದು 'ಲೇ ಕುಳ್ಳಿಮಾ, ತಲೆ ಸ್ನಾನ ಮಾಡಿದ್ರೆ ಕಾಲೇಜ್ಗೆ ಹೋಗೋ ತನಕ ಕೂದ್ಲು ಒಣಗಲ್ಲ, ನಾ ತಲೆ ಸ್ನಾನ ಮಾಡಲ್ಲ, ಮೈ ತೊಳೆದು ಬರ್ತೀನಿ ನಿಮ್ಮತ್ತೆ ಕೇಳದ ಹಾಗೆ ನೋಡ್ಕೋ' ಅಂದ್ಳು . ಸರಿ, ನೀ ರೆಡಿ ಆಗು ಅಂದೆ. ತಯಾರಾಗಿ ಬಂದು ದೇವ್ರಿಗೆ ಕೈಮುಗಿದು ತಿಂಡಿ ತಿಂದ್ಳು. ಕಾಲೇಜ್ಗೆ ಬಿಟ್ಟು ಬಂದೆ . 'ಮಕ್ಕಳನ್ನ ನೀನೆ ಹಾಳ್ ಮಾಡ್ತೀಯ' ಅಂದ್ರು ಅತ್ತೆ. ಸುಮ್ನೆ ನಕ್ಕೆ. ನಾ ಹೋಗಿ ಎಂದಿನಂತೆ ದೀಪ ಹಚ್ಚಿದೆ...
ವಿಜ್ಞಾನಕ್ಕೂ ಸಂಪ್ರದಾಯಕ್ಕೂ ಬಹಳ ಹಿಂದಿನಿಂದಲೂ ಒಂದು ಯುದ್ಧ ನಡೆಯುತ್ತಲೇ ಬಂದಿದೆ . ಸಂಪ್ರದಾಯದ ಹೆಸರಲ್ಲಿ ಹೇರಿಕೆಯಾಗುವ ಯಾವುದೇ ಆದರೂ ಮನೆಯಲ್ಲಿ ನೆಮ್ಮದಿ ಕೆಡುವಂತದ್ದು.. ವಿಜ್ಞಾನದ ಹೆಸರಲ್ಲಿ ಸಂಪ್ರದಾಯವನ್ನ ಸೋಲಿಸಿದೆ , ಸಂಪ್ರದಾಯದ ಹೆಸರಲ್ಲಿ ವಿಜ್ಞಾನವನ್ನ ಸೋಲಿಸಿದೆ ಎನ್ನುವುದು ಸುಳ್ಳು. ವಿಜ್ಞಾನದ "ಉಪಯುಕ್ತತೆ"ಯನ್ನ, ಸಂಪ್ರದಾಯದ "ಯುಕ್ತತೆ"ಯನ್ನ ಅಳವಡಿಸಿಕೊಳ್ಳುತ್ತಾ ನಡೆದರೆ ಚೆಂದವೇನೋ! ಅವರವರ ಭಾವಭಕುತಿ! ಖುಷ್ಖುಷಿಯಿಂದ ಏನೇ ಮಾಡಿದರೂ ಚೆಂದ..."ಗ್ರಹಣ ಬಿಡ್ತಾ" ಅನ್ನೋದು ಬರೀ ಪ್ರಾಕೃತಿಕವಾಗಲ್ಲ ಮಾನಸಿಕವಾಗಿಯೂ ಆದಾಗ ಚೆಂದವೇನೋ..
ಸುಂಸುಮ್ನೆ ಬರಿಬೇಕು ಅನ್ನಿಸಿತು 

Thursday 13 July 2017

ಮೊನ್ನೆ ಮಂಜು ಡ್ಯೂಟಿಗೆ ಅಕ್ಸೆಸ್ಸ್ ತಗೊಂಡು ಹೋಗಿದ್ರು . ಅತ್ಯಾವಶಕವಾಗಿ ಹೊರಗೆ ಹೋಗಲೇ ಬೇಕಿತ್ತು ಅಂತ ಸ್ಕೂಟಿ ತೆಗೆದುಕೊಂಡು ಹೋದೆ . (ಈ ಸ್ಕೂಟಿ ಒಂದ್ ತರ ಸೈಕಲ್ ಇದ್ ಹಂಗೆ!!) .. ಹೋಗಿ ಕೆಲ್ಸ ಮುಗಿಸಿ ಬರ್ತಾ ಇದ್ದೆ . ಒಂದು ಮಾರುತಿ ವ್ಯಾನು (ಶಾಲಾವಾಹನ ) ಹಿಂದೇನೇ ಬರ್ತಾ ಇತ್ತು .. ಒಂದೇ ಸಮ ಹಾರ್ನ್ ಕೂಡ ಹೊಡಿತಾ ಇದ್ದ ಆ ಚಾಲಕ . ನಾನು ಅತ್ಲಾಗೆ ಮುಂದೆ ಹೋಗ್ತಾನೇನೋ, ಮಕ್ಕಳನ್ನ ಕೂರಿಸಿಕೊಂಡು ಯಾಕ್ ಹಿಂಗ್ ಆಡ್ತಾರೋ ಅಂತ ಬೈಕೊಂಡು ಪಕ್ಕಕ್ಕೆ ಹೋದೆ . ಅವ್ನೂ ಪಕ್ಕನೇ ಬಂದ . ಮೊದ್ಲೇ ನಾ ಸ್ವಲ್ಪ ಟೆನ್ಶನ್ ಪಾರ್ಟಿ. ಗಾಡಿ ಕಲ್ತು/ಓಡಿಸಿ ೨೫ ವರ್ಷ ಆದ್ರೂ ಗಾಡಿ ಓಡಿಸುವಾಗ ಒಂದಷ್ಟು "ಟೆನ್ಶನ್ ಕೈಲಿ ಹಿಡಿದುಕೊಂಡಿರ್ತಿನಿ!!!!" 'ತಥ್ , ಅದೇನ್ ಜನನೋ ಏನೋ , ಸ್ವಲ್ಪನೂ ಬುದ್ದಿನೇ ಇಲ್ಲ " ಅಂದ್ಕೊಂಡು ಗಾಡಿ ನಿಧಾನ ಮಾಡಿ ಗುರಾಯಿಸಿದೆ ....
'ಏನ್ ಮೇಡಂ ಚೆನ್ನಾಗಿದೀರಾ " ಅಂದ್ರು ಆ ಡ್ರೈವ್ ಮಾಡ್ತಾ ಇದ್ದ ವ್ಯಕ್ತಿ .
ತಕ್ಷಣಕ್ಕೆ ಗುರುತು ಸಿಗದೇ ಹೋದ್ರು (ನನಗೆ ಒಂದ್ ತರ ಅಮ್ನೇಶಿಯಾ !!!) ಒಂದೆರಡು ಕ್ಷಣಗಳಲ್ಲಿ ಹೊಳೆಯಿತು ಅವ್ರು ಜಾನ್, ಕಾರ್ತಿ ಸಣ್ಣವನಿದ್ದಾಗ ಅವರ ವ್ಯಾನ್ ಅಲ್ಲೇ ಶಾಲೆಗೆ ಹೋಗ್ತಾ ಇದ್ದ ಅಂತ .!! 'ಓಹ್ ಜಾನ್ , ಹೇಗಿದ್ದೀರಾ, ಮಕ್ಕಳು-ಮನೆಯವ್ರು ಹೇಗಿದ್ದಾರೆ ? ಸಾರಿ ಒಂದ್ ನಿಮಿಷ ಸ್ವಲ್ಪ ಕನ್ಫ್ಯೂಸ್ ಆಯ್ತು ಜಾನ್ ' ಅಂದೆ .
" ಪರವಾಗಿಲ್ಲ ಮೇಡಂ ಎಷ್ಟ್ ದಿನಗಳಾಯ್ತು (ವರುಷಗಳೇ ಆಗಿತ್ತೇನೋ) ನೋಡಿ, ನೋಡಿದೆ ಅಲ್ವ ಅದ್ಕೆ ಮಾತನಾಡಿಸೋಣ ಅಂದ್ಕೊಂಡೆ  ಕಾರ್ತಿ ಹೇಗಿದ್ದಾನೆ ಮೇಡಂ, ಏನ್ ಓದ್ತಾ ಇದ್ದಾನೆ ? " ಅಂದ್ರು ..
" ಇನ್ನು ಕಾರ್ತಿ ಹೆಸ್ರು ನೆನಪಿದ್ಯಾ ಜಾನ್ , ಅವ್ನು ಈಗ ದೊಡ್ಡವನಾಗಿದ್ದಾನೆ ಎಂಜಿನಿಯರಿಂಗ್ ಮಾಡ್ತಾ ಇದ್ದಾನೆ ಮಂಡ್ಯದಲ್ಲಿ .." ಅಂದೆ ..
ಅದ್ ಹೆಂಗೆ ಮರಿಯೊಕ್ಕಾಗುತ್ತೆ ಮೇಡಂ, ಡ್ರೈವರ್ಗೂ ಟೀ ಕುಡಿಸಿ ಕಳಿಸ್ತಾ ಇದ್ದ ಮನೆಯನ್ನ !!" ಅಂದ್ರು ...(ಒಮ್ಮೊಮ್ಮೆ ಕಾರ್ತಿಯನ್ನ ಕೊನೆಯಲ್ಲಿ ಡ್ರಾಪ್ ಮಾಡುವಾಗ ಮಂಜು ಒತ್ತಾಯ ಮಾಡಿ ಟೀ ಕುಡಿಸಿ ಕಳಿಸ್ತಾ ಇದ್ರೂ ಜಾನ್ಗೆ... )
ಅಷ್ಟ್ರಲ್ಲಿ ವ್ಯಾನ್ ಅಲ್ಲಿ ಇದ್ದ ಚಿಲ್ಟಾರಿ ಒಬ್ಬ .. 'I have a friend called kartik' ಅಂದ ಕೆನ್ನೆ ಗಿಂಡಿ ನಕ್ಕೆ
"ಸಾರ್ ಹೇಗಿದ್ದಾರೆ ? ಮಗಳು ಏನ್ ಒದ್ತಾ ಇದ್ದಾಳೆ ?" ಅಂತೆಲ್ಲ ಕೇಳಿದ್ರು .. ಅದಕ್ಕೆ ಉತ್ತರಿಸಿ "ಮನೆಗೆ ಬನ್ನಿ ಜಾನ್ ' ಅಂದೆ ..
"ಬರ್ತೀನಿ ಮೇಡಂ ಸಾರ್ ಗೆ ಕೇಳ್ದೆ ಅಂತ ಹೇಳಿ ' ಅಂದ್ರು "ಥ್ಯಾಂಕ್ಸ್ ಜಾನ್' ಅಂದೆ "ಬರ್ತೀನಿ ಮೇಡಂ " ಅಂತ ಹೊರಟರು ....
ಮನಸ್ಸು ನೀಲಿನೀಲಿ ಆ ಬಾನಿನಂತೆ...)
ಕಿತ್ನಾ ಹಸೀನ್ ಹೈ ಜಿಂದಗಿ ...... ಲೈಫ್ ಐಸ್ ಬ್ಯೂಟಿಫುಲ್...It is in our hands to Make It Beautiful ಅನಿಸೋಹಾಗೆ
ಸುಂಸುಮ್ನೆ ಹಂಚಿಕೊಳ್ಬೇಕು ಅನಿಸ್ತು 
ಭಾನುವಾರ ಅಂದ್ರೆ ನಮ್ ಮನೆದೇವ್ರು ನಾನೂ ಊರು ಸುತ್ತೋಕೆ ಹೋಯ್ತಿವಿ .. ಮಕ್ಕಳು ಮನೆಯಲ್ಲೇ ಇರ್ತಾರೆ . ಆವತ್ತು ರಜ ಅಂತ ತಡವಾಗಿ ಏಳ್ತಾರೆ . ಈ ಮಂಜು ಮನೆಯಲ್ಲಿದ್ರೆ ಮಕ್ಕಳಿಗೆ ಬೇಗ ಏಳಿ ಅಂತ "ಭಜನೆ"ಮಾಡ್ತಾರೆ ಅಂತಲೇ ಸುತ್ತೋಕೆ ಹೋಗೋದು.. (ಇವರಿಗೇನೋ ನಿದ್ರೆ ಬರೋದಿಲ್ಲ ಅವಾದ್ರೂ ಒಂದಷ್ಟು ಮಲಗಲಿ ಅಂತ) 
ನೆನ್ನೆ ಚುಂಚನಗಿರಿಗೆ ಹೋಗೋದು ಅಂತ ನಮ್ ಮನೆದೇವ್ರು ಹೇಳಿದ್ರು ..ಬಸ್ ಅಲ್ಲೇ ಹೋಗೋಣ ಅಂದ್ರು ( ನನಗೆ ಈ ಬಸ್ ಪಯಣ ಅಂದ್ರೆ ಆಗ್ಬರಕ್ಕಿಲ್ಲ .. ಒಸಿ ಹಂಗೆಯಾ ಒಂದ್ ತರಾ nauseated ತರ ).. ಗಾಡಿ ಓಡಿಸ್ತಾ ಇದ್ರೆ ನಿನ್ನ ಮುಖ ನೋಡದೆ ರಸ್ತೆನೇ ನೋಡ್ತಾ ಓಡಿಸಬೇಕು ಅದ್ಕೆ ಕಣಮ್ಮ ಅಂತ ಕಿವಿ ಮೇಲೆ ನಮ್ಮ ಬೃಂದಾವನ ತೋಟವನ್ನೇ ಇಟ್ರು !! ನಾನೂ ಒಂದ್ ಚೂರು ಓಡಿಸ್ತೀನಿ ನಿನಗೆ ಜಾಸ್ತೀ ಆಯಾಸ ಆಗೋದಿಲ್ಲ ಕಣಪ್ಪ ಅಂತ ಮಸ್ಕ ಹೊಡೆದರೆ ....... ನೀ ಗಾಡಿ ಓಡಿಸಿದರೆ ನಾವು ಬಾಲಗಂಗಾಧರಸ್ವಾಮಿನ (ತೀರಿ ಹೋದ ಮಠಾಧೀಶರು) ನೋಡಬೇಕು ಅಷ್ಟೇ , ನಾ ಓಡಿಸಿದರೆ ನಿರ್ಮಲಾನಂದ ಸ್ವಾಮಿಗಳನ್ನ(ಈಗಿನ ಮಠಾಧೀಶರು) ನೋಡಬಹುದು .. Choice is yours ಅನ್ನೋದೇ .... 
