Monday 27 July 2015

ಚಿಕ್ಕವರಿದ್ದಾಗ ಸಿನಿಮಾ ನೋಡೋದೇ ವಾರಾಂತ್ಯದ ಮನೋರಂಜನೆ .. ಈಗಿನ ಹಾಗೆ ಅದೆಷ್ಟೋ ಸಿನಿಮಾಗಳು ಬರ್ತಾ ಇರ್ಲಿಲ್ಲ .. ಸಿನಿಮಾಗೆ ಹೋಗೋದೇ ಒಂದು ದೊಡ್ಡ ವಿಷ್ಯ ಅನ್ನೋ ಹಾಗೆ ಎಲ್ಲರಿಗೂ ಹೇಳ್ತಾ ಇದ್ವಿ .. ರಾಜಕುಮಾರ್ ಅಂದ್ರೆ ಬಹಳನೇ ಇಷ್ಟ .. ಯಾವುದೇ ಸಿನಿಮಾಕ್ಕೆ ಕರ್ಕೊಂಡ್ ಹೋಗದೆ ಇದ್ರೂ ಪರವಾಗಿಲ್ಲ ಆದ್ರೆ ರಾಜಕುಮಾರ್ ಸಿನಿಮಾ ತಪ್ಪಿಸ್ತಾ ಇರಲಿಲ್ಲ..ಅದು ಬಿಟ್ರೆ ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ಬರ್ತಾ ಇದ್ದ ನಾಟಕಗಳು, ವರ್ಷಕ್ಕೆ ಒಮ್ಮೆ ಇಡೋ ಗಣಪತಿಯ ಪೆಂಡಾಲ್ ನಲ್ಲಿ ನಡೆಯೋ ಕಾರ್ಯಕ್ರಮಗಳು , ಗೂಳೂರಿನ ಗಣಪತಿ ,ಸಿದ್ದಗಂಗೆಯ ಶಿವರಾತ್ರಿ ಜಾತ್ರೆ ಇವೇ ನಮಗೆ ಸಂಭ್ರಮ ತರೋ ಮನೋರಂಜನೆಗಳಾಗಿದ್ವು ..
ಬಹುಶಃ ೧೯೮೫ ಅನಿಸ್ತದೆ .. ಆಗಷ್ಟೇ ಬಿಡುಗಡೆ ಆಗಿದ್ದ 'ಕವಿರತ್ನ ಕಾಳಿದಾಸ' ಸಿನಿಮಾ ನೋಡಲೇ ಬೇಕು ಅಂತ ಹಠ ಮಾಡಿ ಅಮ್ಮನ್ನ ಹೊರಡಿಸಿದ್ದೆ .. ಆಗೆಲ್ಲ ಮಧ್ಯಾಹ್ನ ೩ ಗಂಟೆಗೆ ಚಿತ್ರ ಶುರು ಅಗ್ತಾ ಇತ್ತು . ತುಮಕೂರಿನ ಮಾರುತಿ ಚಿತ್ರಮಂದಿರ..ಒಂದು ಗಂಟೆಗೆ ಹೋದ್ರೂ ಟಿಕೆಟ್ ಸಿಗಲಿಲ್ಲ .. ನನ್ನ ಸಪ್ಪೆ ಮೂತಿ ನೋಡಲಾಗದೆ ಪಾಪ ಅಮ್ಮ ಜೀವನದಲ್ಲಿ ಮೊದಲ ಸಲ ಬ್ಲಾಕ್ ಅಲ್ಲಿ ಟಿಕೆಟ್ ತಗೊಂಡ್ರು .. ನನಗೆ ನೆನಪಿರೋ ಹಾಗೆ ೩೦ ರೂಪಾಯಿ ಕೂಟ್ಟರು ಅನಿಸುತ್ತೆ ಒಂದು ಟಿಕೆಟ್ಗೆ .. ಇನ್ನ ಸಮಯ ಇತ್ತು ಅಂತ ಅಲ್ಲೇ ತಿನ್ನೋಕೆ ಕೊಡಿಸಿ ಇನ್ನೇನು ಸಿನಿಮ ಶುರು ಆಗುತ್ತೆ ಅನ್ನೋವಾಗ ಬಾಗಿಲ ಬಳಿ ಹೋದ್ವಿ .. ಭಯಂಕರ ಜನ... ಅಮ್ಮ ಟಿಕೆಟ್ ಕೊಟ್ಳು ಬಾಗಿಲ ಹತ್ತಿರ .. ಅವನು ಮುಖ ನೋಡಿದ.. 'ನೋಡೋಕೆ ಓದಿದವರ ಹಂಗೆ ಕಾಣ್ತೀರ ಮೋಸ ಯಾಕ್ರಮ್ಮ ಮಾಡ್ತೀರ 'ಅಂದ . ಅಮ್ಮ 'ಯಾಕಪ್ಪ ಏನ್ ಆಯ್ತು?? ".. 'ನೆನ್ನೆ ಮ್ಯಾಟಿನಿ ಟಿಕೆಟ್ ಈವತ್ತು ತಂದ ಕೊಡ್ತಾ ಇದ್ದಿರಲ್ಲಮ್ಮ !!'ಅಂದ .. ನಾವು ಪೆಚ್ಚುಪೆಚ್ಚು .. ಪಾಪ ಅಮ್ಮ ಅದ್ಯಾಕೆ ದುಡ್ಡು ಇಟ್ಟಿದ್ರೋ ಏನೋ, ಅದೇ ಕೊನೆ ನಾ ಇನ್ಯಾವತ್ತು ಸಿನಿಮಾಕ್ಕೆ ಹಠ ಮಾಡಲಿಲ್ಲ ...!!


ಮಗರಾಯ ಬಾಹುಬಲಿ ಸಿನೆಮಾಗೆ DRC ಅಲ್ಲಿ ಮೊದಲೇ ಬುಕ್ ಮಾಡಿ ಹೋದ ... ಇದೆಲ್ಲ ನೆನಪಿಗೆ ಬಂತು . :)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...