Sunday 29 September 2013

ನಿನ್ನ ನೆನಪಾದಾಗೆಲ್ಲ 
ಆ ಹೊಂಗೆಯ ಬುಡಕ್ಕೆ ಭುಜ ಆನಿಸುತ್ತೇನೆ ನಲ್ಲಾ.........
ಆ ಹೊಂಗೆಗೆ ನಾ ಭುಜ ಆನಿಸಿದಾಗೆಲ್ಲಾ 
ಅದು ನಿನ್ನಂತೆಯೇ ತಲೆದೂಗಿ 
ಮನದ ಬೇಗೆಯ ನೀಗಿಸುವುದಲ್ಲಾ..............:)))))
'ನೀನು ಕವಿಯಂತೆ ಹೌದೇನೇ ನಲ್ಲೇ '
ಎಂದ ನನ್ನವ..........
ಬೀಗಿಹಿಗ್ಗಿದ ನನ್ನ ಕಂಡು...
'ನಿನ್ನ ಕವಿತೆ ಕಣ್ಣ ತೆರೆಸುವುದೋ, ಕಣ್ಣ ಒರೆಸುವುದೋ
ಎರಡೂ ಸಾಧಿಸದ ಕವಿತೆ ಕವಿತೆಯೇ ಅಲ್ಲ...... ' 
ಎಂದಂದು ನನ್ನ ಕಣ್ಣ ತೆರೆಸಿಬಿಟ್ಟನಲ್ಲ..............:))
ಬೀಸುವ ಗಾಳಿಯಿಂದ 
ಆರಬಾರದು ಹಣತೆ ಎಂದು 
ತನ್ನ ಕರಗಳಿಂದ ಮರೆಮಾಡಿದಳು ಆಕೆ.......
ಉರಿವ ಹಣತೆಗೇನು ಗೊತ್ತು ತನ್ನ ರಕ್ಷಿಸುವ ಕೈ ಇದೆಂದು........
ಎಲ್ಲರ ಸುಡುವಂತೆ...
ಅವಳ ಕೈಗಳ ಕೂಡ ಸುಟ್ಟೇ ಸುಟ್ಟಿತು..........
ಅಪ್ಪ ಹಾಗು ಆ ದೊಡ್ಡ ಆಲದ ಮರ 
ಇಬ್ಬರದೂ ಒಂದೇ ಗುಣ........
ಬಳಿ ಹೋದೊಡನೆ 
ಮನವ ತಂಪಾಗಿಸಿ ಬೇಗೆ ತಣಿಸುವುದಲ್ಲ ..........:))
'ಬದಲಾದೆಯ ರಾಧೆ??, 
ಹೆಜ್ಜೆಯ ಸದ್ದಿಗೆ ನಸುನಗುತ್ತ ಬಂದು 
ಕೇಳುವ ಮುನ್ನವೇ ನಗೆಯ ಸ್ವಾಗತ ಅರ್ಪಿಸಿ 
ಮುರಳಿಯ ನಾದಕ್ಕೆ ತಲೆದೂಗುವ ನನ್ನ ರಾಧೆ
ಬದಲಾದಳೇ.'...???ಕೇಳಿದ ಮಾಧವ ನಸುನಗುತ್ತಾ ..........
ರಾಧೆಯದು ಅದೇ ಸ್ಥಿರ ಭಾವ...
ಕಣ್ಣ ತುಂಬಾ ತುಂಟತನ.....
'ಇಲ್ಲ ಮಾಧವ...
ಇರುವಿಕೆಯ ಬಯಸದೆ ನಿನ್ನ ಬಯಸಿದ,...
ನುಡಿಸದೆ ಇದ್ದರು ನಿನ್ನ ವೇಣುನಾದವ ಆಲಿಸಿದ,...
ನಿನಗಾಗೆ ನಗುವ ರಾಧೇ....
ನೀ ಬಂದರೂ ,ಬಾರದಿದ್ದರೂ ಬದಲಾಗಳು...
ಇದ ಅರಿತ ಮೇಲೆ ತಾನೇ ನೀ
ನಾ ಕರೆಯದಿದ್ದರೂ ಬಂದು ನನ್ನ ಸೆರಗ ಹಿಡಿಯುವುದು'......:)))))
ನಾ ಬರೆದ
ಅಕ್ಷರಗಳೆಲ್ಲ
ಮಲ್ಲಿಗೆಯ ಮೊಗ್ಗು ಅರಳಿದಂತೆ
ಘಮಘಮಿಸಿದ್ದು
ಆ ಪದಗಳಿಗೆ
ನಿನ್ನ ಒಲುಮೆಯ ಸಿಂಚನವಾದಾಗ ನಲ್ಲ....:)))))
ನೀ ನೆಟ್ಟ ಮಲ್ಲಿಗೆಯ ಅಂಬಿನಲ್ಲರಳಿದ 
ಮೊಗ್ಗ ಬೊಗಸೆ ತುಂಬಾ ಹೊತ್ತು 
ನಿನಗೆ ಉಡುಗೊರೆಯಾಗಿ ತಂದಿದ್ದೆ ನಲ್ಲ....