ಅದೇನ್ ಪುಣ್ಯ(!!!) ಮಾಡಿ ಕಟ್ಕೊಂಡ್ ಬಿಟ್ನೋ ಕಾಣೆ ))))))))
ಈ ಬಾರಿ ಮದುವೆಗಳು ತುಂಬಾನೇ ಜಾಸ್ತಿ. ಕೆಲವೊಂದು ದಿನಗಳಲ್ಲಿ ಒಂದೇ ದಿನ ೨-೩ ಸಮಾರಂಭಗಳಿಗೆ ಹೋಗಲೇಬೇಕಾದ ಅನಿವಾರ್ಯತೆ. ಮೊನ್ನೆ ನಮ್ಮ ಬೇಕರಿ ಸಂಜಣ್ಣ ಹೇಳ್ತಾ ಇದ್ರೂ 'ಈ ಮದ್ವೆ ಸೀಸನ್ ಮುಗಿದ್ರೆ ಸಾಕು ಅನಿಸಿಬಿಟ್ಟಿದೆ ! 100 ರೂಪಾಯಿ ಮುಯ್ಯಿ ಹಾಕೋಕೆ 1000 ರೂಪಾಯಿ ಖರ್ಚ್ ಮಾಡಿಕೊಂಡು ಹೋಗಿಬರಬೇಕು ನೋಡಿ ಅಕ್ಕ" ಅಂತ 
ನೆನ್ನೆ ಮೊನ್ನೆ ಎರಡು ದಿನ ತುಂಬಾನೇ ಬೇಕಾದವರ ಮನೆಯ ಎರಡು ಮದ್ವೆಗಳು. ಎರಡೂ ತೀರಾನೇ ವಿಭಿನ್ನ ಸಾಂಸಾರಿಕ ಹಿನ್ನಲೆಯುಳ್ಳವರ ಮನೆಗಳ ಮದುವೆ.
ಒಂದು ಮದುವೆ ಛತ್ರದಲ್ಲಿ..ಊರಿನ ನೆಂಟರ ಹುಡುಗನ ಮದುವೆ. ಆತನ ಗೆಳೆಯರು ಕೇಕ್ ತಂದು ಕತ್ತರಿಸಿ (!!) ಅದೆಷ್ಟೋ ಜನ ಕಾಯ್ತಾ ಇದ್ರೂ ಫೋಟೋ ಸೆಷನ್ಸ್ ಗಳನ್ನ ಮಾಡಿಸಿಕೊಂಡು ಕೆಲವರು ಬೇಸತ್ತು ರೇಗಿದ ಮೇಲೆ ಬಂದು ನಿಂತ್ರು . ನಿಲ್ಲೋದೇ ತಡ ಕೆಲವರು ಊಟಕ್ಕೆ ದೌಡಾಯಿಸಿದರೆ ಮತ್ತೊಂದೆಡೆ "ಮುಯ್ಯಿ" ಕೊಡೋರ ಸಾಲು !! (ನನಗೆ ಎರಡೂ ಸ್ವಲ್ಪ ಅಲ್ಲೆರ್ಜಿನೇ . ತುಂಬಾ ಆತ್ಮೀಯರಾದ್ರೆ ನೀರು ಹಾಕುವ ದಿನವೇ ನಾನು ಮಂಜು ಹೋಗಿ ಅದೇನ್ ಕೊಡೋದಿದೆಯೋ ಕೊಟ್ಬಿಡ್ತಿವಿ . ಇಲ್ಲಾ ಅಂದ್ರೆ ಒಂದಷ್ಟು ತಡವಾಗಿಯೇ ಹೋಗಿ ಮಾತನಾಡಿಸಿಕೊಂಡು ಬರೋದು ವಾಡಿಕೆ .. ಇನ್ನು ಊಟದ ಪಜೀತಿಯಂತೂ ಹೇಳೋದೇ ಬೇಡ. ಕೆಲವೊಮ್ಮೆ ನಮ್ಮ ಹಿಂದೆಯೇ ನಿಂತಿರ್ತಾರೆ !! ತಿನ್ನೋಕೆ ಮುಜುಗರ ಆಗೋ ಹಂಗೆ ನಮ್ ಕಡೆಯಂತೂ ಈ ಬೀಗರ ಔತಣಕ್ಕೆ ಮುಗಿ ಬೀಳೋದು ನೋಡಿಯೇ ತಿಳಿಬೇಕು!!) ಮಂಜು "ಜಾಗ ಹಿಡಿದ ಮೇಲೆ" ನಾ ಹೋದೆ .. ಅದೇನ್ ಊಟ ಅಂತೀರಾ ಮೂರು ಪಲ್ಯ , ಕೋಸಂಬರಿ, ಎರಡೆರಡು ಸಿಹಿ, ಇತ್ಯಾದಿ ಇತ್ಯಾದಿ .. ಊರಿನವರು ಕುಳಿತ ಎಲೆಗಳು ಎಲ್ಲಾ ಖಾಲಿಯಾಗಿದ್ರೆ .. ನಮ್ಮ ನಗರ ಮಂದಿ ಕುಳಿತ ಎಲೆಗಳು ಅರೆಬರೆ ತಿಂದು ಉಳಿಸಿದ್ದವು  ಹಾಗೆಂದು ಈ ಹುಡುಗನ ಮನೆಯವರು ತುಂಬಾನೇ ಅನುಕೂಲಸ್ಥರೇನೂ ಅಲ್ಲ . ಖರ್ಚು ಮಾಡೋದು ಹುಡುಗಿಯ ಮನೆಯವರಲ್ವಾ ಅನ್ನೋ ಅಹಂ/ಉದಾಸೀನ ಅಷ್ಟೇ !!!
ಎರಡನೆಯ ಮದುವೆ ಒಂದು ಸ್ಟಾರ್ ಹೋಟೆಲ್ ಅಲ್ಲಿ .ಹುಡುಗಿ ಒಂದು ಒಳ್ಳೆಯ ಕಡೆ ಕೆಲಸದಲ್ಲಿದೆ . ಹುಡುಗ ಕೂಡ ಚೆಂದದ ಕೆಲಸದಲ್ಲಿದ್ದಾನೆ . ದೇವಸ್ಥಾನದಲ್ಲಿ ಮದುವೆ ಮುಗಿಸಿಕೊಂಡು ಹೋಟೆಲ್ ಅಲ್ಲಿ ಊಟಕ್ಕೆ ಹೇಳಿದ್ದಾರೆ .ಮದುವೆ ಮುಗಿದ ಕೂಡಲೇ ಕೊಬ್ಬರಿಸಕ್ಕರೆ ಹಂಚಿ ಸಿಹಿ/ಖುಷಿ ಹಂಚಿಕೊಂಡು ಹೋಟೆಲ್ಗೆ ಬಂದ್ರು . ಊಟ ಕೂಡ ಹಿತಮಿತ . ರುಚಿರುಚಿಯಾದ್ರೂ ಚೆಲ್ಲುವಷ್ಟಲ್ಲ .. ಹುಡುಗ ಹುಡುಗಿ ಹಾಗೂ ಮನೆಯವರಿಗೆ ದುಡ್ಡಿನ ಬೆಲೆ ತಿಳಿದಂತೆ . ಒಂದು ಪಂಕ್ತಿಯವರು ಊಟ ಮಾಡುವಾಗ ಊಟದ ಮನೆಯ ಬಾಗಿಲು ಮುಚ್ಚಿ ಎಲ್ಲಾ ತೆಗೆದು ಶುಚಿ ಮಾಡುವರೆಗೂ-ಮಾಡಿ ಮತ್ತೆ ಕರೆಯುವವರೆಗೂ ಊಟಕ್ಕೆ ಯಾರೂ ಸುಳಿಯಲೇ ಇಲ್ಲ !!
ಮೊದಲೆಲ್ಲಾ ಅಮೆರಿಕನ್ ಕಲ್ಚರ್ ಅಂತ ಅದನ್ನ ಹಿಂಬಾಲಿಸ್ತಾ ಬಹಳ ಮಂದಿ ನಾವುಗಳು(!!) ಈಗ ಮತ್ತೆ ನಮ್ಮದೇ ಸಂಸ್ಕೃತಿ ಚೆಂದ ಎಂದು ಅದನ್ನೇ ಹಿಂಬಾಲಿಸುವ ಹಂತ ತಲುಪಿದ್ದೇವೆ . ಮದ್ವೆ ಆಗೋದು ಒಂದೇ ಸಾರಿ ನಿಜವೇ .. ಆದರೆ ಇಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಅರಿವುದು ನಮ್ಮ ಕೈಲೆ ಇದೆ ಅಷ್ಟೇ..
ಆದ್ರೂ ಒಂದಂತೂ ಚೆಂದ ಕಣ್ರೀ. ಎರಡೂ ಮದ್ವೆಯಲ್ಲೂ ಪುಟ್ಟ ಮಕ್ಕಳ ಅಮ್ಮಂದಿರು/ಅಜ್ಜಿಯಂದಿರು ಬಟ್ಟಲಲ್ಲಿ ಅನ್ನ ಹಿಡಿದು ತಮ್ಮ ಚಿಲ್ಟಾರಿಗಳಿಗೆ "ಮಮ್ಮು" ತಿನಿಸ್ತಾ ಇದ್ದದ್ದು  ಒಂದೆಡೆ 'ಲೇ ಅಮ್ಮಿ , ಒಂದ್ ಬಟ್ಲಗೆ ಒಸಿ ಅನ್ನ ಹಾಕೋಡಮ್ಮಿ , ಮಗಿಗೆ ಉಣ್ಣಿಸಿಬುಡ್ತಿನಿ " ಅಂದ್ರೆ ,ಮತ್ತೊಂದೆಡೆ "ಒಂದು ಬೋವೆಲ್ಗೆ ಒಂಚೂರು ವೈಟ್ ರೈಸ್ ಹಾಕಿ ಕೊಡ್ತೀರಾ ಪ್ಲೀಸ್ ಮಗುಗೆ ಊಟ ಮಾಡಿಸೋಕೆ " ಅಂತಿದ್ರು ಅಷ್ಟೇ ))
ಮನಸ್ಸು ನೀಲಿ ನೀಲಿ ಆ ಬಾನಿನಂತೆ ))Feeling ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ )))))
ಮಕ್ಕಳು ಸಣ್ಣವರಿದ್ದಾಗ ಹೊರಗಡೆ ಊಟಕ್ಕೆ ಹೋದ್ರೆ ಬಹಳಷ್ಟು ಸಾರಿ ತೆಗೆದುಕೊಂಡಿದ್ದು ಹೆಚ್ಚಾಗ್ತಾ ಇತ್ತು. ಒಮ್ಮೊಮ್ಮೆ ಚೆನ್ನಾಗಿ ಊಟ ಮಾಡ್ತಾ ಇದ್ದ ಮಕ್ಕಳು ಒಮ್ಮೊಮ್ಮೆ ಬಡಿಸಿಕೊಳ್ಳುವ ಮೊದಲೇ ಬಹಳಷ್ಟು ಉಳಿಸಿಬಿಡ್ತಾ ಇದ್ರು .. ಅದ್ಯಾಕೋ ಅನ್ನ ಎಸೀಬೇಕು ಅಂದ್ರೆ ಸಂಕಟ ಆಗೋಗುತ್ತೆ . ಸರಿ ಬಡಿಸಿಕೊಳ್ಳದೆ ಉಳಿದದ್ದನ್ನ "ಪ್ಯಾಕ್ " ಮಾಡೋಕೆ ಹೇಳ್ತಾ ಇದ್ವಿ .. ಕೆಲವೆಡೆ ಇವ್ಯಾವೋ ಅನ್ನ ಕಾಣದವೇನೋ ಅನ್ನೋ ಲುಕ್ ಕೊಟ್ರೆ ಮಾಮೂಲಾಗಿ ಹೋಗೋ ಕಡೆ ಕಟ್ಟಿ ಕೊಡ್ತಾ ಇದ್ರು .. ಮೊದಮೊದಲು ಮಕ್ಕಳಿಗೆ ಒಂದ್ ತರ ಅನಿಸ್ತಾ ಇತ್ತೇನೋ . uneasy ಆಗಿ ಮುಖ ನೋಡ್ತಾ ಇದ್ರು . ದೊಡ್ಡವರಾದ ಮೇಲೆ ಉಳಿಸೋದು ಕಡಿಮೆಯಾದ್ರೂ ಅಪ್ಪಿ ತಪ್ಪಿ ಹೆಚ್ಚು ಅನಿಸಿದರೆ 'ಅಪ್ಪ, ಪ್ಯಾಕ್ ಮಾಡಿಸಿಬಿಡು" ಅಂತಾರೆ ಯಾವುದೇ ಮುಜುಗರ ಇಲ್ಲದೆ. ಮನೆಯಲ್ಲಿ ಕೂಡ ಎಷ್ಟ್ ಬೇಕೋ ಅಷ್ಟೇ ಹಾಕಿಕೊಂಡು ತಿಂತಾರೆ . ಮದ್ವೆ ಮನೆಗಳಿಗೆ ಹೋದರೆ ಯಾವುದೇ ಇರುಸುಮುರುಸು ಇಲ್ಲದೆ ಬೇಕಿದ್ದನ್ನ ಮಾತ್ರ ಬಡಿಸಿಕೊಳ್ಳುತ್ತಾರೆ ... ಅನ್ನದ ಬೆಲೆ ಅರಿತಂತೆ ಊಟ ಮಾಡುತ್ತಾರೆ .. ಎಲ್ಲೋ ಒಂದು ಕಡೆ ಗೆದ್ದಂತೆ 
ಎಸೆಯದೆ ಉಳಿಸಿದ್ದು ಬೆಳೆದಷ್ಟಕ್ಕೆ ಸಮ ಅನ್ನೋ ಪಾಠ ಕಲಿತಂತೆ 
ಮನಸ್ಸು ನೀಲಿನೀಲಿ ...ಥೇಟ್ ಆ ಬಾನಿನಂತೆ )))))
ನೆನ್ನೆ ಸಂಜೆ ಎಂದಿನಂತೆ ನಮ್ಮನೆ ದೇವ್ರು ನಾನು ಒಂದು ಸಣ್ಣ ರೌಂಡ್ ಹೋಗಿದ್ವಿ . ತರೋಕೆ ಅಂತ ಏನಿಲ್ಲದೆ ಹೋದ್ರು ಪ್ರತಿದಿನ ಸುಂಸುಮ್ನೆ ಹಾಗೆ ಒಂದು ಸಣ್ಣ ಸುತ್ತು ಹಾಕಿ ಬರೋದು ವಾಡಿಕೆ .. ನಾವು ಓಡಾಡುವ ರಸ್ತೆಯಲ್ಲಿ ಸಂಜೆಯಲ್ಲಿ ಕಷ್ಟಸುಖ ಮಾತನಾಡುತ್ತಾ ನಿಲ್ಲೋ ಹೆಣ್ಣುಮಕ್ಕಳು, ಪರಿಚಿತರು 'ಇದೇನ್ ಇವು ದಿನಾ ಊರು ಸುತ್ತುತ್ವೇ! ಇನ್ನ ವಯಸ್ಸಲ್ಲಿ ಇರೋ ಹಂಗೆ ಅಂದ್ಕೊಳ್ತಾರೇನೋ !! ಹಾಗೆ ಸುತೋಕು ಒಂದ್ ಕಾರಣ ಇದೆ ಬುಡಿ . ಮಕ್ಕಳ ಮುಂದೆ ಮಾತನಾಡಲು ಆಗದ ಅವರದೇ ಒಂದಷ್ಟು ವಿಷಯಗಳನ್ನ ಹಾಗು ಮತ್ತೆ ಕೆಲವೊಂದು ಮಾತುಗಳನ್ನ ಮಾತನಾಡಿಕೊಂಡು ಬರ್ತೀವಿ . ನನ್ ಚಿಕ್ ಕೂಸು ಹೇಳ್ತದೆ 'ಅದೇನ್ ನಾಟ್ಕ ಆಡ್ತೀರೋ ಇಬ್ರುವೇ . ಸುತ್ತೋಕೆ ಹೋಗೋಕೆ ಆಸೆ ಅಂದ್ರೆ ನಾವೇನ್ ಬೇಡ ಅಂತೀವಾ ' ಅಂತ!! ಅದ್ಕೆ ನಮ್ಮನೆ ದೇವ್ರು 'ರಸಿಕತೆ ಇಲ್ಲದ ಬಾಳು ಬಾಳಾ ಬಿಡು ಮಗ .. ' ಅಂತ ಅದ್ಯಾವ್ದೋ ಹಳೆ ಸಿನಿಮಾದ ಡೈಲಾಗ್ ಹೊಡೀತಾರೆ. ನಾ ಎಂದಿನಂತೆ 'ಇದಕ್ಕೇನು ಕಮ್ಮಿ ಇಲ್ಲ' ಅಂತ ನಗ್ತೀನಿ . 
