Saturday 10 August 2013

ಹುಡುಕಲೇಕೆ ಗೆಳೆಯ


ಯಾಕೆ ಹುಡುಕುತ್ತಿ ಗೆಳೆಯ
ಆ ಪುಟ್ಟ ಹುಡುಗಿಯನ್ನು....
ಅವಳೆಂದೋ ಕಳೆದುಹೋಗಿಹಳು ನನ್ನೊಳಗೆ...
ಪುಟ್ಟ ಲಂಗವ ತೊಟ್ಟು
ನಿನ್ನ ಹಿಂದೆ ಮುಂದೆ ಓಡಾಡಿದ ಅವಳು
ಈಗೊಂದು ಮನೆಯ ಹೊತ್ತಗೆಯ ಹೊದಿಕೆ...
ಯಾಕೆ ಹುಡುಕುತ್ತಿ ಗೆಳೆಯ
ಮುದ್ದು ಮೊಗದ ತುಂಟ ಬಾಲೆಯ
ಅವಳ ತುಂಟತನಗಳೆಲ್ಲ ಮುದುಡಿ ಹೋಗಿದೆ ನನ್ನೊಳಗೆ
ಈಗ ಅವಳು
ತುಂಟ ಪೋರರ ದಡ ಸೇರಿಸುತ್ತಿಹ ನಾವಿಕೆ....
ಯಾಕೆ ಹುಡುಕುತ್ತಿ ಗೆಳೆಯ
ರಂಗೋಲಿ ಇಡುತ್ತಿದ್ದ ಆ ಮುಗುದೆಯನ್ನ..
ವರುಷಗಳ ಮಳೆಗೆ ಮುಗ್ದತೆ ಕರಗಿ ಹೋಗಿ
ಈಗವಳು
ಮುದ್ದು ಮಗಳಿಗೆ
ರಂಗವಲ್ಲಿ ಹೇಳಿಕೊಡುವ ಮಾತೃಕೆ ....
ಯಾಕೆ ಹುಡುಕುತ್ತಿ ಗೆಳೆಯ
ಪುಟ್ಟ ಮಾತಿಗೆ ಸಿಟ್ಟಿಗೆದ್ದು
ಕಣ್ಣಲ್ಲಿ ಹನಿ ತುಂಬಿ ನಿಂತು
ಕ್ಷಣದಲ್ಲೇ ಅಳು ಮರೆತು ನಗುತಿದ್ದ ಪೋರಿಯನ್ನ...
ಸಿಟ್ಟಿಗೆ ಕಡಿವಾಣ ಬಿದ್ದು..
ಮಾತೆಲ್ಲ ಮೌನವಾಗಿ
ಓಟ ನೋಟಗಳೆಲ್ಲ ನೆನಪಿನ ಪುಟಗಳ ಸೇರಿ...
ಈಗವಳು
ಒಂದು ಸಂಸಾರದ ದೀಪಿಕೆ.........
ಮತ್ತ್ಯಾಕೆ ಹುಡುಕುತ್ತಿ ಗೆಳೆಯ
ಕಳೆದು ಹೋದವಳನ್ನ ....
ಸಿಕ್ಕಲಾರದವಳನ್ನ .....
ನೆನಪಿನ ಪುಟಗಳಲ್ಲಿ ಅಡಗಿಕೊಂಡವಳನ್ನು ..
ಹುಡುಕಲೇ ಬೇಕೆಂದಾದರೆ
ಒಮ್ಮೆ ನಿನ್ನ ನೀನು ಕೇಳಿಕೋ
"ನಾ ಬಿಟ್ಟು ಹೋದದ್ದೇಕೆ ಅವಳನ್ನು"...........:))))

Saturday 3 August 2013

ಸಕ್ಕರೆಯ ಬೊಂಬೆ

ಅಮ್ಮನ ಬಿಳಿಯ ಕತ್ತಲ್ಲಿ 
ಕಪ್ಪು ಮಣಿಯ ಸರ ನೋಡಿದ್ದಾಗೆಲ್ಲ
ನನಗೂ ಅಂತಹದೇ ಸರ ಬೇಕೆಂದು ಅತ್ತಿದ್ದೆ...

