Monday 27 July 2015

ಕಥೆ ಹೇಳಿ ಬಹಳ ದಿನಗಳಾಗಿತ್ತು ಅಲ್ವೇ !!
ಇಲ್ಲೊಂದು ಕಥೆ ಇದೆ ಹಂಚಿಕೊಳ್ಳುವಂತಾದ್ದು...
ಒಂದೂರು. ಆ ಊರಲ್ಲಿ ಒಂದು ವಿಚಿತ್ರ ಕಾನೂನು. ಅಲ್ಲಿಯ ರಾಜನನ್ನ ವರ್ಷಕ್ಕೊಮ್ಮೆ ಬದಲಿಸುವ ಕಾನೂನು. ಆ ದಿನ ಯಾರು ಅರಮನೆಯ ಮುಂದೆ ಮೊದಲು ಕಾಣಸಿಗುವರೋ ಅವರೇ ಅಲ್ಲಿನ ರಾಜ. ಹಿಂದಿನ ರಾಜನನ್ನ ದೂರದ ಕಾಡಿನ ಮಧ್ಯೆ ಬಿಟ್ಟು ಬರೋದು. ಅವನು ಹಸಿವಿಗೋ ಕ್ರೂರ ಮೃಗಗಳ ದಾಳಿಗೋ ಸಿಕ್ಕಿ ಸಾಯೋದು ..ಹೀಗೆ ನಡೀತಾ ಇತ್ತು . ಹೀಗೆ ರಾಜನಾಗೊ ಆಸೆಗೆ ಸಿಕ್ಕಿ ಸತ್ತವರೆಷ್ಟೋ ಗೊತ್ತಿಲ್ಲ ....ಮತ್ತೆ ಕೆಲವರು ಆ ಉಸಾಬರಿಯೇ ಬೇಡ ಅನ್ನೋ ಹಾಗೆ ಇದ್ದರು.
ಒಂದ್ ಸಾರಿ ಇದ್ಯಾವುದೂ ತಿಳಿಯದ ಪರ ಊರಿನ ಹುಡುಗನೊಬ್ಬ ಅಲ್ಲಿಗೆ ಬಂದ . ಆ ದಿನ ಅಲ್ಲಿನ ರಾಜನ ಕಡೆಯ ದಿನ . ಸರಿ ಇವನು ಬಂದ ಕೂಡಲೇ ಇವನನ್ನ ಅರಮನೆಗೆ ಕರೆದುಕೊಂಡು ಹೋಗಿ ರಾಜನನ್ನಾಗಿ ಮಾಡಿದರು. ಇವನಿಗೊ ಆಶ್ಚರ್ಯ. ಕೇಳಿಯೇ ಬಿಟ್ಟ "ಹಿಂದಿನ ರಾಜ ಎಲ್ಲಿ?' ಮಂತ್ರಿ 'ಹೀಗ್ ಹೀಗೆ ' ಅಂತ ಹೇಳಿದ. ಇವನಿಗೆ ಸ್ವಲ್ಪ ಭಯವಾಯ್ತು . ಆದರೂ ಸಾವರಿಸಿಕೊಂಡು 'ನನ್ನ ಆ ಕಾಡಿನ ಮಧ್ಯೆ ಒಮ್ಮೆ ಕರೆದುಕೊಂಡು ಹೋಗಿ' ಅಂದ. ಸರಿ ಕರೆದುಕೊಂಡು ಹೋದರು. ಅವ ಎಲ್ಲಾ ನೋಡಿದ . ಬಂದ ಮೇಲೆ ಮಂತ್ರಿಗೆ ಹೇಳಿದ 'ಆ ಕಾಡಿನ ನಡುವೆ ಒಂದು ಅರಮನೆ ಕಟ್ಟಿಸಿ ಹಾಗು ಕಾಡಿಗೆ ಹೋಗುವ ಹಾದಿಯಲ್ಲಿ ಅಲ್ಲಲ್ಲಿ ಒಂದಷ್ಟು ತಂಗುದಾಣ ಕಟ್ಟಿಸಿ ಹಾಗೂ ಬಾವಿ ತೋಡಿಸಿ ' ಅಂದ. ಮತ್ತೆ ಒಂದು ವರ್ಷ ಹಾಗೆ ಚೆಂದ ರಾಜ್ಯ ಆಳಿದ. ಒಂದು ವರ್ಷ ಆಯ್ತು. ಇವನೂ ಹೊರಡಲು ತಯಾರಾದ. ಮಂತ್ರಿ ಹೇಳಿದ 'ಮಹಾಪ್ರಭು, ಇನ್ನು ಮುಂದೆ ನೀವೇ ನಮ್ಮಮಹಾರಾಜರು .. ಇಲ್ಲಿಯವರೆಗೆ ಇದ್ದವರೆಲ್ಲ ಒಂದಷ್ಟು ದಿನ ರಾಜ ಅನ್ನೋ ಅಹಂನಿಂದ, ಒಂದಷ್ಟು ದಿನ ಮೋಜಿನಿಂದ, ಸ್ವಾರ್ಥದಿಂದ, ಕಡೆ ಕಡೆಗೆ ಸಾವು ಬಂತಲ್ಲಾ ಅನ್ನೋ ಭಯದಿಂದ ಬದುಕಿದರು . ಆದರೆ ಮುಂದಾಲೋಚನೆಯಿಂದ ನಿಮ್ಮನ್ನ ನೀವು ಕಾಪಾಡಿಕೊಂಡಿದಲ್ಲದೆ ನಮ್ಮನ್ನು ಚೆಂದ ನೋಡಿಕೊಂಡ್ರಿ .. ಇನ್ನೂ ನಮ್ಮ ರಾಜ್ಯಕ್ಕೆ ಭಯ ಇಲ್ಲ.. ನಿಮ್ಮನ್ನ ಬದಲಿಸೋ ಅಗತ್ಯ ಇಲ್ಲ ' ಅಂದನು.
ಇದು ಕಥೆ .....
ಮತ್ತೇನು ಹೇಳೋ ಅಗತ್ಯ ಇಲ್ಲ ಅಲ್ಲವೇ.......

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...