ನೆನ್ನೆ ಎಂದಿನಂತೆ ಹೊರಗೆ ಹೋದ್ವಿ . ಮೋರ್ ಹತ್ರ ಹೋದಾಗ ಗೋದಿಹಿಟ್ಟು ಮಾಡಿಸೋಕೆ ಸೋಯಾಕಾಳು ತಂದಿಲ್ಲದೆ ಇದ್ದದ್ದು ನೆನಪಿಗೆ ಬಂತು . ಹೋದ್ವಿ . ತೆಗೆದುಕೊಂಡು ಬಿಲ್ಲಿಂಗ್ ಹತ್ರ ಬಂದ್ವಿ . ಎಂದಿನಂತೆ ಮಂಜುನಾಥ ಪ್ರಭುಗಳು ಸಣ್ಣಗೆ ಹಾಡು ಹೇಳ್ತಾ ಬಿಲ್ ಹಾಕಿಸ್ತಾ ಇದ್ರು . ನಾ ಪಕ್ಕದಲ್ಲೇ ಇದ್ದೆ . ಬಿಲ್ ಮಾಡ್ತಾ ಇದ್ದ ಹುಡುಗ ' ಸಾರ್ ಬಹಳ ಖುಶಿಯಲ್ಲಿದ್ದಾರೆ ' ಅಂದ . 'ಮನೆಯಲ್ಲಿ ಹಾಡೋಕೆ ಆಗೋದಿಲ್ಲ ಕಣಪ್ಪ ಭಯ ಅವ್ರ್ಗೆ ಅದ್ಕೆ ಇಲ್ ಹಾಡಿಕೊಳ್ತಾರೆ ' ಅಂದೆ. ಹುಡುಗ ನಕ್ಕು ಬಿಟ್ಟ . ಮಂಜು 'ಮನೆಯಲ್ಲಿ ಈ ಹಾಡೆಲ್ಲ ಎಲ್ ಹೇಳನ ಮಹರಾಯ , ಮನೆಯಲ್ಲಿ ಬೇರೇನೇ ಹಾಡು ಹೇಳೋದು' ಅಂದ್ರು. 'ಯಾವ್ ಹಾಡು ಸಾರ್' ಅಂದ ಹುಡುಗ .. 'ಓ ನಿಂಗಿನ್ನೂ ಮದ್ವೆ ಆಗಿಲ್ಲ ಅಲ್ವ ಮನೆಯಲ್ಲಿ ಹಾಡೋದು 'ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ' ಅಂತ !!' ಅಂದ್ರು. ಹುಡುಗ ಮತ್ತೆ ನಕ್ಕ. ಪಕ್ಕದಲ್ಲೇ ನಿಂತಿದ್ದ ಹಿರಿಯ ಹೆಣ್ಣುಮಗಳೊಬ್ಬರು 'ಪುಣ್ಯ ಮಾಡಿದ್ದೀಯಾಮ್ಮ , ನಗಿಸೋಕೆ ಅಂತ್ಲೆ ದುಡ್ಡು ಕೊಡೊ ಕಾಲದಲ್ಲಿ ಹೊಟ್ಟೆ ತುಂಬಾ ನಗೋದಕ್ಕೆ ಪುಣ್ಯ ಮಾಡಿರಬೇಕು .. ಹಿಂಗೇ ಇರಿ' ಅಂದ್ರು !! 'ಥ್ಯಾಂಕ್ಸ್ ಅಮ್ಮ' ಅಂದ್ರು ಮಂಜು . 
ಬದುಕು ಬನದಂತೆ .. ಹಸಿರಾಗಿಸಿಕೊಳ್ಳೋದು ಬರಡಾಗಿಸಿಕೊಳ್ಳೋದು ನಮ್ಮದೇ ಆಯ್ಕೆ ಅನಿಸುವಂತೆ 
And I Smile as ever 

Wednesday 12 July 2017

ಕೆಲವೊಮ್ಮೆ ಹೀಗೂ ಅನಿಸುತ್ತದೆ ಗೆಳೆಯ...ಇಂತಹ ಒಂದು ಸಮಯದಲ್ಲಿ ನೀನು ನನ್ನ ಬಳಿ ಇರಬೇಕೆಂದು...ಕೆಲವೇ ಕ್ಷಣಗಳಾದರೂ ನನ್ನ ತಲೆ ನಿನ್ನ ಎದೆಯ ಮೇಲಾನಿಸಬೇಕೆಂದು ..ನಿನ್ನ ಬಾಹುಗಳು ನನ್ನ ಸುತ್ತುವರಿದಿರಬೇಕೆಂದು...ನಿನ್ನ ಕೈಗಳು ನನ್ನ ಬಿಚ್ಚ್ಚಿ ಬಿದ್ದ ಮುಡಿಯ ಸವರುತ್ತಿರಬೇಕೆಂದು...ನಿನ್ನ ಉಸಿರು ನನ್ನ ನೆತ್ತಿಯ ಸೋಕುತ್ತಿರಬೇಕೆಂದು ..ನಿರಾಳ ನಿಶಬ್ದದ ನಡುವೆ....ಹೇಳದೆಯೂ...ಕೇಳದೆಯೂ ಎಲ್ಲಾ ಮಾತು ಆಡಿದಂತೆ... ಅರಿತಂತೆ ಅನಿಸಿ...ಮನದ ಭಾರವೆಲ್ಲ ಇಳಿದು ಹೋದಂತೆನಿಸಿ...ಮತ್ತೀನು ಬೇಡ ಎಂಬಂತೆ...ಅನಂತದಲ್ಲಿ...ಅನಂತವಾಗಿ...))))
ಒಂದ್ ಕಥೆ 
ಶ್ರೀಮಂತ ಇರ್ತಾನೆ. ತನ್ನ ಸಿರಿವಂತಿಗೆಯ ಮೇಲೆ ಅವನಿಗೆ ಬಹಳಾನೇ ಅಭಿಮಾನ.ತನ್ನ ಇಡೀ ತೋಟ ಸುತ್ತುತ್ತಾ, ತನ್ನ ಬಗ್ಗೆ ತಾನೇ ಹೆಮ್ಮೆ ಪಡೋದು ಅವನ ಹವ್ಯಾಸಗಳಲ್ಲಿ ಒಂದು ! 
ಒಮ್ಮೆ ಹೀಗೆ ಸುತ್ತುವಾಗ ತೋಟದಿಂದ ಸ್ವಲ್ಪ ಮುಂದೆ ಒಂದು ಗುಡಿಸಲಲ್ಲಿ ಒಬ್ಬ ಬಡ ರೈತ ಕುಳಿತಿರ್ತಾನೆ..ತನ್ನ ಕೈಲಿ ಹಿಡಿದ ಮುಸುಕಿನ ಜೋಳವನ್ನ ದೇವರಿಗೆ ಧನ್ಯವಾದ ಹೇಳಿ ತಿಂತಾ ಇರ್ತಾನೆ..ಬಂದ ಸಿರಿವಂತನಿಗೆ ಸಾಮಾನ್ಯ ಔದಾರ್ಯದಿಂದ ಔಪಚಾರಿಕವಾಗಿ 'ತಿನ್ನುವೆಯಾ" ಏನು ಕೇಳುತ್ತಾನೆ .. 
ಶ್ರೀಮಂತ ನಕ್ಕು ಬಿಡ್ತಾನೆ. 'ಅಲ್ಲ ಇರೋದೇ ಒಂದು ಮುಸುಕಿನ ಜೋಳ!! ಅದನ್ನ ನನಗೆ ಬೇಕಾ ಅಂತ ಕೇಳೋದಲ್ಲದೆ ದೇವರಿಗೆ ಕೃತಜ್ಞತೆ ಬೇರೆ ಹೇಳ್ತೀಯಲ್ಲ, ಇನ್ನು ನನ್ನ ಹಾಗಿದ್ದರೆ ದೇವರಿಗೆ ಮಂದಿರವನ್ನೇ ಕಟ್ಟಿಸ್ತಾ ಇದೆಯೇನೋ' ಅಂತಾನೆ.
ರೈತ ಸುಮ್ಮನೆ ನಗ್ತಾನೆ.ಹಾಗೂ ಹೇಳ್ತಾನೆ 'ಈವತ್ತು ನನ್ನ ಕನಸಲ್ಲಿ ದೇವರು ಬಂದಿದ್ದ , ಈ ಕಣಿವೆಯ ಅತಿ ಸಿರಿವಂತ ಸತ್ತು ಹೋಗ್ತಾನೆ ಅಂತ ಹೇಳಿದ" ಅಂತಾನೆ.
ಸಿರಿವಂತ ರೈತನಿಗೆ 'ಕನಸುಗಳು ಅವಿವೇಕಿಗಳಿಗೆ ಮಾತ್ರ ಬೀಳೋದು' ಅಂತ ಸಿಡುಕಿ ಹೇಳಿ ಹೋಗ್ತಾನೆ...
ಆದ್ರೂ ಮನದ ಮೂಲೆಯಲ್ಲೆಲ್ಲೋ ಭಯವಾಗಿ ತನ್ನ ವೈದ್ಯನನ್ನ ಕರೆಯಿಸಿ ಪರೀಕ್ಷೆ ಮಾಡಿಸುತ್ತಾನೆ. ವೈದ್ಯ ಎಲ್ಲಾ ಸರಿಯಿದೆ ಏನೂ ಭಯವಿಲ್ಲ ಅಂತ ಹೇಳ್ತಾನೆ.
ಸಿರಿವಂತ ರಾತ್ರಿ ಇಡೀ ನಿದ್ರೆ ಬಾರದೆ ಹೊರಳಾಡ್ತಾನೆ. ನಸುಕು ಆಗುವುದು ಯಾವಾಗ ಅಂತ ಕಾಯ್ತಾನೆ .ಬೆಳಿಗ್ಗೆ ಬೆಳಿಗ್ಗೆ ಎದ್ದು ರೈತನ ಕನಸಿನ ಬಗ್ಗೆ ತನ್ನಲ್ಲೇ ನಗುತ್ತಾ ಎಂದಿನ ಕೆಲ್ಸ ಶುರು ಮಾಡಲು ಹೊರಡುತ್ತಾನೆ ...
ತೋಟದ ಒಬ್ಬ ಕೆಲಸದವ ಬಂದು 'ಸ್ವಾಮಿ, ನಮ್ಮ ತೋಟದ ಆಚೆ ಮೂಲೆಯಲ್ಲಿದ್ದ ಆ ರೈತ ಸತ್ತು ಹೋದ 'ಅಂತಾನೆ !!!!
ಸಿರಿವಂತನಿಗೆ ಅದ್ಯಾಕೋ ತನ್ನ ಬಗ್ಗೆ ನಾಚಿಕೆ ಎನಿಸುತ್ತದೆ ...