ಅಮ್ಮ ತಿಳಿ ಹೇಳಿದ್ದಳು...
ಅದು ಪವಿತ್ರವಾದ ಮಾಂಗಲ್ಯ ಎಂದೂ 
ಅದು ಆಟಕ್ಕೆ ಹಾಕುವ ಸರ ಅಲ್ಲವೆಂದೂ 
ದೊಡ್ಡವಳಾದ ಮೇಲೆ 
ನಿನಗೆಂದೇ ಹುಟ್ಟಿದ ರಾಜಕುಮಾರ 
ಬಂದು ತನ್ನ ಕೈಯಾರೆ ಅದ ತೊಡಿಸಿ ..
ನಿನ್ನನ್ನು ಎತ್ತಿಕೊಂಡು..
ತನ್ನರಮನೆಗೆ ಕರೆದೊಯ್ವನೆಂದು....

ಅಮ್ಮನ ಮಾತಿಗೆ ಪುಟ್ಟ ಕನಸೊಂದು ಗೂಡು ಕಟ್ಟ ತೊಡಗಿತು...
ಯಾವಾಗ ದೊಡ್ಡವಳಾದೇನೋ
ರಾಜಕುಮಾರ ಹೇಗಿರುವನೋ...
ಅವನರಮನೆಗೆ ತಾನೇ ರಾಣಿಯಾದಂತೆ..
ಅವನೊಲವಿಗೆ ತಾನೇ ಅರಗಿಣಿಯಾದಂತೆ....

ದಿನಗಳೆದಂತೆ
ನಾನು ಬೆಳೆದೆ...
ಕನ್ನಡಿಯು ಹೇಳಿತು ನಾನು ರಾಜಕುವರಿಯೇ ಎಂದು...
ಅಪ್ಪ ಅಮ್ಮನ ಮುದ್ದಿನ ಕೂಸು...
ಅಣ್ಣನ ಸಕ್ಕರೆ ಗೊಂಬೆ...
ಇದ್ದದ್ದರಲ್ಲೇ ನಾನು ರಾಜಕುಮಾರಿ ನನ್ನ ಮನೆಗೆ....

ಬಂದನೊಬ್ಬ ರಾಜಕುಮಾರ
ನನ್ನ ಕರೆದೊಯ್ಯಲು..
ನನ್ನ ಕನಸು ನನಸಾದಂತೆ...
ನನಗೊಂದು ಕಪ್ಪುಮಣಿ ಸರ ತಂದಂತೆ...

ರಾಜಕುವರ ತಂದ ಕಪ್ಪುಮಣಿಯ ಬೆಲೆ
ನನ್ನಪ್ಪನ ಜೀವಮಾನದ ದುಡಿಮೆ...
ನನ್ನಮ್ಮನ ಕಣ್ಣ ನೀರು...
ನನ್ನ ಜೀವದ ಹಕ್ಕು ಎಂದು ತಿಳಿಯುವಷ್ಟರಲ್ಲಿ
ನನ್ನ ಕತ್ತ ಸುತ್ತ ಕಪ್ಪು ಮಣಿ ಹೊಳೆಯುತ್ತಿತ್ತು...
ಕನಸು ಗರ್ಭಪಾತವಾಗಿತ್ತು......

ಅಮ್ಮ.....
ಕನಸ ತುಂಬುವ ಮೊದಲು
ಕಸುವ ತುಂಬ ಬಾರದಿತ್ತೆ.....
ಅಪ್ಪ..
ಜೀವಮಾನದ ದುಡಿಮೆ ಅವಳಿಗಾಗಿ ಸುರಿಯುವ ಬದಲು..
ಜೀವನ ನಡೆಸುವ ದುಡಿಮೆ ಕಲಿಸಬಾರದಿತ್ತೆ...
ಅಣ್ಣ..
ನಿನ್ನ ಸಕ್ಕರೆಯ ಬೊಂಬೆಗೆ...
ಸಕ್ಕರೆ ತರುವುದ ಹೇಳಿಕೊಡಬಾರದಿತ್ತೆ.....

ಕಪ್ಪು ಮಣಿಯ ಆಸೆಗೆ ಜೀವ ತೊತ್ತಾಯಿತೇ..??!!

(ಒಂದು ಪುಟ್ಟ 'ಕನಸು' ಕನಸ ಚಿವುಟಿ ಕಣ್ಣೇರು ಹಾಕುವಾಗ ಮನ ನೊಂದುಹೊಯ್ತು...)
ಮಾದ್ರಿ....

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ 
ಹಾದುಬಂದ ಬದುಕ ಕವಲುಗಳ ನೆನಪಿನ ಧಾರೆ.... 

ಅಣ್ಣ ಅವನ ವಚನ ಬದ್ದ...
ಹಸ್ತಿನಾಪುರದ ರಾಣಿಯ ಪಟ್ಟ ನಿನಗೆ ಎಂದ ..
ಮನದ ತುಂಬಾ ಹೊಂಗಿರಣ....