ನಿನ್ನ ಕಂಡೊಡನೆ ಮೊಗ್ಗೆಲ್ಲ ಅರಳಿ 
ಸುಮವಾಗಿ ನಕ್ಕು ,ನಿನ್ನ ಸೆಳೆದು 
ನನಗೆ ಮೋಸ ಮಾಡ ಹೊರಟವಲ್ಲ .............:)))))
ಯಾರ ಬಳಿಯೂ ಹೇಳಲಿಚ್ಚಿಸದ ಬದುಕಿನ ಕಥೆಯ ಸಾಗರನ ಮುಂದೆ ಕುಳಿತು ಹೇಳುತ್ತಾ ಹೋದಳು.....ಸಾಗರ ಅವಳ ದುಖವನ್ನೆಲ್ಲ ಕಣ್ಣ ಹನಿಯಾಗಿಸಿ ತನ್ನ ಒಡಲೊಳಗೆ ಅಡಗಿಸಿಕೊಂಡ........ಈಗ ಸಾಗರನ ನೀರು ಉಪ್ಪು, ಅವಳ ಕಣ್ಣ ಹನಿಯ ಹಾಗೆ..................!!!
ಇರಬಹುದೇ 
ಇಳೆಯ 
ಮೈಯೊಳಗೂ
ಮಿಡಿಯವ 
ಒಲವಿನ ಹೃದಯ ....
ಇಲ್ಲದ್ದಿದ್ದರೆ 
ಅರಳುತ್ತಿದ್ದವೇ 
ಈ ಪರಿಯ 
ಸುಂದರ ಸುವಾಸಿತ 
ಕುಸುಮ .....:)))))
ಪ್ರತಿಯೊಂದು ಪ್ರೇಮವೂ 
ಒಂದೊಂದು ಕಾವ್ಯದಂತೆ...
ಅದರದೇ ಛಂದಸ್ಸು 
ಅದರದೇ ಅಲಂಕಾರ...
ಅದರದೇ ಭಾವಾರ್ಥ 
ಅದರದೇ ಒಳಾರ್ಥ...
ಕವಿತೆ ಓದಿ ವ್ಯಾಕರಣವ ಅರಿಯತೊಡಗಿದರೆ ...
ಕವಿತೆ ಬಲು ಚೆನ್ನ...............:)))))))
ಆ ವರ್ಷ ಬರಗಾಲ....ಇದ್ದ ಹಿಟ್ಟು ಬಳಸಿ ಅಮ್ಮ ಒಂದು ರೊಟ್ಟಿ ಮಾಡಿದ್ಲು.
ಅವಳಿಗೆ ಗೊತ್ತು ಆ ರೊಟ್ಟಿ ನನಗೆ ಸಾಲದು ಎಂದು... ನಾ ಮತ್ತೊಂದು ರೊಟ್ಟಿ ಕೇಳಿಬಿಟ್ಟರೇ ಇಲ್ಲ ಅನ್ನಬೇಕಲ್ಲ .. ಎನ್ನೋ ನೋವೂ ಇತ್ತು ..
'ಮಗ ಒಂದು ಪ್ರಶ್ನೆ ಕೇಳ್ತೀನಿ ಸರಿ ಉತ್ತರ ಕೊಟ್ರೆ ನಿನ್ನ ಉತ್ತರದ ಅಷ್ಟೂ ರೊಟ್ಟಿ ..ನಿನಗೆ ತಪ್ಪು ಉತ್ತರ ಕೊಟ್ರೆ ಒಂದು ರೊಟ್ಟಿ ಮಾತ್ರ ನಿನಗೆ' ಅಂದ್ಲು....
'ಸರಿ ಅಮ್ಮ ಕೇಳು" ಅಂದೇ ..
'ಖಾಲಿ ಹೊಟ್ಟೆಯಲ್ಲಿ ನೀನು ಎಷ್ಟು ರೊಟ್ಟಿ ತಿನ್ನಬಲ್ಲೆ' ಎಂದಳು...
'ಆರು ರೊಟ್ಟಿ ಅಮ್ಮ" ಅಂದೆ ....
'ತಪ್ಪು ಮಗ, ಒಂದು ರೊಟ್ಟಿ ತಿಂದ ಮೇಲೆ ನಿನ್ನ ಹೊಟ್ಟೆ ಖಾಲಿ ಹೇಗೆ ' ಅಂದ್ಲು...'ತಗೋ ಇವತ್ತು ನಿಂಗೆ ಒಂದೇ ರೊಟ್ಟಿ ಮತ್ತೆ ಕೇಳೋಹಾಗಿಲ್ಲ ' ಅಂದ್ಲು.......ಒಳಮನೆಗೆ ಹೋಗುತ್ತಾ ನನಗೆ ಕಾಣದಂತೆ ಕಣ್ಣು ಒರೆಸಿಕೊಂಡಳು ..........................
ಹಕ್ಕಿಗಳೆಲ್ಲ ಹಾರಿ ಹೋದ ಮೇಲೆ 
ಮರಕ್ಕೆ ಉಳಿದದ್ದು ಖಾಲಿ ಗೂಡುಗಳು.....
ಬೆಳೆದ ಮಕ್ಕಳೆಲ್ಲ ಹಾರಿ ಹೋದ ಮೇಲೆ..
ಅಪ್ಪನಿಗೆ ಉಳಿದದ್ದು ಅವನ ಕೈಗಳ ಸುಕ್ಕುಗಳು...
ಅಮ್ಮನಿಗೆ ಉಳಿದದ್ದು ಒಡಲ ಮೇಲೆ ಉಳಿದ ಮಾತೃತ್ವದ ಗೆ(ಬ)ರೆಗಳು..............

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...