ಸಿರಿವಂತಿಕೆ ಅಂದ್ರೆ ........ ಬರೀ ಹಣವೇ ಅಲ್ಲ!!ಸಿರಿವಂತಿಕೆ ಅಂದ್ರೆ ನಮ್ಮ ಸಹಜೀವಿಗಳ ಜೊತೆ ನಾವು ಹೊಂದಿರೋ ಬಾಂಧವ್ಯ ಕೂಡ ಏನೋ
ಭಾವಾನುವಾದಿಸಿ ಹಂಚಿಕೊಳ್ಳಬೇಕು ಅನಿಸ್ತು ))))

Monday 10 July 2017

ಬಹಳ ಹಿಂದೆ ಒಂದು ಕಥೆ ಓದಿದ್ದೆ " A Glass of Milk " ಅನ್ನೋ ಇಂಗ್ಲಿಷ್ ಕಥೆ . ಒಬ್ಬ ಪುಟ್ಟ ಹುಡುಗ ಬಡತನದಲ್ಲಿ ಪುಸ್ತಕ ಮಾರಿ ಬದುಕ್ತಾ ಇರ್ತಾನೆ . ಅವನ ಓದಿಗೆ ದುಡ್ಡು ಇರೋದಿಲ್ಲ. ಒಮ್ಮೆ ಹೀಗೆ ಪುಸ್ತಕ ಮಾರೋವಾಗ ಬಹಳ ಆಯಾಸವಾಗಿ ಬಿಟ್ಟಿರುತ್ತಾನೆ . ಒಬ್ಬ ಹೆಣ್ಣು ಮಗಳು ಅವನಿಗೆ ಒಂದು ಲೋಟ ಹಾಲು ಕೊಟ್ಟು ಅವನ ಪುಸ್ತಕ ಕೊಂಡು , ಅವನಿಗೆ ಸಹೃದಯತೆ ತೋರಿರುತ್ತಾಳೆ .. ಮುಂದೆಂದೋ ಒಮ್ಮೆ ಅವಳಿಗೆ ಆರೋಗ್ಯ ತಪ್ಪಿದಾಗ ಅವಳು ಆಸ್ಪತ್ರೆ ಸೇರಿದಾಗ ಒಬ್ಬ ವೈದ್ಯ ಅವಳನ್ನ ಆರೈಕೆ ಮಾಡಿ ಕಷ್ಟ ಕಾಲದಲ್ಲಿ ಸಹಾಯ ಮಾಡ್ತಾನೆ. ಆಸ್ಪತ್ರೆಯ ಬಿಲ್ ಹಣವನ್ನ 'ಒಂದು ಲೋಟ ಹಾಲಿಗೆ " ವಜಾ ಮಾಡಲು ಹೇಳುತ್ತಾನೆ . ಇದು ಕಥೆ..
ಈಗ ಇದು ನೆನಪಾಗಲು ಕಾರಣ ಇಷ್ಟೇ ... ನಮ್ಮ ಜೊತೆ ಬೆಳೆದವರೆಲ್ಲ ಈಗ ದೊಡ್ಡವರಾಗಿದ್ದಾರೆ , ಬೇರೆ ಬೇರೆ ಕಡೆ ಇದ್ದಾರೆ , ನಮಗಿಂತ ಕಿರಿಯರೆಲ್ಲ ದೊಡ್ಡ ಹುದ್ದೆಯಲ್ಲಿದ್ದಾರೆ , ... ಇಷ್ಟು ದಿನ ಗೊತ್ತಾಗದೆ ಇದ್ದಿದ್ದು ಮಗನ admision ಅಂತ ಒಂದೆರಡು ಆಫೀಸ್ ಸುತ್ತುವಾಗ ಗೊತ್ತಾಗ್ತಾ ಇದೆ ... ಮೊನ್ನೆ ಹಾಗೆ ಒಂದು ಆಫೀಸ್ಗೆ ಹೋದಾಗ 'ಏ, ಚಿನ್ನಕ್ಕ ಅಲ್ವ " !! " ಹೇ ___ ನೀನು ಇಲ್ಲಿ so and soನ ಮಹರಾಯ ನಾ ಯಾರೋ ಅನ್ಕೊಂಡಿದ್ದೆ ' ... ಮತ್ತೆಲ್ಲ ಕೆಲಸ ನಿಮಿಷಗಳಲ್ಲಿಮುಗಿದದ್ದು ..!! ಎಂದೋ ಹಂಚಿಕೊಂಡ ಊಟ, ಎಂದೋ ಹೇಳಿಕೊಟ್ಟ ಪಾಠ , ಎಂದೋ ನೀಡಿದ್ದ ಸಾಂತ್ವನ, .... ಮತ್ತೆಂದೋ ಬೆನ್ನ ಹಿಂದೆ ಬರುತ್ತದೆ ... (ಅಪ್ಪ ಅಮ್ಮ ಮಾಡಿದ ಪುಣ್ಯ ಮಕ್ಕಳ ಕಾಯುತ್ತೆ ಅಂತ ಇದ್ರೂ ಅಮ್ಮ) ಸ್ವರ್ಗ ನರಕ ಎಲ್ಲ ಇಲ್ಲೇ ನಾವು ಮಾಡಿದ ಕೆಲಸದಲ್ಲೇ, ನಾವು ನೀಡಿದ ಪ್ರೀತಿಯಲ್ಲೇ ..... and again, as i always say, am blessed..))))

Tuesday 4 July 2017

ಮೊನ್ನೆ ಒಂದೆರಡು ದಿನ ರಜ ಇತ್ತು ಅಂತ ಎಲ್ಲಾ ಮೈದುನನ ಮನೆಯಲ್ಲಿ ಕ್ಯಾಂಪ್ ಹಾಕಿದ್ವಿ . ಒಟ್ಟೊಟ್ಟಿಗೆ ಒಂದೆರಡು ದಿನ ರಜ ಇದ್ರೆ ಆಗೊಮ್ಮೆ ಈಗೊಮ್ಮೆ ಈ ತರ ಕ್ಯಾಂಪಿನ್ಗಳು ನಡಿತಾವೆ . ಮೊನ್ನೆ ಹೋದಾಗ ಅತ್ತೆ ಬೆಳಿಗ್ಗೆಬೆಳಿಗ್ಗೆ ಎದ್ದು ಹಂಡೆ ಒಲೆ ಉರಿ ಹಾಕ್ಕಿದ್ರು . ಹಂಡೆ ನೀರಲ್ಲಿ ಬಿಸಿಬಿಸಿ ನೀರ್ ಹುಯ್ಕೊಳ್ಳಿ... ದಿನಾ ಆತ್ರಕ್ಕೆ ಆ ಸೋಲಾರ್, ಗ್ಯಾಸ್ ಗೀಸರ್ ನೀರ್ ಹುಯ್ಕೊಳ್ತೀರಾ , ಅದೇನ್ ಸ್ನಾನ ಮಾಡ ಆಟನೋ ಅಂದ್ರು . 
ನನಗಿನ್ನೂ ನೆನಪಿದೆ . ಅಜ್ಜಿ ಮನೆಗೆ ಹೋದಾಗ ಅತ್ತೆ ಬಿಸಿಬಿಸಿ ನೀರು ಎರೆಯುತ್ತಾ ಇದ್ದಿದ್ದು . ದೊಡ್ಡ 'ಕೊಳದಪ್ಪಲೆ' ಹಿಡಿದು ಸಾಕು ಅಂತ ಕಣ್ಣಲ್ಲಿ ನೀರು ತುಂಬೋವರೆಗೂ ಹಾಕ್ತಾ ಇದ್ರು . ಕೆಂಪುಕೆಂಪಾಗಿ ಹೊರ ಬಂದರೆ ದೃಷ್ಟಿ ಆಗ್ಗುತ್ತೆ ಅಂತ ಎಡ ಹುಬ್ಬಿನ ಮೇಲೊಂದು ಒಲೆಯ ಮಸಿ ಹಚ್ತಾ ಇದ್ರು ! ಬಿಸಿಬಿಸಿ ಅನ್ನದ ಮೇಲೆ ಇರೋಬರೋ ಎಲ್ಲಾ ತರಕಾರಿ ಹಾಕಿದ ಸಾಂಬಾರು , ಒಂಚೂರು ತುಪ್ಪ ಹಾಕಿ ತಿಂದ್ರೆ "ಮಲಗಿ ಬಿಡು ರಾಣಿ, ನಿಮ್ ಮಾಮ ಇರ್ತಾರೆ. ಹೊರಗೆ ಬಿಸಿಲಿಗೆ ಹೋಗ್ಬೇಡ ' ಅಂತ ಹೇಳಿ ಕೆಲ್ಸಕ್ಕೆ(ಟೀಚರ್) ಹೋಗ್ತಾ ಇದ್ರು . ಮಂಜು ಹೇಳ್ತಾರೆ "ಹಂಗೆ ತಿಂದುಂಡು ಆರೈಕೆ ಮಾಡಿಸಿಕೊಂಡು ಬೆಳೆದಿದ್ದಕ್ಕೆ ನೀ ಇನ್ನೂ ಹಿಂಗೇ (ಗುಂಡಗುಂಡಗೆ ಅಂತ ಮನಸಲ್ಲಿ ಅಂದ್ಕೊಳ್ತಾರೆ ಜೋರಾಗಿ ಹೇಳಿದ್ರೆ ಎಲ್ಲಿಯ ಗ್ರಹಚಾರ ಅಂತ ಆರೋಗ್ಯವಾಗಿ ಅಂತ ಸೇರಿಸ್ತಾರೆ ಅಷ್ಟೇ!) ಇರೋದು ಆರೋಗ್ಯವಾಗಿ ' ಅಂತ ..
ನಿಜವೇನೋ... ಆ ತ್ರಾಣ, ಶಕ್ತಿ, ದೈಹಿಕ ಹಾಗು ಮಾನಸಿಕ ಸ್ಥಿರತೆ ಎಲ್ಲದಕ್ಕೂ ಗಿಡವಾಗಿದ್ದಾಗ ಮಾಡುವ ಆರೈಕೆಯೇ ಕಾರಣವೇನೋ ಅನಿಸುವಂತೆ ... nostalgic memories......
ಮನಸ್ಸು ನೀಲಿನೀಲಿ ಥೇಟ್ ಆ ಬಾನಿನಂತೆ .. ಅಲ್ಲೆಲ್ಲೋ ಮೇಲೆ ಅತ್ತೆ, ಅಜ್ಜಿ, ಮಾಮ ನಿಂತು ನೋಡಿ ನಕ್ಕಂತೆ
ಈವತ್ತು ಆಷಾಡದ ಮೊದಲ ಶುಕ್ರವಾರ . ನೆನ್ನೆ ಹೂ ತರೋಕೆ ಹೊರಟಿದ್ವಿ . ಪಕ್ಕದ ಮನೆಯ ಹಿರಿಯಾಕೆ ಬಂದು 'ನಮ್ ಮನೆಯವ್ರಿಗೆ ಬೆನ್ನು ನೋವು ಅಂತ ಮಲಗಿದ್ದಾರೆ. ನಮಗೂ ಒಂಚೂರು ಹೂ ತಂದ್ಬಿಡಿ ಮಂಜುನಾಥ್' ಅಂದ್ರು . ಮಂಜು 'ಆಯ್ತ್ ಬಿಡಿ ಅಮ್ಮ, ತರ್ತೀನಿ ' ಅಂದ್ರು .
ಆಷಾಢದಲ್ಲಿ ಹೆಣ್ಣು ದೇವರ ನೋಡು(ಪೂಜಿಸು) ಶ್ರಾವಣದಲ್ಲಿ ಗಂಡು ದೇವ್ರನ್ನ ನೋಡು (ಪೂಜಿಸು) ಅನ್ನೋದು ಒಂದ್ ಪ್ರತೀತಿ ನಮ್ ಕಡೆ..ಅದರಲ್ಲೂ ಮೈಸೂರಲ್ಲಿ ಆಷಾಢ ಅಂದ್ರೆ ಚಾಮುಂಡಿ ಬೆಟ್ಟದ ದೇವಿಗೆ ವಿಜೃಂಭಣೆಯ ಪೂಜೆ . ಸಂಭ್ರಮ ಇದ್ರೂ ಇತ್ತೀಚಿನ ಒಂದಷ್ಟು ವರ್ಷಗಳಲ್ಲಿ ಇದು ಬಹಳ ಹೆಚ್ಚಾಗಿ ಬಿಟ್ಟಿದೆ. ಲಕ್ಷಾಂತರ ಜನ ಚಾಮುಂಡಿಯ ದರ್ಶನಕ್ಕೆ ಬರ್ತಾರೆ . ಬೆಟ್ಟಕ್ಕೆ ಈಗ ಖಾಸಗಿ ವಾಹನ ಕೂಡ ಬಿಡೋದಿಲ್ಲ . ಲಲಿತಾಮಹಲ್ ಬಳಿ ಗಾಡಿ ನಿಲ್ಲಿಸಿ ಅಲ್ಲಿಂದ ಸರಕಾರೀ ವಾಹನದಲ್ಲಿ ಹೋಗಬೇಕು
ಹೂ ತರೋಕೆ ಹೊರಟವಳು ಮತ್ತೇನೋ ಹೇಳ್ತ ಕುಳಿತೆ ಅಲ್ವೇ !...ಸರಿ ಹೂ ತರೋಕೆ ಹೊರಟ್ವಿ . ಅದೇನ್ ರಶ್ ಅಂದ್ರೆ ನಾಳೆಯೇನಾದ್ರು ಲಕ್ಷ್ಮಿ ಪೂಜೆಯೋ ಗೌರಿ ಪೂಜೆಯೋ ಅಂತ ಗೊಂದಲಗೊಳ್ಳುವಷ್ಟು ! ಹೂವಿನ ಬೆಲೆಯೂ ಏರಿಕೆಯಾಗಿತ್ತು . ನಮ್ ಮನೆಯಲ್ಲಿ ವ್ಯಾಪಾರ ಮಾಡೋದು ಮಂಜು . ನಾನು ಪಕ್ಕದಲ್ಲಿರ್ತೀನಿ ಅಷ್ಟೇ ! ನಮಗೆ ಅಂತ ಸೇವಂತಿಗೆ , ಕನಕಾಂಬರ, ಗುಲಾಬಿ ತೆಗೆದುಕೊಂಡ್ವಿ. 'ಪಕ್ಕದ ಮನೆ ಅಮ್ಮ ಹೇಳಿದ್ದಾರಲ್ಲ ಅವ್ರಿಗೂ ಇಲ್ಲೇ ತಗೋಳಪ್ಪಾ' ಅಂದೆ . ನೀ ಒಂದ್ ನಿಂಷ ಇಲ್ಲೇ ನಿಂತಿರು ಬಂದೆ ' ಅಂತ ಹೇಳಿ ಆ ಜನಸಂದಣಿಯೊಳಗೇ ನುಗ್ಗಿ ಹೋಗಿ ಹೂ ತಂದ್ರು .. ನಾ ಒಂಚೂರು ರೇಗಿದೆ . ಇಲ್ಲೇ ತಂದಿದ್ರೆ ಆಗ್ತಾ ಇರ್ಲಿಲ್ವ ಅಂತ . ಮಂಜು ಹೇಳಿದ್ರು 'ನಮಗೆ ಅಂದ್ರೆ ಅಪ್ಪಿತಪ್ಪಿ ಒಂದಷ್ಟು ಹೆಚ್ಚುಕಡಿಮೆಯಾದರೂ ಪರವಾಗಿಲ್ಲ ಕಣಮ್ಮ, ಒಬ್ರು ಒಂದು ಕೆಲಸ ಹೇಳಿದಾಗ ಅದನ್ನ ಸರಿಯಾಗಿ ಮಾಡಬೇಕು. ನಿನಗೆ ಏನ್ ಖುಷಿ ಅನಿಸ್ತೋ ನೀ ತಗೊಂಡೆ . ಅವ್ರಿಗೆ ಇನ್ನೂ ಚೆನ್ನಾಗಿರೋದು ಸಿಗಬಹುದೇನೋ ಅಂತ ಒಳಗೆ ಹೋದೆ ಅಷ್ಟೇ. ನಾಳೆ ನೀನು ಬಾಗಿಲಿಗೆ ಹಾಕಿದ ಹೂವು ಅವರಿಗೆ ತಂದ ಹೂಗಿಂತ ಚೆನ್ನಾಗಿ ಕಂಡ್ರೆ ಅವರು ತಪ್ಪು ತಿಳೀತಾರೆ ಅಲ್ವ. ... ಇತ್ಯಾದಿ ಇತ್ಯಾದಿ ' ಹೇಳಿದ್ರು .
