Tuesday 2 September 2014

ಅಣ್ಣ ತಂಗಿ.....

ಈ ಮದುವೆ ಅನ್ನೋದು ಬಂಧುತ್ವಗಳ ಬೆಸೆಯೋ ಸಾಧನ , ಅದೇನು ಸಂಭ್ರಮ, ಸಡಗರ, ಕಲರವ, ನಗು, ಅಲ್ಲೆಲ್ಲೋ ಒಂದೆರಡು 'ಸಣ್ಣ ' ಮಾತುಗಳು, ಇನ್ನೆಲ್ಲೋ ಒಂದು ಜಗಳ, ಹೆಣ್ಣುಮಕ್ಕಳ ಬಿಂಕ, ಹಿರಿಯರ ಗದರುವಿಕೆ, ಹುಡುಗರ ಕೀಟಲೆ, ಇತ್ಯಾದಿ .... ಮದುವೆಗೆ ಮೊದಲು ನಗು ಕಲರವಗಳಿಂದ ತುಂಬಿದ್ದ ಮದುವೆ ಮನೆ ಹೆಣ್ಣು ಒಪ್ಪಿಸಿಕೊಟ್ಟ ಒಡನೆ ಸ್ತಬ್ದವಾಗಿ ಬಿಡುತ್ತದೆ . 
ಅಣ್ಣನ ಮಗಳ ಮದುವೆ. ಸಡಗರ ಮುಗೀತು. ಮಗಳ ಒಪ್ಪಿಸಿಕೊಟ್ಟಾಗ ಸಿಂಹದಂತೆ ಘರ್ಜಿಸೋ ಅಣ್ಣ ಕೂಡ ಅತ್ತು ಬಿಟ್ಟ. ಒಟ್ಟಿಗೆ ಬೆಳೆದ ತಮ್ಮ ಅಕ್ಕನ ಕೈ ಹಿಡಿದು ಅತ್ತ,. ಇದ್ದುದರಲ್ಲಿ ಅಮ್ಮ ಸ್ವಲ್ಪ stable ಆಗಿ ಇದ್ಲು. ಮಗಳು ಹೊರಟೆ ಬಿಟ್ಲು . ಉಳಿದವರೆಲ್ಲ ಮನೆಗೆ ಹಿಂತಿರುಗಿದ್ದೂ ಆಯಿತು .
ನಮ್ಮ ಮೈಸೂರು, ಮಂಡ್ಯ, ಹಾಸನ ಕಡೆ ಮದುವೆ ಮುಗಿದ ಮೇಲೆ ಗಂಡಿನ ಮನೆಯವರು ಹೆಣ್ಣಿನ ಕಡೆಯವರಿಗೆ 'ಬೀಗರ ಔತಣ' ಮಾಡ್ತಾರೆ. ಆಮೇಲೆ ಮದುಮಗಳನ್ನ ಮದುಮಗನನ್ನ ಮತ್ತೆ ಹುಡುಗಿಯ ಮನೆಗೆ ಕಳುಹಿಸಿ ಅಲ್ಲಿ ಮುಂದಿನ 'ಶಾಸ್ತ್ರ' ಮಾಡಿ ಗಂಡನ ಮನೆಗೆ ಕಳುಹಿಸಿಕೊಡ್ತಾರೆ .
ಹಾಗೆ ಇವಳ ಮದುವೆ ಆದ ಎರಡು ದಿನಕ್ಕೆ ಬೀಗರ ಔತಣ ಇತ್ತು . ಹುಡುಗಿಯ ಮನೆಯವರು ಎಲ್ಲ ವ್ಯವಸ್ಥೆ ಮಾಡಿದ್ದರು. ಒಂದ್ 1 ಗಂಟೆಯ ಹೊತ್ತಿಗೆ ಮದುಮಗಳು ಗಂಡನ ಜೊತೆ ಬಂದ್ಲು . ಕಾರಿಂದ ಇಳಿದಳು . ಮದುಮಗ ಹೇಳ್ತಾ ಇದ್ದ 'ಇಲ್ಲಿಂದ ಹೋಗಿದ್ದೆ ಹೋಗಿದ್ದು, ಊಟ ಕೂಡ ಮಾಡಿಲ್ಲ ಇವ್ಳು, ಯಾಕೋ ಸೇರೋಲ್ಲ ಅಂದ್ಲು ' ಅಂತೆಲ್ಲ ಮಾತಾಡ್ತಾ ಇದ್ದ ...