Monday 27 July 2015

ಒಂದು watsap ಕಥೆ ಬಂದಿತ್ತು ...
ಅದರ ಭಾವಾನುವಾದ ಇದು ...
ಅಮ್ಮ ಮಗನಿಗೆ ಒಂದು ಕಾಗದ ಬರಿತಾಳೆ :
ಕಂದ ,
ನೀವಿಬ್ಬರು ಚೆನ್ನಾಗಿದ್ದೀರಾ ಅಂತ ನಂಬಿದ್ದೇನೆ . ಇದೇನು ನಮ್ಮಮ್ಮ ಇಮೇಲ್ ಬರೆಯುತ್ತಿದ್ದಾಳೆ ಅಂತ ಆಶ್ಚರ್ಯ ಆಯ್ತಾ? ಏನಿಲ್ಲ ಮಗ ಬರೀಬೇಕು ಅನಿಸ್ತು ಅದಕ್ಕೆ ಬರಿತಾ ಇದ್ದೀನಿ , ನಿನಗೆ ಬುದ್ದಿ ತಿಳಿದಾಗಿನಿಂದ ನೀ ಜಾಣನಾಗೆ ಇದ್ದೆ ಅದಕ್ಕೆ ನಿನಗೆ ಏನೂ ಹೇಳೋ ಪ್ರಮೇಯ ಇರಲಿಲ್ಲ . ಈವತ್ತು ಒಂದ್ ಮಾತು ಹೇಳ್ತೀನಿ ಓದಿ ಬಿಡು ಪ್ಲೀಸ್ . ನೆನ್ನೆ ನಿನ್ನಪ್ಪ, ನಾನು ನಿಮ್ಮಮನೆಗೆ ಬಂದಾಗ ತುಂಬಾ ಖುಷಿ ಆಯ್ತು . ನಿನ್ನ ಹೆಂಡತಿ ನಿಜಕ್ಕೂ ಒಳ್ಳೆ ಹುಡುಗಿ ನಿಮ್ಮಿಬ್ಬರ ಹೊಂದಾಣಿಕೆ ಎಷ್ಟ್ ಚೆಂದ . ಹೀಗೆ ಇರಿ ಇಬ್ರು.
ಈಗ ನಾ ಹೇಳೋಕೆ ಹೊರಟಿದ್ದು ಏನು ಗೊತ್ತಾ ? ತುಂಬಾ ಸಣ್ಣ ವಿಷ್ಯ , ಆದ್ರೆ ಪದೇ ಪದೇ ನಡೆದರೆ ಗಂಡಹೆಂಡಿರ ಮಧ್ಯೆ ಅಂತರ ತರುತ್ತದೆ . ನಿನ್ನ ಹೆಂಡತಿ ಮಾಡಿದ ಆಕಾರವೇ ಇಲ್ಲದ ಚಪಾತಿಯ ಬಗ್ಗೆ ನೀ ಹಾಸ್ಯ ಮಾಡಿ ನಕ್ಕೆ, ನಿನ್ನ ಜೊತೆ ಅಪ್ಪ ಕೂಡ ನಕ್ಕರು. ಪಾಪ ಆ ಹುಡುಗಿ ಕಣ್ಣು ತುಂಬಿಕೊಂಡಳು .. ಬಹುಶಃ ರಾತ್ರಿ ಅತ್ತಳು ಅನಿಸುತ್ತದೆ , ಬೆಳಿಗ್ಗೆ ಅವಳ ಕಣ್ಣು ಬಾಡಿತ್ತು. ಮಗ, ನನಗೆ ಆಕಾರವೇ ಇಲ್ಲದ ಚಪಾತಿ ಅಂದ್ರೆ ಬೇಸರ ಇಲ್ಲ. ಅದು ನನ್ನ ಅಡುಗೆಮನೆಯ ಮೊದಲ ದಿನಗಳನ್ನ ನೆನಪಿಸುತ್ತದೆ .