ಮದ್ವೆಯಾಗಿ ಸುಮಾರು ೨೫ ವರ್ಷ ಮತ್ತೆ ಅದಕ್ಕೂ ಮೊದಲು ಒಂದ್ಮೂರು ವರ್ಷ ಒಟ್ಟೊಟ್ಟಿಗೇ ಬೆಳೆದ್ವಿ .. ಈ ಮನುಷ್ಯ ಕಲಿತಾ ಕಲಿತಾ ಪಾಸ್ ಆಗಿ ಮುಂದ್ಮುಂದೆ ಹೋದ್ರೆ, ನಾ ಇನ್ನೂ ಅಲ್ಲೇ ಇದ್ದೀನಿ ಆಗೊಂದು ಈಗೊಂದು ಪಾಠ ಕಲಿತಾ ... 
ಅಂದ್ ಹಾಗೆ ಈವತ್ತು ಆಷಾಡದ ಮೊದಲ ಶುಕ್ರವಾರ ಯಾವುದಾದ್ರೂ ಒಂದು ಹೆಣ್ಣು ದೇವರ ಗುಡಿಗೆ ಹೋಗಿ ಕೈಮುಗಿದ್ರೆ ಒಳ್ಳೆಯದಾಗುತ್ತದಂತೆ 
ದಿನಪತ್ರಿಕೆ ಹಾಕೋಕೆ ಒಬ್ಬ ಹುಡುಗ ಬರ್ತಾ ಇದ್ದ. ೮ನೇ ತರಗತಿ ಹುಡುಗ . ದಿನಾ ನಾ ಬಾಗಿಲಿಗೆ ನೀರು ಹಾಕ್ವಾಗ್ಲೊ ರಂಗೋಲಿ ಹಾಕ್ವಾಗ್ಲೊ ಬರ್ತಾ ಇದ್ದ. ನಾನು ಪೇಪರ್ ಇಸ್ಕೊಂಡ್ 'ಥ್ಯಾಂಕ್ಸ್ ಕಣೋ'ಅಂದ್ರೆ ,ಒಂದು ಚೆಂದದ ನಗೆ ಎಸೆದು ಹೋಗ್ತಾ ಇದ್ದ . ಪರೀಕ್ಷೆ ಆಯ್ತಾ? ಶಾಲೆ ಶುರು ಆಯ್ತಾ ಅಂತ ಕೇಳಿದ್ರೆ ಉತ್ತರಿಸಿ ಹೋಗ್ತಾ ಇದ್ದ. ನಾನು ಪೇಪರ್ ಬಿಲ್ ಕೊಡುವಾಗ ಒಂದ್ ೧೦ ರೂಪಾಯಿಯೋ ೧೫ ರೂಪಾಯಿಯೋ ಚಿಲ್ಲರೆ ಉಳಿದರೆ 'ಇಟ್ಕೊಂಡು ಪೆನ್ನೋ ಬುಕ್ಕೊ ತಗೋಳೋ ಮರಿ' ಅಂತ ಹೇಳ್ತಾ ಇದ್ದೆ . ಮೊದಮೊದಲು ಒಂದಷ್ಟು ಕನ್ಫ್ಯೂಸ್ಡ್ ಆಗಿ ನೋಡಿ ಆಮೇಲೆ ಆಮೇಲೆ ತೆಗೆದುಕೊಳ್ತಾ ಇದ್ದ "ಥ್ಯಾಂಕ್ಸ್ ಆಂಟಿ" ಅಂತಿದ್ದ. ಮತ್ತದೇ ನಗು ಎಸೆದು ಹೋಗ್ತಾ ಇದ್ದ.
ಈಗೊಂದ್ ನಾಲ್ಕು ತಿಂಗಳಿಂದ ಬೇರೆ ಹುಡುಗ ಪೇಪರ್ ಹಾಕ್ತಾ ಇದ್ದ. ಅವ್ನು ಮೊದಲು ಬರ್ತಾ ಇದ್ದವನಿಗಿಂತ ಸ್ವಲ್ಪ ಸಣ್ಣವನೇ ಏನೋ. ಪೇಪರ್ ಸ್ವಲ್ಪ ತಡವಾಗಿ ತರ್ತಾ ಇದ್ದ. ಗೇಟ್ಗೆ ಸಿಗಿಸದೆ ಎಸೆದು ಹೋಗ್ತಾ ಇದ್ದ . ಒಂದೆರಡು ಬಾರಿ ಹೇಳಿದ ಮೇಲೆ ಗೇಟ್ಗೆ ಸಿಕ್ಕಿಸಿ ಹೋಗೋಕೆ ಶುರು ಮಾಡಿದ. ಒಂದೆರಡು ತಿಂಗಳು ಪೇಪರ್ ದುಡ್ಡು ಪೇಪರ್ ಏಜೆಂಟೇ ಬಂದು ತೆಗೆದುಕೊಂಡು ಹೋದ್ರು. ಕಳೆದ ತಿಂಗಳು ಈ ಹುಡುಗನಿಗೆ ದುಡ್ಡು ಕೊಟ್ಟೆ. ಸರಿ ಚಿಲ್ಲರೆ ಒಂದ್ ೧೦ ರೂಪಾಯಿ ಉಳೀತು. "ನೀನೆ ಇಟ್ಕೊಳ್ಳೋ ಪೆನ್ ಏನಾದ್ರೂ ತಗೋ 'ಅಂದೆ. ಮುಖ ನೋಡಿದ,ಆಮೇಲೆ ತೆಗೆದುಕೊಂಡ. ನಡುವೆ ಒಂದು ದಿನ ಕೃತಿಗೆ ತಿಂಡಿ ಮಾಡ್ತಾ ಇದ್ದೆ . ಬೆಲ್ ಮಾಡಿದ ಪೇಪರ್ ಹುಡುಗ 'ಆಂಟಿ,ಈವತ್ತು ನನ್ನ ಹುಟ್ಟಿದ ದಿನ ಒಂದ್ ೧೦ ರೂಪಾಯಿ ಕೊಡಿ' ಅಂದ. ಒಂದ್ ಕ್ಷಣ ರೇಗ್ತು! ಏನ್ ಇವನೇನ್ ನನ್ ಹತ್ತಿರ ಕೊಟ್ಟು ಇಟ್ಟಿದ್ದಾನಾ ಅಂತ . (ಪ್ರೀತಿಯಿಂದ ಕೊಡೋದಕ್ಕೂ ಆನ್ ಡಿಮ್ಯಾಂಡ್ ಕೊಡೋದಕ್ಕೂ ವ್ಯತ್ಯಾಸವಿದೆ). ಹೋಗ್ಲಿ ಹುಟ್ಟಿದ ದಿನ ಅಂತಾನೆ ಅಂತ ಕೊಟ್ಟೆ.ತಿಂಡಿ ತಿನ್ತಾ ಇದ್ದ ಪುಟ್ಟಿ 'ಕುಳ್ಳಿಮಾ, ಅಡ್ವಾಂಟೇಜ್ ತಗೊಳ್ತಾ ಇದ್ದಾನೆ ಅವ್ನು . ಇನ್ಮೇಲೆ ಎಂಟರ್ಟೈನ್ ಮಾಡ್ಬೇಡ.. ಬರ್ತ್ಡೇ ಅಂದ್ರೆ ಫ್ರಿಡ್ಜ್ಯಿಂದ ಒಂದು ಚಾಕಲೇಟ್ ಕೊಟ್ಟಿದ್ರೆ ಆಗ್ತಾ ಇತ್ತು" ಅಂದ್ಳು. 'ಹೋಗ್ಲಿ ಬಿಡ್ ಮಗ ಹತ್ ರೂಪಾಯಿ ತಾನೇ' ಅಂದೆ . 'ನಾ ಕೇಳಿದ್ರೆ ನೂರು ಲೆಕ್ಕ ಕೇಳ್ತೀಯಾ ..ನಿನಗೆ ನನ್ ಮೇಲೆ ಪ್ರೀತಿ ಇಲ್ಲ' ಅಂದ್ಳು. 'ಮರ್ಯಾದೆಯಾಗಿ ತಿಂದು ಎದ್ದೇಳು , ಕಾಲೇಜ್ ಗೆ ಟೈಮ್ ಆಯಿತು' ಅಂದೆ ಮುಖ ಊದಿಸಿಕೊಂಡು ಹೋದ್ಲು. ನೆನ್ನೆ ಈ ಬಾರಿಯ ಪೇಪರ್ ಬಿಲ್ ಕೊಟ್ಟೆ . ಚಿಲ್ಲರೆ ಉಳಿಯಲಿಲ್ಲ. ಆ ಹುಡುಗ ಮುಖ ನೋಡಿದ . 'ಚಿಲ್ರೆ ಇಲ್ಲ ಕಣೋ' ಅಂದೆ. 'ನಾ ಕೊಡ್ತೀನಿ ಕೊಡಿ' ಅಂದ. ಆಶ್ಚರ್ಯವಾಯ್ತು . 'ಮುಂದಿನ ತಿಂಗ್ಳು ಕೊಡ್ತೀನಿ ಬಿಡು' ಅಂದು ಒಳಗೆ ಬಂದೆ . ಬೆಳಿಗ್ಗೆ ಪೇಪರ್ ಗೇಟ್ಗೆ ಸಿಕ್ಕಿಸದೆ ಮೆಟ್ಟಿಲ ಮೇಲೆ ಬಿದ್ದಿತ್ತು !!!
ಅದೆಷ್ಟು ವ್ಯತ್ಯಾಸ ಅಲ್ವೇ ಮನುಷ್ಯರ ನಡುವೆ. ಒಬ್ಬ ಕೊಟ್ಟಿದ್ದಕ್ಕೆ ಕೃತಜ್ಞತೆ ತೋರಿದರೆ , ಮತ್ತೊಬ್ಬ ಅದನ್ನ ಹಕ್ಕು ಎಂಬಂತೆ ತಿಳಿದ ....
ಅದ್ಯಾಕೋ ಒಮ್ಮೊಮ್ಮೆ ಪ್ರೀತಿ/ವಿಶ್ವಾಸ ಕೂಡ ಸಲ್ಲದೇನೋ ಅನಿಸುವಂತೆ.. ಸಲ್ಲುವವರಿಗೆ ಮಾತ್ರ ಸಲ್ಲಿಸಬೇಕು ಅನಿಸುವಂತೆ.. ಆದರೆ ಸಲ್ಲುವವರನ್ನ ಗುರುತಿಸುವುದೆಂತು ಎನ್ನುವಂತೂ ತಿಳಿಯದಂತೆ..
ಮನಸ್ಸು ಅದ್ಯಾಕೋ ಮಡುಗಟ್ಟಿದ ಬಾನಿನಂತೆ ....
ಕಥೆ ಹೇಳಿ ಬಹಳ ದಿನಗಳಾಗಿದ್ದವು ಅಲ್ವೇ !  ಇಲ್ಲೊಂದು ಕಥೆ ಕೇಳಿ. ಗೆಳೆಯರೊಬ್ಬರು ಕಳಿಸಿದ್ದು. ಭಾವಾನುವಾದ ನನ್ನದು ಅಷ್ಟೇ 
ಕಾಲೇಜಿನ ತೋಟದಲ್ಲಿ ಅವ್ನು ಗಿಡಗಳಿಗೆ ಪಾತಿ ಮಾಡ್ತಾ ಇದ್ದ. ಜವಾನ ನಂಜಪ್ಪ ಬಂದು ಕರೆದ "ಗೋಪಾಲ, ಪ್ರಿನ್ಸಿಪಾಲರು ಕರೀತಾವ್ರೆ , ಒಸಿ ಆಫೀಸ್ಗೆ ಹೋಗು' ಅಂದ. ಒಂದು ಕ್ಷಣದಲ್ಲೆ ಗೋಪಾಲ ಬೆವೆತು ಹೋದ..ಪ್ರಿನ್ಸಿಪಾಲಮ್ಮ ಸ್ವಲ್ಪ ಕಟ್ಟುನಿಟ್ಟಿನ ಹೆಂಗಸು. ತನ್ನನ್ನು ಕರೆದಿದ್ದಾರೆಂದರೆ ತನ್ನಿಂದ ಏನಾದ್ರೂ ತಪ್ಪಾಗಿದ್ಯಾ ಎಂದು ಒಂದು ವಾರದ, ಒಂದು ತಿಂಗಳ ಹಿಂದಿನ ಕೆಲಸಗಳನ್ನೆಲ್ಲ ಮನದಲ್ಲೇ ತಿರುಗಿಸಿದ ಗೋಪಾಲ!'ಬೇಗ ಹೋಗೋ ಗೋಪಾಲಿ' ಅಂದ ನಂಜಪ್ಪ. ಜೀವವನ್ನ ಕೈಲಿ ಹಿಡಿದು ಗೋಪಾಲ ಆಫೀಸಿಗೆ ಹೋದ. 'ಅಮ್ಮ, ಹೇಳಿ ಕಳಿಸಿದ್ರಿ" ಅಂದ ಹೆದರುತ್ತಲೇ. ಪ್ರಿನ್ಸಿಪಾಲಮ್ಮ ಎಂದಿನ ಕಠಿಣ ದನಿಯಲ್ಲಿ 'ಅಲ್ಲಿರೋ ಪೇಪರ್ ಎತ್ಕೊಂಡು ಓದು' ಅಂದ್ರು.ಇನ್ನೂ ಹೆದರಿದ ಗೋಪಾಲ 'ಅಮ್ಮ ನನಗೆ ಓದೋಕೆ ಬರಕಿಲ್ರ.ನನ್ನಿಂದೇನಾದ್ರು ತ್ಯಪ್ಪಾಗಿದ್ರೆ ಕ್ಷಮಿಸಿ, ಕೆಲ್ಸದಿಂದ ತೆಗಿಬೇಡಿ, ತಿದ್ಕತೀನಿ.ನನ್ನ ಮೊಗಗೆ ಓದೋಕೆ ಇದಕ್ಕಿಂತ ಬ್ಯಾರೇ ಸಾಲೆ ಸಿಕ್ಕಾಕಿಲ್ಲ' ಅತ್ತೆ ಬಿಟ್ಟ. ಪ್ರಿನ್ಸಿಪಾಲಮ್ಮ 'ಅದ್ಯಾಕ್ ಅಷ್ಟೊಂದೆಲ್ಲಾ ಅಂದ್ಕೊಳ್ತೀಯಾ ?ಸ್ವಲ್ಪ ಇರು' ಅಂತ ಇಂಗ್ಲಿಷ್ ಟೀಚರ್ನ ಕರೆದ್ರು.ಅದನ್ನ ಓದೋಕೆ ಹೇಳಿದ್ರು. ಟೀಚರು ಅದನ್ನ ಓದ್ತಾ ಹಾಗೆ ಅರ್ಥ ಹೇಳುತ್ತಾ ಹೋದ್ರು. 