ಕುಂತಿ ಒಪ್ಪುವಳೇ...?
ಅವಳು ಅರಮನೆಗೆ ಮಹಾರಾಣಿ ಅಂತೆ....
ನಾನು ಪಾಂಡುವಿಗೆ ಹೆಂಡತಿ ಅಂತೆ...
ಪ್ರತಿಸ್ಪರ್ಧಿಗಳೇ ಇಲ್ಲವಂತೆ ನನಗೆ...

ಎಲ್ಲವಿರುವ ಅರಮನೆ...
ಕುಂತಿ ನಗುತ್ತಲೇ ಬರಮಾಡಿಕೊಂಡಳು...
ತನ್ನವನನ್ನ ನನಗೆ ಧಾರೆ ಎರೆದು ಕೊಟ್ಟಳು...
ತನ್ನವ ಎನ್ನಲು ಅವಳಿಗೆ ಏನಿತ್ತು ಅವನಲ್ಲಿ(!!?)...
ಅವ ಶಾಪಗ್ರಸ್ತ .....
ಶಾಪ ಅವನದು....
ಅನುತಾಪ ನನ್ನ(ಮ್ಮ)ದು...
ಅವನೋ ಉರಿದು ಹೋದ ಕೆಂಡ..
ನಾನೋ ಒಳಗೆ ಉರಿಯುವ ಜ್ವಾಲಾಮುಖಿ...

ಕುಂತಿಯ ಕೃಪೆಯ ಫಲ...
ನಿಯೋಗದ ಬಲ
ಚಿನ್ನದ ಪುತ್ಹಳಿಗಳ ಹೆಡೆದೆ....
ಮಕ್ಕಳ ಚೆನ್ನಾಟದಲ್ಲಿ ಬಯಕೆ ಮರೆತೆ ...

ಸಂಜೆಯಾದೊಡನೆ ಅಶ್ವಿನಿ ದೇವತೆಗಳ ನೆನೆದೇನೆ...???!!!

ಅದೊಂದು ದಿನ ಅದು ನಡೆದೇ ಬಿಟ್ಟಿತು..
ಮಿಲನದ ಮೊದಲೇ ಅವನ ಪ್ರಾಣ ಹೊರಟೆ ಬಿಟ್ಟಿತು...
ಕಣ್ಣಲಿ ಹನಿ ನೀರು ಹುಟ್ಟದ ಮೇಲೆ ಅವನ ಸಾವಿಗೆ ನನ್ನಲ್ಲಿ ನೋವೆಲ್ಲಿಯದು..

ಕುಂತಿಗೋ ಮಕ್ಕಳ ಹೊಣೆಯಂತೆ...
ಅವಳು ಸಹಗಮನೆಯಾರಬಾರದಂತೆ...
ನಾನೇ ಅವನ ಹೃದಯ ರಾಣಿಯಂತೆ.....
ಸಹಗಮನದ ಹೊಣೆ ನನ್ನದಂತೆ...
ಈಗ ಭಯವೆನಿಸುತ್ತಿದೆ...

ಹಣತೆಯ ದೀಪ ಸುಟ್ಟರೆ ಬೆಣ್ಣೆ ಸವರಿದ ಅಮ್ಮನ ನೆನಪು ಮಾಸೇ ಇಲ್ಲದಿರುವಾಗ ..
ಒಡಲ ಬೆಂಕಿಯೇ ಆರದಿರುವಾಗ ...
ದೇಹವ ಬೆಂಕಿಗೆ ಒಡ್ದಬೇಕೇ .....
ಮುದ್ದು ಬೊಮ್ಮಟೆಗಳ ತೊರೆಯಬೇಕೆ...

ಧಗಧಗಿಸುವ ಚಿತೆಯಲ್ಲಿ ......
ಅವನೊಡನೆ ನಾನು...
ಬದುಕಿದ್ದಾಗ ಇರದ ಮಿಲನವ ಸಾವಲ್ಲಿ ಹುಡುಕ ಬೇಕೇ… ಬೇಕೇ…..

ಧಗಧಗಿಸುವ ಚಿತೆ...
ಚಿತೆಯ ಮುಂದೆ ನಿಂತ ಮನದ ತುಂಬಾ ..
ಹಾದುಬಂದ ಬದುಕ ಕವಲುಗಳ ಧಾರೆ....
ಕಣ್ಣ ತುಂಬಾ ಕಂಬನಿಯ ಧಾರೆ....
ಈ ಧಾರೆಗೆ ಚಿತೆ ಆರಬಾರದೆ............

ಇತಿ...
ಮಾದ್ರಿ....

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...