ಕಲಿಯುವಿಕೆಯ ಆನಂದ ನೆನಪಿಗೆ ಬರುತ್ತದೆ ಅಮ್ಮನಿಗೆ ಕಚೇರಿಯಲ್ಲಿ ಕೆಲಸ ಜಾಸ್ತಿ ಇದ್ದಾಗ ಅಪ್ಪ ಮಾಡುತ್ತಾ ಇದ್ದ ಚಪಾತಿ ನೆನಪಿಗೆ ಬರುತ್ತದೆ, ಅಪ್ಪನಿಗೆ ನಮ್ಮ ಮೇಲಿದ್ದ ಪ್ರೀತಿಯ ರೂಪ ನೆನಪಾಗುತ್ತದೆ . ನೀ ನನ್ನ ಒಡಲಲ್ಲಿ ಇದ್ದಾಗ ಅಡುಗೆಯ ವಾಸನೆಗೆ ವಾಕರಿಸುತ್ತಿದ್ದ ನನಗಾಗಿ ನಿನ್ನಪ್ಪ ಮಾಡುತ್ತಿದ್ದ ಚಪಾತಿ ನೆನಪಿಸುತ್ತದೆ, ಹೆಂಡತಿ ಮತ್ತು ಇನ್ನು ಹುಟ್ಟದ ಕಂದನ ಬಗ್ಗೆ ಇದ್ದ ಅಕ್ಕರೆ ನೆನಪಿಸುತ್ತದೆ . ನಾ ಚಪಾತಿ ಮಾಡುವಾಗ ನೀ ನಿನ್ನ ಪುಟ್ಟ ಕೈಯಲ್ಲಿ ಹಠ ಮಾಡಿ ಒತ್ತಿ ಕೊಡುತ್ತಿದ್ದ ಚಪಾತಿ ಎಷ್ಟ್ ಚೆಂದ ಇರ್ತಿತ್ತು ಗೊತ್ತ !!
ಮಾತುಗಳು ಜಗವ ಸುಂದರ ಮಾಡುತ್ತವೆ . ಅದೇ ಮಾತುಗಳು ಜನರ ದೂರ ಮಾಡುತ್ತವೆ . ಮಗ, ಅವಳೂ ನಿನ್ನಷ್ಟೇ ಓದಿದ್ದಾಳೆ . ನೀ ಓದಿದಷ್ಟೇ ವರ್ಷ ಅವಳೂ ಓದಿದ್ದಾಳೆ .. ಹಾಗಾದ್ರೆ ಅವಳು ಅಡುಗೆಯಲ್ಲೂ ನುರಿತಳಾಗೋಕೆ ಸಮಯ ಎಲ್ಲಿತ್ತು ಮಗ? ಸಣ್ಣ ವಿಷ್ಯ ಅಲ್ವಾ ? ಅತ್ತೆ ಬೈದರೆ ಬೇಸರ ಅಲ್ಲ, ಓರಗಿತ್ತಿ ನಕ್ಕರೆ ಬೇಸರ ಅನ್ನೋ ಹಾಗೆ , ಒಬ್ಬರನ್ನ ಹಾಗೆ ವ್ಯಂಗ್ಯ ವಾಡೋದು ತಪ್ಪು ಮಗ . ಕಲಿತಾಳೆ ಬಿಡು . ಅವಳಿಗೆ ಪ್ರೀತಿಯ ಜೊತೆಗೆ ಗೆಳೆತನ, ಒಂದಷ್ಟು ಸಹಾಯ ನೀಡು .. ಖುಷಿ ಆಗ್ತಾಳೆ . ಇದು ಎಲ್ಲರಿಗೂ ತಿಳಿದ ಆದರೆ ಅರಿವಿಗೆ ತೆಗೆದುಕೊಳ್ಳದ ಸಣ್ಣ ಸಂಸಾರದ ಗುಟ್ಟು . ಒಂದು ಸಣ್ಣ ಮೆಚ್ಚುಗೆ ಪ್ರೀತಿಯ ಇಮ್ಮಡಿಸುತ್ತದೆ ..
ಇದು ನನ್ನ ಅನುಭವದ ಮಾತು ...
ನಿನ್ನ ಪ್ರೀತಿಯ
ಅಮ್ಮ.
ಯಾಕೋ ಹಂಚಿಕೊಳ್ಳಬೇಕು ಅನಿಸಿತು .. ಮತ್ತೇನು ಹೇಳೋದು ಬೇಡ ಅಂತ ಕೂಡ ಅನಿಸಿತು... ಮನಸ್ಸು ಮಳೆಯ ನಂತರದ ಆಗಸದಂತೆ ..:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...