ಈವತ್ತು ಎಂಟನೇ ತರಗತಿಯ ಮಕ್ಕಳಿಗೆ "ಅಮ್ಮನ ದಿನದ" ಬಗ್ಗೆ ಒಂದು ನಿಬಂಧ ಬರೆಯೋಕೆ ಹೇಳಿದ್ವಿ. ನಿಮ್ಮ ಮಗಳು ಬರೆದ ನಿಬಂಧ ಇದು 
"ನಾ ಒಂದು ಕುಗ್ರಾಮದವಳು. ನಮ್ಮೂರಲ್ಲಿ ಈಗ್ಲೂ ಶಿಕ್ಷಣ ಹಾಗು ವ್ಯದ್ಯಕೀಯ ಸೇವೆ ಸಿಗೋದು ಕಡಿಮೆ. ನಮ್ಮಮ್ಮ ನನ್ನನ್ನ ಹೆತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ತೀರಿ ಹೋದಳು.ನನ್ನನ್ನ ಮೊದಲು ಎತ್ಕೊಂಡಿದ್ದು ಅಪ್ಪ. ಅಪ್ಪನ ಮನೆಯವ್ರು ತಾಯಿನ ತಿಂದ್ಕೊಂಡ ಮಗುವನ್ನ(!) ಆಶ್ರಮಕ್ಕೆ ಬಿಟ್ಟು ಮರುಮದುವೆಯಾಗಲು ಅಪ್ಪನಿಗೆ ಹೇಳಿದ್ರು. ಅಪ್ಪ ನನ್ ಮಗಳೇ ನನಗೆ ಎಲ್ಲ ಎಂದು ಮದುವೆ ಆಗಲು ಒಪ್ಪದೇ ಇದ್ದಾಗ. ಆಸ್ತಿಯಲ್ಲಿ ಕವಡೆ ಕಾಸು ಕೂಡ ಸಿಗದೆಂದು ಹೆದರಿಸಿದರು.ಚಿಂತೆ ಮಾಡದ ಅಪ್ಪ ತನ್ನ ಮನೆ, ತನ್ನವರು, ಆಸ್ತಿ, ಎಲ್ಲವನ್ನ ಬಿಟ್ಟು ಇಲ್ಲಿ ಬಂದು ಈ ಶಾಲೆಯಲ್ಲಿ ಮಾಲಿಯಾಗಿ ಸೇರಿ ನನ್ನನ್ನೂ ಇದೇ ಶಾಲೆಗೆ ಸೇರಿಸಿದ್ರು . ತುಂಬಾ ಪ್ರೀತಿಯಿಂದ ಮಮತೆಯಿಂದ ಸಾಕಿದ್ರು. ಯಾರಾದ್ರೂ ಏನಾದ್ರೂ ತಿನ್ನಲು ಕೊಟ್ರೆ ತನಗದು ಇಷ್ಟ ಇಲ್ಲ ಎಂದು ನನಗೆ ತಂದು ಕೊಡ್ತಾ ಇದ್ರು ಅವರ ಇಷ್ಟವಿಲ್ಲ ಎನ್ನುವುದಕ್ಕೆ ಕಾರಣ ನನಗೆ ಹೆಚ್ಚು ಸಿಗಲಿ ಎನ್ನುವುದು ಎಂದು ನಾ ಬೆಳೆಯುತ್ತಾ ಅರಿವಾಗತೊಡಗಿತು!ತನ್ನಿಂದಾದ ಎಲ್ಲವನ್ನೂ ನನಗಾಗಿ ಮಾಡಿದರು. ಅನ್ನಕ್ಕೆ ದಾರಿ, ವಾಸಕ್ಕೆ ಜಾಗ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಮಗಳಿಗೆ ಶಿಕ್ಷಣ ನೀಡೋ ಈ ಶಾಲೆ ಅಂದ್ರೆ ಅವರಿಗೆ ಪ್ರಾಣ. 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ ಅಂತಾರೆ .ಅದೆಲ್ಲ ನಿಜ ಅಂದ್ರೆ ನನ್ನ ಅಪ್ಪನೇ ನನ್ನ ನಿಜವಾದ ಅಮ್ಮ. ಈ ಜಗದ ಶ್ರೇಷ್ಠ ಅಮ್ಮನಾದ ನನ್ನಪ್ಪನಿಗೆ ನನ್ನ ನಮನ. ಅಮ್ಮನ ಬಗ್ಗೆ ಬರಿ ಅಂದ್ರೆ ಅಪ್ಪನ ಬಗ್ಗೆ ಬರೆದ ನಾನು ಫೇಲಾಗಬಹುದೇನೋ?ಆದರೂ ನನಗೆ ಗೊತ್ತಿರೋ ಅಮ್ಮ ನನ್ನ ಅಪ್ಪನೇ!ಅಮ್ಮನಂತಹ ಅಪ್ಪನಿಗೆ ನಮನ " 
ಟೀಚರ್ರು ಓದುವುದನ್ನ ನಿಲಿಸಿದ್ರು. ಕುಸಿದು ಕುಳಿತ ಗೊಪಾಲ ಬಿಕ್ಕಿಬಿಕ್ಕಿ ಅತ್ತ . ಪ್ರಿನ್ಸಿಪಾಲಮ್ಮ ಅವನಿಗೆ ಕುಡಿಯಲು ನೀರಿತ್ತರು. ಹೇಳಿದ್ರು 'ಗೋಪಾಲ, ನಿನ್ನ ಮಗಳಿಗೆ 10/10 ಅಂಕ ಬಂದಿದೆ. ನಾಳೆ ನಮ್ಮ ಶಾಲೆಯಲ್ಲಿ "ಮಾತೃವಂದನಾ ದಿನ ".ನೀನು ನಾಳೆಯ ಮುಖ್ಯ ಅತಿಥಿ ' ಅಂದರು ಬೆನ್ನು ತಟ್ಟುತ್ತಾ . 
ಗೋಪಾಲ ಮೂಕನಾಗಿ ನಿಂತ ಎಂದಿನಂತೆ..ಅಕಳಂತೆ...ಎಂದಿನಂತೆ 
ಅಮ್ಮ ಅಂದ್ರೆ ಕರುಣೆ,ಮಮತೆ, ಪ್ರೀತಿ, ಭರವಸೆ . ಅಮ್ಮನಂತವರು ಅಂದ್ರೆ ಕೂಡ ಅದೇ ಅಲ್ವೇ .. ಅಪ್ಪನೋ, ಅಕ್ಕನೋ, ಅಣ್ಣನೋ, whoever... ಅಂತಹವರಿಗೆ ಒಂದು ನಮನ 
ಮನಸ್ಸೆಲ್ಲಾ ನೀಲಿನೀಲಿ ಆ ಬಾನಿನಂತೆ ))))

Friday 26 May 2017

ಮೆದುಳು ದೇಹದ ಅತಿ ಮುಖ್ಯ ಅಂಗ . ದೇಹ ಒಳಗೆ ತೆಗೆದುಕೊಳ್ಳುವ ಆಮ್ಲಜನಕದ ಶೇಕಡ ೨೦ ರಷ್ಟನ್ನ ಈ ಮಿದುಳೆ ಉಪಯೋಗಿಸಿಕೊಳ್ಳುತ್ತದೆ . (ಹಾಗೆಯೇ ಅದರ ಸರಿಯಾದ ಕೆಲಸಕ್ಕೆ ಅಧಿಕ ರಕ್ತದ ಹಾಗು ಆಹಾರದ ಅವಶ್ಯಕತೆ ಇರುತ್ತದೆ). ಇಲ್ಲವಾದರೆ hypoxia (ಆಮ್ಲಜನಕದ ಕೊರತೆ) ಎದುರಿಸಿ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ .. ಆ ಆಮ್ಲಜನಕದ ಜನಕ ಗಿಡಮರಗಳು ... ಆಮ್ಲಜನಕ ನೀಡುವ ಗಿಡಗಳ ಸಂಖ್ಯೆ ಅಧಿಕವಾಗಲಿ ..ಅಕ್ಷಯವಾಗಲಿ ... 
ಮೆದುಳು ಎನ್ನುವ ಅಂಗಕ್ಕೆ ದೈಹಿಕವಾಗಿ ಆಮ್ಲಜನಕ ಹೇಗೋ ಹಾಗೆ ಅದರ ಸಮರ್ಪಕ ಕೆಲ್ಸಕ್ಕೆ ಪ್ರೀತಿ ಅನ್ನೋ ಆಮ್ಲಜನಕ ಕೂಡ ಅಗತ್ಯ .. ಮನಸಲ್ಲಿ ಪ್ರೀತಿ, ಮತ್ತೊಬ್ಬರೆಡೆಗೆ ಒಂದಷ್ಟು ಕಾಳಜಿ, ಸಹನೆ , ಅವರೂ ನನ್ನ ಹಾಗೆಯೆ ಎನ್ನುವ ಭಾವನೆಗಳ ಗಿಡ ನೆಟ್ಟರೆ ಮೆದುಳು ಭಾವನಾತ್ಮಕವಾಗಿ ಕೂಡ ಚೆಂದ ಕೆಲಸ ಮಾಡುತ್ತದೆ ....... ಪ್ರೀತಿ ಅಕ್ಷಯವಾಗಲಿ ... ಬದುಕು ಸಹನೀಯವಾಗಲಿ .......
ನಗು ವೈರಲ್ ಆಗಲಿ :))))))
ಕಳೆದ ವಾರ ಮೈದುನನ ಮಗಳಿಗೆ ಹುಷಾರಿಲ್ಲ ಅಂತ ಆಸ್ಪತ್ರೆ ಸೇರಿಸಿತ್ತು . ನಾನು ಮಂಜು ದಿನಾ ಸಂಜೆ ಹೋಗಿ ನೋಡಿಕೊಂಡು ಬರ್ತಾ ಇದ್ವಿ . ಮಕ್ಕಳ ವಾರ್ಡು , ಒಂದ್ನಾಲ್ಕು ಮಕ್ಕಳು ಇರ್ತಾ ಇದ್ವು, ಒಂದು ದಿನ ಒಂದು ಡಿಸ್ಚಾರ್ಜ್ ಆದ್ರೆ ಮತ್ತೊಂದು ದಿನ ಒಂದು ಹೊಸ ಕಂದ ಸೇರಿರ್ತಾ ಇತ್ತು. ನಾವು ಹೋದ್ರೆ ಆ ಮಕ್ಕಳನ್ನ ಸುಂಸುಮ್ನೆ ಮಾತನಾಡಿಸಿ ನಗಿಸಿ ಬರ್ತಾ ಇದ್ವಿ. ಮೈದುನನ ಮಗಳು ಕೂಡ ನಾವ್ ಹೋದ್ರೆ ಒಂದಷ್ಟು ಹೊತ್ತು ನಗ್ತಾ ಇರ್ತಿತ್ತು . ಏನೂ ತೆಗೆದುಕೊಂಡು ಹೋಗಿ ಕೊಡದೆ ಇದ್ದರೂ (ಚಾಕಲೇಟ್, ಕೇಕ್ ಎಲ್ಲಾ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಕೊಡುವುದು ಸಲ್ಲ ಎಂದು) ನಾವು ಹೋದ್ರೆ ಮಕ್ಕಳು ಖುಷ್ಖುಷಿಯಾಗಿ ನಗ್ತಾ ಇದ್ವು .. ಒಂದ್ನಾಲ್ಕು ದಿನ ಹೋದ್ವಿ ಐದನೇ ದಿನ ಸಂಜೆ ಮಂಜು ಒಂಚೂರು ಪೆಟ್ಟು ಮಾಡಿಕೊಂಡ್ರು. ಡಾಕ್ಟ್ರು ವಿಶ್ರಾಂತಿ ಬೇಕು ಅಂದ್ರು ಅಂತ ಆಸ್ಪತ್ರೆಗೆ ಹೋಗಲಿಲ್ಲ. ಫೋನ್ ಮಾಡಿ ಪುಟ್ಟಿ ಹೇಗಿದ್ದಾಳೆ ಅಂತ ಕೇಳ್ಕೊಳ್ತಾ ಇದ್ದೆ .. ಮತ್ತೆ ಆಕೆ ಡಿಸ್ಚಾರ್ಜ್ ಆಗೋವರೆಗೂ ಹೋಗಲಾಗಲಿಲ್ಲ..