ಅಷ್ಟರಲ್ಲಿ ಹುಡುಗಿ ಪತ್ತೇನೆ ಇಲ್ಲಾ!! ಎಲ್ಲಿ ಹೋದ್ಲಪ್ಪ ಅಂತ ನೋಡಿದ್ರೆ ಅಲ್ಲೆಲ್ಲೋ ಒಂದು ಮೂಲೆಯಲ್ಲಿ ಹುಡುಗಿ ತಮ್ಮನ ಜೊತೆ ಚೆಂದ ಮಾತಾಡ್ತಾ ಜಗದ ಪರಿವೇನೆ ಇಲ್ಲದೆ ಐಸ್ ಕ್ರೀಂ ತಿನ್ತ ಕೂತಿದ್ದಾಳೆ !!!ತಮ್ಮ ಅಕ್ಕನ ಬಳೆಗಳ ಜೊತೆ ಆಡ್ತಾ ಅದೇನೋ ಹೇಳ್ತಾ ಇದ್ದಾನೆ, ಮತ್ತೆ ಬಿಟ್ರೆ ಹೊರಟು ಬಿಡ್ತಾಳೆನೋ ಅನ್ನೋ ಹಾಗೆ !!... ಅಲ್ಲಿಯವೆಗೂ ಅಳದೆ ಇದ್ದ ಅಳು ಆಗಲೇ ಬಂದಿದ್ದು ನೋಡಿ ಅಮ್ಮನ ಕಣ್ಣಲ್ಲಿ .... ಒಂದೇ ರಕ್ತ ಹಂಚಿಕೊಂಡು, ಒಟ್ಟಿಗೆ ಬೆಳೆದು, ಒಟ್ಟಿಗೆ ಆಡಿ , ಒಟ್ಟಿಗೆ ಅತ್ತು, ಒಟ್ಟಿಗೆ ನಕ್ಕು, ಜಗಳ ಆಡಿ, ಬಿಟ್ಟೆ ಇರಲು ಗೊತ್ತಿಲ್ಲದ ಈ ಅಣ್ಣ ತಂಗಿ, ಅಕ್ಕತಂಗಿ ಅಕ್ಕತಮ್ಮ ಅನ್ನೋ ಬಂಧುತ್ವಗಳು, ಮದುವೆ ಆದ ಒಡನೆ ಇನ್ನೆಲ್ಲೋ ಹೋಗಿ ಬದುಕಬೇಕಾಗಿ ಬರುವ ಹೆಣ್ಣು ಮಗಳು, ಹೆಣ್ಣು ಮಗಳ ಕಳುಹಿಸಿ ಬದುಕಿಗೆ ಹೊಂದಿಕೊಳ್ಳಲೇ ಬೇಕಾದ ತಂದೆ ತಾಯಿ, ಅಣ್ಣತಮ್ಮ,ಅಕ್ಕತಂಗಿಯರು.... ಮದುವೆ ಬಂಧುತ್ವ ಬೆಳೆಸುವ ಸಾಧನವೇ ಆದರೆ .......!!...... ಯಾಕೋ ಮನಸೆಲ್ಲ ಒದ್ದೆ ಒದ್ದೆ .............

1 comment:

  1. ಹೋದವರ ನನ್ನ ಅಣ್ಣನ ಮಗಳ ಮದುವೆ ಆಯಿತು.
    ಸ್ವಲ್ಪ ಹಠಮಾರಿಯಾದ ನನ್ನ ಅಣ್ಣನ ಮಗಳೂ ತಾನು ಮದುವೆಯಾಗುತ್ತಿರುವುದು ಪ್ರೇಮಿಸಿದ ಹುಡುಗನನ್ನೇ ಆದರೂ, ಬೀಳ್ಕೊಡುವೆ ಹೊತ್ತಲ್ಲಿ ಬಿಕ್ಕಳಿಸಿ ಅತ್ತಳು.
    ಯಾಕೋ ಅವೆಲ್ಲ ನೆನಪಾದವು...

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...