ನೆನ್ನೆ ಫೋನ್ ಮಾಡಿದ ವಾರಗಿತ್ತಿ "ಅಕ್ಕ, ನೀವು ಮಂಜಣ್ಣ ಬರ್ಲಿಲ್ಲ ಅಂತ ಆ ಪಕ್ಕದ ಬೆಡ್ ಅಲ್ಲಿ ಇದ್ವಲ್ಲ ಆ ಎರಡು ಮಕ್ಳು ಮತ್ತೆ ಅವರಮ್ಮಂದಿರು ಡಿಸ್ಚಾರ್ಜ್ ಆಗ ದಿನಾನೂ ಕೇಳ್ತಾ ಇದ್ರು . ಅವ್ರು ಬಂದ್ರೆ "ಚೆಂದ" ಇರ್ತಿತ್ತು , ಮಕ್ಳು ಒಂಚೂರು ನಗ್ತಾ ಇದ್ವು ಅಂತ. ಹಿಂಗ್ ಹಿಂಗೇ ಏಟಾಗಿದೆ ಅಂದೆ. ತುಂಬಾನೇ ಬೇಜಾರ್ ಮಾಡಿಕೊಂಡ್ರು ..ಬೇಗ ವಾಸಿ ಆಗ್ಲಿ ಅಂತ ಹೇಳ್ತಿದ್ರು ಅಕ್ಕ.. ಟೈಮ್ ಆದ್ರೆ ಮನೆಗೆ ಬಂದು ಹೋಗಿ ಅಕ್ಕ " ಅಂದ್ಲು!!
ಯಾರೋ ಏನೋ ಒಂದೂ ಗೊತ್ತಿಲ್ಲ, ಒಂದೆರಡು ದಿನ ಒಂದು ಗಂಟೆಯಷ್ಟು ಮಾತನಾಡಿಸಿದ್ದು ಬಿಟ್ಟರೆ ಬೇರೇನೂ ಗೊತ್ತಿಲ್ಲ.. ಒಂದೆರಡು ಮಾತು ನಗು ಹಂಚಿಕೊಂಡದಷ್ಟೇ !!! ಅಷ್ಟಕ್ಕೇ ಇಷ್ಟೆಲ್ಲಾ ಹಾರೈಕೆ.. 
ಹಾಗಾದರೆ...ರೆ.....ರೆ.....ಪ್ರತಿ ದಿನ ನೋಡುವ , ಸಿಗುವ ನಮ್ಮವರೇ ಆದವರಿಗೆ ಒಂದೆರಡು ಒಳ್ಳೆಯ ಮಾತು ನಗು ಹಂಚಿದರೆ.... ಜಗದ ತುಂಬಾ ನಗುವೇ ಇರುತ್ತದ್ದೇನೋ ಅಲ್ವೇ !!! 
ಒಂದಷ್ಟು ದಿನಗಳಿಂದ ಮೋಡ ಮಡುಗಟ್ಟಿದ್ದ ಮನಸ್ಸಿನಲ್ಲಿ ವಾರಗಿತ್ತಿ ಆಡಿದ ಮಾತು ಹಸಿರು ಎರಚಿದಂತೆ :)))) 
Once again Life is beautiful.....:))))))))
ಮಗನಿ/ಳಿಗೊಂದು ಪತ್ರ :
ಮಗ,
ಇದೇನು ಮನೆಯಲ್ಲೇ ಇದ್ದೀನಿ ಹೇಳೋದು ಬಿಟ್ಟು ಏನೋ ಕವಿರತ್ನ ಕಾಳಿದಾಸನ ತರ ಬರೀತಾ ಇದ್ದೀಯಾ ಅಂತ ತರ್ಲೆ ನಗು ನಗ್ತೀಯೇನೋ ಅಲ್ವ ?ಹೇಳಿದ್ರೆ ತಾಳ್ಮೆಯಿಂದ ನೀ ಯಾವತ್ತೂ ಕೇಳಿದ್ದೀಯ ಹೇಳು? ಒಂದೋ ನಗ್ತೀಯ ಅಥವ ಏನಾದ್ರೂ ತರ್ಲೆ ಮಾಡಿ ನಗಿಸಿಬಿಡ್ತೀಯ . ನಾನೂ ಆ ಕ್ಷಣದ ನಿನ್ನ ತುಂಟತನಕ್ಕೆ ನಕ್ಕರೂ ಹೇಳಬೇಕಾಗಿದ್ದನ್ನ ಹೇಳದೆ ಉಳಿದ ದುಗುಡದಲ್ಲೇ ಉಳಿದುಬಿಡ್ತೀನಿ .....
ಈಗಷ್ಟೇ ಹುಟ್ಟಿದಂತೆ ಅನಿಸುವ ನೀನು ಆಗಲೇ ನನಗಿಂತ ಎತ್ತರಕ್ಕೆ ಬೆಳೆದು ನಗುವುದ ನೋಡಿದಾಗ ಅದೇನ್ ಹೆಮ್ಮೆ ಅಂತೀಯಾ ! ಬೆಳವಣಿಗೆ ದೈಹಿಕವಾಗಿ ಮಾತ್ರವಲ್ಲದೆ ಬೌದಿಕವಾಗಿ ಕೂಡ ಅನಿಸದಾಗ ಹೆಮ್ಮೆ ದುಪ್ಪಟ್ಟಾಗುತ್ತದೆ. ವಯೋ ಸಹಜ ನಡವಳಿಕೆಗಳನ್ನ ಬೇಡ ಅನ್ನುವಷ್ಟು ಸಣ್ಣಮನಸ್ಸಿನವಳಲ್ಲ ಬಿಡು..ಆದರೂ ದುಡುಕುತನ ಮಾತ್ರ ಸಲ್ಲದು ಕಣ್ ಮಗ .. ಹೆಜ್ಜೆ ಇಡುವ ಮುನ್ನ, ಮಾತನಾಡುವ ಮುನ್ನ ಒಮ್ಮೆ, ಮತ್ತೊಮ್ಮೆ ಯೋಚಿಸಿಬಿಡು .. ನೀನೇ ಸರಿ ಹೆಜ್ಜೆ ಇಡ್ತೀಯ . ಓದುವಿಕೆಯ ಬಗ್ಗೆಯಾಗಲಿ, ನಿನ್ನ ಕಾಲ ಮೇಲೆ ನೀನು ನಿಲ್ಲಬೇಕೆನ್ನುವ ಬಗ್ಗೆಯಾಗಲಿ , ನೈತಿಕ ಸರಿ ದಾರಿಯ ಬಗ್ಗೆಯಾಗಲಿ ನಿನಗೆ ಹೇಳುವ ಅಗತ್ಯ ಬಂದಿಲ್ಲ ಬರುವುದೂ ಇಲ್ಲ ಅಲ್ವ.. ಎಷ್ಟೇ ಆದ್ರೂ ನೀ ನಮ್ಮ ಮಗ/ಳು ಅಲ್ವ.. (ಐಟ್ ಇದಕ್ಕೇನು ಕಮ್ಮಿ ಇಲ್ಲ ಬಿಡು ಅಂದ್ಯ !! :)...
ಆದ್ರೂ ಮಗ, ನೀನು ಎಷ್ಟೇ ದೊಡ್ಡವನಾ/ಳಾದ್ರೂ ನಮ್ಮ ಮುಂದೆ ನೀ ಚಿಕ್ಕವನೆ/ಳೆ .. ಗಾಡಿ ಹತ್ತಿದ ಕೂಡಲೆ ನೀ ಮಗನೆಂದು, ಅಣ್ಣನೆಂದು, ತಮ್ಮನೆಂದೋ , ಯಾರಿಗೋ ನೀ ಬೇಕಾದವನೆ೦ಬುದನ್ನೇ ಮರೆತು ನಿನ್ನದೇ ಲೋಕ ಸೇರಿಬಿಡುವ ನಿನ್ನ ಬಗ್ಗೆ ನನಗೆ ಬೇಸರವಿದೆ. ನಿನಗೆ ಪೆಟ್ಟಾದರೆ ನಿನ್ನ ದೈಹಿಕ ನೋವಿಗಿಂತ, (ನಿನಗಿಂತ !) ಹೆಚ್ಚಾಗಿ ನೋಯುವ ಮನಸ್ಸುಗಳಿವೆ .ನಿನ್ನ ಸಂತಸಕ್ಕೆಂದೇ ಕೊಡಿಸಿರುವ ಗಾಡಿ ನಿನಗೆ ದುಃಖ/ನೋವು ತಂದರೆ ಅದರ ತಪ್ಪಿತಸ್ಥ ಭಾವ ನಮಗೆ ಮಗ ! ಒಮ್ಮೆ ಪೆಟ್ಟಾದರೆ ಆ ಮಾನಸಿಕ ಹಾಗು ದೈಹಿಕ ನೋವು irreversible! .. ನೀ ನಂಬುವುದಿಲ್ಲ ನೀ ಸಣ್ಣವನಿದ್ದಾಗ ನೀ ಆಟ ಆಡುತ್ತಾ ಪೆಟ್ಟು ಮಾಡಿಕೊಂಡರೆ ನಿನ್ನನ್ನೇ ಬೈದರು ಅದೆಷ್ಟೋ ಬಾರಿ ರಾತ್ರಿಗಳಲ್ಲಿ ನಿನ್ನ ಗಾಯವನ್ನ ಸವರಿ ಕಣ್ಣ ಹನಿ ಹನಿಸಿದ್ದು ಉಂಟು . ಅದೆಷ್ಟೋ ಬಾರಿ ಪತ್ರಿಕೆಗಳಲ್ಲಿ ವಯಸ್ಸಿಗೆ ಬಂದ ಮಕ್ಕಳು ಬಿದ್ದು ಏಟು ಮಾಡಿಕೊಂಡರು ಅಂತಲೋ ಅಥವಾ ಮತ್ತಿನ್ನೇನೋ ಓದಿದಾಗ ಹೃದಯ ಬಾಯಿಗೆ ಬಂದಂತೆ ..ಅಪ್ಪ ನೀ ಗಾಡಿ ತೆಗೆದಾಗೆಲ್ಲ ಹೇಳ್ತಾನೆ ಇರ್ತಾರೆ 'driver friendly ಆಗಿ ಗಾಡಿ ಓಡಿಸು' ಅಂತ ಅಲ್ವ ? ಪ್ಲೀಸ್ , ನಿಧಾವಾಗಿರು. ನೀ ಒಬ್ಬರಿಗೆ ಏಟು ಮಾಡಿ ನೋಯಿಸಿದರೂ, ನೀನೇ ಏಟು ಮಾಡಿಕೊಂಡರೂ , ನಿನಗೆ ಮತ್ಯಾರೋ ಏಟು ಮಾಡಿದರೂ ನೋವು ನಿನಗೆ ಅಂತ ನೆನಪಿರಲಿ..
ಅಪ್ಪನದೂ ಇದೇ ಮಾತು .. ನಾನಾದರೋ ಒಂದೆರಡು ಕಣ್ಣ ಹನಿ ಹಾಕಿಯೋ, ಬೈದೊ ಸಮಾಧಾನ ಮಾಡಿಕೊಳ್ಳುತ್ತೇನೆ , ಆದ್ರೆ ಅಪ್ಪ ವಯಸ್ಸಿಗೆ ಬಂದ ಮಕ್ಕಳನ್ನ ಬಯ್ಯಲೂ ಆಗದೆ ಅಳಲೂ ಆಗದೆ ಕೊರಗಿ ಬಿಡುತ್ತಾರೆ .. ಇನ್ನು ನಿನ್ನ ಹಿಂದೆ ಮುಂದೆ ಹುಟ್ಟಿದ ಹಾಗು ನಿನ್ನನ್ನು ಪ್ರೀತಿಸುವ ಎಲ್ಲರಿಗೂ ನೋವಾಗುತ್ತದೆ .. ನೀನಂದ್ರೆ ನಮ್ಮ ಜೀವ ...
ನನಗೆ ಗೊತ್ತು ಇಷ್ಟ್ ಓದೋ ಅಷ್ಟ್ರಲ್ಲಿ ನೀ ನನ್ನ ಅದೆಷ್ಟ್ ಬೈಕೊಂಡಿರ್ತೀಯ ಅಂತ . ಬೈಕೋ, ನೀನಲ್ಲದೆ ಮತ್ಯಾರಾದ್ರು ಬೈದ್ರೆ ಗೊತ್ತಲ್ಲ :)
Love you maga
ನಿನ್ನ
ಅಮ್ಮ..
ಆತ ಆಕೆ ಬೇರೆಯಾಗಿದ್ರು . ಅವರದೇ ಕಾರಣಗಳು ,, ಈಗ ಇಬ್ರು ಒಳ್ಳೆಯ ಗೆಳೆಯಗೆಳತಿಯರು .. ಒಬ್ಬ ಮಗಳು ಅಪ್ಪನೊಂದಿಗೇ ಇದ್ದಾಳೆ .. ಬೇರೆ ಇದ್ದರೂ ಮಾತನಾಡುತ್ತಾರೆ . ಮಗಳು ಕೂಡ ಅಮ್ಮನೊಂದಿಗೆ ಒಳ್ಳೆಯ ಟರ್ಮ್ಸ್ ಅಲ್ಲಿದ್ದಾಳೆ .. 
ಮೊನ್ನೆ ಮೊನ್ನೆ ಒಂದು ಮದುವೆ ಮನೆಗೆ ಆಕೆ ಬಂದಿದ್ಳು .. ಈತನೂ ಬಂದಿದ್ದ .. ಈಕೆಯನ್ನ ಕಂಡ ಈತನ ಮನೆಯ ಕೆಲವರು ಈಕೆಯನ್ನ ಚೆಂದ ಮಾತನಾಡಿಸಿದರು .. ಆಕೆ ಕೂಡ ವಿಶ್ವಾಸದಿಂದ ಮಾತನಾಡಿದಳು.. ಮದ್ವೆ ಮನೆಯಲ್ಲಿ ಕೆಲವರ ಮುಖದಲ್ಲಿ ಈ ವಿಶ್ವಾಸವನ್ನ ಕಂಡು ಹಲವು ಪ್ರಶ್ನೆಗಳು "ಒಂದ್ ತರಾ " ನಗು ಕೂಡ ಕಾಣ್ತು ..ಅದನ್ನ ಬಿಟ್ ಬಿಡೋಣ ಬಿಡಿ ... ಆದರೆ ಈತ ಅವನಾಗೆ ಯಾರನ್ನೂ ಮಾತನಾಡಿಸಲಿಲ್ಲ .. ಅವರೂ ಕೂಡಾ ಮಾತನಾಡಿಸಲಿಲ್ಲ . ಮದ್ವೆ ಮುಗಿತು .. 
"ಅವಳು ಎಲ್ಲರನ್ನೂ ಮಾತನಾಡಿಸಿದಳು ..ನೋಡು ಅಷ್ಟೆಲ್ಲಾ ಆಗಿದ್ರು ಅವಳು ಅವನ ಕಡೆಯವರನ್ನ ಎಷ್ಟ್ ಚೆನ್ನಾಗಿ ಮಾತನಾಡಿಸಿದ್ಲು . ಎಷ್ಟ್ ಒಳ್ಳೆಯವಳು ಇವ್ನೆ ಸರಿ ಇಲ್ಲವೇನೋ ' ಅಂದ್ಕೊಂಡ ಮಂದಿ ಒಂದಷ್ಟಾದ್ರೆ .. "ಇಂತಹ ನಾಟಕಕ್ಕೆ ಬೇರೆ ಆಗಿದ್ದ್ಯಾಕೆ" ಅಂದವರು ಮತ್ತೊಂದಷ್ಟು.. 
ಇಲ್ಲಿ ಒಳ್ಳೆಯವರು ಕೆಟ್ಟವರು ಅನ್ನುವ ಪ್ರಶ್ನೆ ಬರೋದಿಲ್ಲ ... ಐದು ಬೆರಳು ಸಮನಾಗಿರೋದಿಲ್ಲವಲ್ಲ .. ಜೊತೆಗೆ ಕೆಲವೊಮ್ಮೆ ಸಮಯ ಸಂಧರ್ಭ ಕೂಡ ಕಾರಣವಾಗಿಬಿಡುತ್ತದೆ !! ಗಂಡು ಮಾತ್ರ ತಪ್ಪು ಮಾಡೋದು ಹೆಣ್ಣು ತಪ್ಪೆ ಮಾಡೋದಿಲ್ಲ ಅಂತೇನು ಇಲ್ಲವಲ್ಲ !! ಹಾಗೆ ತಪ್ಪುಗಳಾದ ಮೇಲೆ ಮಾತೇ ಆಡಿಸಬಾರದು ಎಂಬ ನಿಯಮ ಕೂಡ ಇಲ್ಲ !! ಹೀಗೆ ಚೆನ್ನಾಗಿರ್ತಿವಿ ಅಂದ್ರೆ ಇರ್ಲಿ ಬಿಡಿ ಅನಿಸೋ ಹಾಗೆ ..ಮಾತಿನಿಂದ ಮತ್ತೊಬ್ಬರನ್ನ ನೋಯಿಸುವ ಹಕ್ಕು ದೇವರೂ ಕೂಡ ನೀಡಿಲ್ಲ .. ಒಬ್ಬರನ್ನ, ಒಂದು ಸಂಬಂಧವನ್ನ ವಿಶ್ಲೇಷಿಸುವ ಹಕ್ಕು ಅದಕ್ಕೆ ಸಂಬಂಧಪಟ್ಟವರಿಗೆ ಮಾತ್ರವಿರುತ್ತದೆ ಅಲ್ಲವೇ .. ಮಾತನಾಡುವ ಮುನ್ನ ಯೋಚಿಸಿದರೆ ಒಳ್ಳೆಯದೇನೋ ..ಬದುಕು ಅಂದ್ರೆ ಹೊಂದಾಣಿಕೆ .. ಕೆಲವ್ರು ತಮ್ಮವರಿಗಾಗಿ ಆರ್ಥಿಕ ಸ್ವಾಸ್ಥಕ್ಕಾಗಿ , ಸಾಮಾಜಿಕ ಸ್ಥಾನಕ್ಕಾಗಿ ಹೊಂದಿಕೊಂಡು ಹೋದರೆ ಕೆಲವರಿಗೆ ಅದರ ಅಗತ್ಯ ಕಾಣೋದಿಲ್ಲ... 
Feeling....ಒಂದೊಳ್ಳೆ ಮಳೆ ಬಂದು ಮನುಷ್ಯನ ಕೆಟ್ಟತನವೆಲ್ಲ ಕೊಚ್ಚಿಹೋಗಲಿ ಅನಿಸುವ ಹಾಗೆ ...

Wednesday 19 April 2017

ಹೀಗೊಬ್ಬ ಅವಳು :))))  ( ವಿಶ್ವ ವಾಣಿಗೆ ಬರೆದದ್ದು )
ಭೂಮಿ ತೂಕದವಳು ನನ್ನ ಸೊಸೆ..ಮೊದಲಿನ ಹಾಗಿಲ್ಲ ಅಂತ ಅತ್ತೆ ಹೇಳುವಾಗೆಲ್ಲ ನಕ್ಕು ಬಿಡುತ್ತಾಳೆ ಆಕೆ .
ಆಕೆಯೇನು ಅತ್ತೆ ಇಷ್ಟ ಪಟ್ಟು ಮಗನಿಗೆ ತಂದುಕೊಂಡ ವಧುವಲ್ಲ   ಪ್ರೀತಿ ಮಾಡಿ ಹಠಕ್ಕೆಬಿದ್ದು ಮದುವೆಯಾದವಳು . ಆಕೆಯ ಹೆತ್ತವರಿಗೂ ಈ ಮದುವೆ ಇಷ್ಟವಿರಲಿಲ್ಲ.. ಮಗಳ ಓದುವಿಕೆಗೆ ರೂಪಕ್ಕೆ ಇನ್ನಷ್ಟು ಒಳ್ಳೆಯ ಗಂಡ ಸಿಗುವನೆಂಬ ಆಸೆ.  ಮಗ ಮತ್ತ್ಯಾರನ್ನಾದ್ರು ಮದುವೆಯಾಗಿದ್ರೆ ಒಂದಷ್ಟು ವರದಕ್ಷಿಣೆ ಬರ್ತಾ ಇತ್ತೇನೋ ಅನ್ನೋ ಸಿಟ್ಟೆನೋ ! ಸೊಸೆಯನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ.  ಸೊಸೆ ಒಂದು ಅವಘಢಕ್ಕೆ ಸಿಲುಕಿದಾಗ ಆಕೆಯ ಸಿಟ್ಟಿಗೆ  ಇನ್ನಷ್ಟು  ತುಪ್ಪ ಸುರಿದಂತ್ತಾಯ್ತು. 'ಹಾಳಾದೋಳ ಮುಖ ಕೂಡ ಹಾಳಾಗಬೇಕಿತ್ತು ' ಅನ್ನೋ ಮಾತು ಕೇಳಿದಾಗ ಮನದ ಕಡೆಯ ತಂತುವಿನಲ್ಲೂ ನೋವು. ಹೆತ್ತವರ, ಅಣ್ಣತಮ್ಮಂದಿರ ಹರಕೆ, ಆರೈಕೆ, ಹಾರೈಕೆಗಳ ಫಲವಾಗಿ ಸಾವನ್ನ ಗೆದ್ದು ಉಳಿದೆ ಬಿಟ್ಟಳು. ಒಂದಷ್ಟು  ದಿನಗಳ ನಂತರ  ಗಂಡ ಆಕೆಯ ತವರಿನಿಂದ ಕರೆದೊಯ್ಯಲು ಬಂದಾಗ ಹೆತ್ತವರ ವಿರೋಧದ ನಡುವೆಯೂ ಹೊರಟು  ನಿಂತಳು . ಬದಲಾಗಿರಬಹುದೇನೋ ಅತ್ತೆ ಎಂದುಕೊಂಡಳು. ಅತ್ತೆಗೆ ಅದೇ ಸಿಟ್ಟು. ಮತ್ತೆ ಕರೆ ತಂದ ಮಗನ ಮೇಲೂ ಕೋಪ. ಈಗ ಆ ಕೋಪ ಮಕ್ಕಳಾಗಿಲ್ಲ ಅನ್ನುವ ರೂಪ ಪಡೆದುಕೊಂಡಿತ್ತು . 'ಇವ್ಳಿಗೆ ಮಕ್ಕಳಾಗೋದಿಲ್ಲ ಗೊಡ್ಡು ಹಸು ತಂದು ಕಟ್ಟಿಕೊಂಡಿದ್ದೀಯ ಕಣೋ' ಅಂತ ಹರಿಹಾಯುವಾಗ ಮಗ ಮೂಗನಾಗಿ ಹೋಗುತ್ತಿದ್ದ . ಮನೆಯ ತೊರೆದರೆ ಆಪಾದನೆ ಹೆಂಡತಿಯ ಮೇಲೆ ಬರುತ್ತದೆ ಎಂದು ಸಹಿಸಿಕೊಂಡ. ಹೆಂಡತಿಯ ಮೇಲಿನ ಪ್ರೀತಿ ತೋರಿಸಲೂ ಅಂಜುತ್ತಿದ್ದ. ಹೆಂಡತಿ ಬಸುರಿ ಆದಾಗ ಆಕೆಯ  ಬಯಕೆಗಳನ್ನ ತೀರಿಸಲೂ ಹೆದರುತ್ತಿದ್ದ.  ಈಕೆ ಒಂದಷ್ಟು  ತಿರುಗಿ ಮಾತನಾಡಿದರೂ ರೌದ್ರಾವತಾರದ ಅತ್ತೆಯ ಮುಂದೆ ಈಕೆಯದೇನೂ ನಡೆಯಿತ್ತಿರಲಿಲ್ಲ. ಮಗ ಹುಟ್ಟಿದ ಮೇಲೆ ಖರ್ಚಿನ ನೆಪ ಒಡ್ಡಿ ಜಗಳವಾದ ಮೇಲೆ ಮಗ ಬೇರೆಯದೇ ಮನೆ ಮಾಡಿದ . ಮತ್ತೊಬ್ಬ ಮಗಳಾದಳು . ಮಗು ಪುಟ್ಟದಿರುವಾಗಲೇ ಗಂಡನಿಗೆ ಅಪಘಾತವಾದಾಗ ಹೆತ್ತವರ ಸಹಕಾರದಿಂದ ಗಂಡನನ್ನ ಉಳಿಸಿಕೊಂಡಳು. ಅತ್ತೆ ಏನು ಬದಲಾಗಲಿಲ್ಲ . ನೋಡಿದಾಗೆಲ್ಲ ಕುಹಕ.
ಒಂದಷ್ಟು ವರುಷಗಳ ವನವಾಸ, ಅಜ್ಞಾತವಾಸಗಳ ನಂತರ ಈಗೆಲ್ಲ ಬದಲಾಗಿದೆ.  ಗಂಡಹೆಂಡತಿ  ಚೆನ್ನಾಗಿದ್ದಾರೆ . ಬೆಳೆದ ಮಕ್ಕಳು ಅವರ ಆಸೆಯಂತೆ ಒಳ್ಳೆಯ ಪ್ರಜೆಗಳಾಗುವತ್ತ ಸಾಗಿದ್ದಾರೆ. ವಯಸ್ಸಾದ ಅತ್ತೆ ಆಗಾಗ ಬರುತ್ತಾರೆ . ಉಳಿದ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಮನೆಯಲ್ಲಿ ಆಗುವ ನೋವು ಅಪಮಾನಗಳ ಬಗ್ಗೆ ಹೇಳಿಕೊಳ್ಳುತ್ತಾರೆ.. 'ಯಾರಿಗೆ ಹೇಳಲಿ ಮಗ'  ಎನ್ನುವಾಗ ಆಕೆ ಅವರ ಕಣ್ಣೀರಿಗೆ  ಜೊತೆಯಾಗುತ್ತಾಳೆ. ತನ್ನ ಕೈಲಾದದ್ದು ಪ್ರೀತಿಯಿಂದ ಮಾಡಿ ಹಾಕುತ್ತಾಳೆ  ತಮ್ಮಲ್ಲೇ ಉಳಿಯುವಂತೆ ಹೇಳುತ್ತಾಳೆ. 'ತೀರಾ ಆಗದೆ ಹೋದಾಗ ಬರುತ್ತೇನೆ ಬಿಡು ನನಗಿನ್ಯಾರಿದ್ದಾರೆ; ಎನ್ನುತ್ತಾರೆ... ಹೊರಟಾಗ ಕಣ್ಣ ತುಂಬ ನೀರು ತುಂಬಿಕೊಳ್ಳುತ್ತಾರೆ . ಭೂಮಿ ತೂಕದವಳು ನನ್ನ ಸೊಸೆ ಎನ್ನುತ್ತಾರೆ.. ಈಕೆ ನಕ್ಕುಬಿಡುತ್ತಾಳೆ ಸುಮ್ಮನೆ .. ಹಾಗೆ ಸುಮ್ಮನೆ .....
ಅತ್ತೆ ಹೋದ ಮೇಲೆ ಈಕೆ ದೇವರನ್ನ ಕೇಳುತ್ತಾಳೆ 'ದೇವ್ರೇ, ಈಕೆ ಕೈಲಾಗದೆ ಹೋಗಿ ಯಾರಿಗೂ ಹೊರೆಯಾಗದಂತಿರಲಿ, ನೋಯದಂತಿರಲಿ, ಅಭಿಮಾನದಿಂದ(ದುರಭಿಮಾನ!!) ಬದುಕಿದ ಜೀವ ಅದನ್ನ ತಡೆಯಲಾರದು , ' ಎಂದು. ಗಂಡ ಅದ್ ಹೇಗೆ ತಾಳ್ಮೆ ಕಲಿತೆ ಎಂದರೆ ತನ್ನ ಸ್ವಾರ್ಥದ   ಕಾರಣ ಹೇಳುತ್ತಾಳೆ  !! 'ನಾ ನಿಮ್ಮಮ್ಮನನ್ನ ನೋಡಿಕೊಂಡ್ರೆ ದೂರದ್ಲಲಿರುವ  ನನ್ನ ತಾಯಿಯನ್ನ ಮತ್ಯಾರದ್ರು ನೋಡಿಕೊಳ್ಳುತ್ತಾರೆ' ಎನ್ನುತ್ತಾಳೆ.
ಈಕೆ  ಯಾರು ಎಂದೇನೂ ಹುಡುಕ ಹೋಗಬೇಡಿ .... ನಿಮ್ಮ  ಮನೆಯಲ್ಲೊಬ್ಬಳೋ , ಇಲ್ಲ ಅಲ್ಲೇ ಎದುರು ಮನೆಯಲ್ಲೋ, ಪಕ್ಕದ ಮನೆಯಲ್ಲೋ ಇರ್ತಾಳೆ .. ಕ್ಷಮಿಸುತ್ತಲೇ ಹೋಗುತ್ತಾಳೆ , ತನಗಾಗಿ, ತನ್ನವರಿಗಾಗಿ .... ಕೆಲವೊಮ್ಮೆ ನಗುತ್ತಾ ... ಕೆಲವೊಮ್ಮೆ ಅಳುತ್ತಾ .. ಅವನಿಯಂತೆ:))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...