Monday 29 July 2013

ಹುಚ್ಚು ಮನದ ಒಂದಷ್ಟು ಬಿಚ್ಚು ಮಾತುಗಳು 

ಶಿರವೆ ನಶ್ವರ ಎಂದಿರುವಾಗ ...
ಕಿರೀಟದ ವ್ಯಾಮೋಹವೇಕೆ ಎಲೆ ಮನವೇ....
ಸಾವು ಕಟ್ಟಿಟ್ಟ ಬುತ್ತಿ ಎಂದಿರುವಾಗ...
ಸಲ್ಲದ ಪ್ರತಿಷ್ಠೆ ಏಕೆ ಮೂಢ ಮತಿಯೇ...


ರಕ್ತದಿಂದಲೇ ಹುಟ್ಟಬೇಕಿಲ್ಲ.
ಬಂಧುಗಳು ಬಂಧನಗಳು 
ಭಾವದಿಂದಲೇ ಭವ 
ಬಂಧುಗಳು ಬಂಧನಗಳು 
ಭಾವನೆಗಳಿದ್ದರೆ ಅಪರಿಚಿತನು ಬಂಧುವಂತೆ......
ಭಾವನೆಗಳು ಮುರುಟಿ ಹೋದರೆ....ಬಂಧುಗಳು ಅಪರಿಚಿತರಂತೆ.... 

ಸುಡುವ ಬೆಂಕಿಗೆ ತಿಳಿಯದು
ಯಾರ, ಹೇಗೆ , ಏಕೆ ಸುಡುವೆ ಎಂದು...
ಹಚ್ಚುವ ಮಾನವನಿಗೆ ತಿಳಿಯದೆ..
ಸುಡುವ ಬೆಂಕಿಯ ನೋವು,
ಮನವ ದಹಿಸುವ ಕಾವು...

ನಿನ್ನ ಕರಗಳಿಂದ ಸೃಷ್ಟಿಯಾದ
ಕಲ್ಲು ದೇವರ ಪೂಜಿಸುವ ನೀನು....
ದೇವನ ಕರಗಳಿಂದ ಸೃಷ್ಟಿಯಾದ
ಸಹಮಾನವನ ಮೆಚ್ಚಲಾರೆ ಸಹಿಸಲಾರೆಯಲ್ಲ ಮಾನವ...


ದೀಪ ದೀಪವ ಕಾಣಲು
ಬೆಳಕು ಬೇಕು.....
ನನ್ನ ಪ್ರೀತಿಯ ನೀ ಅರಿಯಲು
ನಿನ್ನಲ್ಲು ಪ್ರೀತಿ ಇರಬೇಕು ಗೆಳೆಯ....:

ಕಿಚ್ಚ ಹಚ್ಚಲೇ ಬೇಕೆಂದಿದ್ದರೆ
ಮಾನವತೆಯ ,ಪ್ರೀತಿಯ ಕಿಚ್ಚು ಹಚ್ಚು ಮನವೇ
ಅದು ಕಿಚ್ಚೆ ಆದರು ಉರಿದು ಬೆಳಗಲಿ...
ದ್ವೇಷದ ಕಿಡಿ ಬಿತ್ತಿ
ದಳ್ಳುರಿಯ ನೋಡ ಬಯಸ ಬೇಡ..
ಅದು ಕಿಡಿಯೇ ಆದರೂ ಸುಟ್ಟೀತು ಇಡೀ ಜಗವೇ...

ಹೇಗೆ ಪ್ರೀತಿಸಲಿ 'ಬದುಕೇ" ನಿನ್ನ....
ನಿನ್ನ ಒಂದೊಂದು ಉದಯ
ನನ್ನನ್ನು ಒಂದೊಂದು ಅಸ್ತಮದೆಡೆಗೆ ಕೊಂಡೊಯ್ಯುವಾಗ ...:))

ಸತ್ಯ....
ಸತ್ಯ...
ಸತ್ಯ........
ಹತ್ತು ಹಲವು ಬಾರಿ ಬರೆದ ಆವ.....
ಪುಟದ ರೂಪ ಬದಲಾಗಲಿಲ್ಲ.....
ಹೊತ್ತಗೆಯ ಅಂದ ಕುಗ್ಗಲಿಲ್ಲ.....
ಮಿಥ್ಯ ....
ಎಂದು ಒಮ್ಮೆ ಬರೆದ ಒಡನೆ.........
ಹೊತ್ತಗೆಯ ಬಣ್ಣವೇ ಬದಲಾಗಿ ಹೋಯ್ತಲ್ಲ..........

ವಿಧಿ ಎನ್ನುವ
ದ್ರೋಣಾಚಾರ್ಯ...
ದಿನಕ್ಕೊಂದು
ಕ್ಷಣಕ್ಕೊಂದು
ಚಕ್ರವ್ಯೂಹ
ರಚಿಸುತ್ತಿದ್ದರೆ...
ಮನ ಅಭಿಮನ್ಯುವಾಗಿ
ಚಕ್ರವ್ಯೂಹವ ಛೇದಿಸಿ
ಎಷ್ಟೋ ಬಾರಿ
ಸೋತು
ಸತ್ತು
ಮತ್ತೆ ಎದ್ದು ನಿಲ್ಲುತ್ತಿದ್ದೆ
ನನ್ನ ನೀನು ಸೋಲಿಸಲಾರೆ ಎಂದು.

ದೇಹ ಅನ್ನೋ ಮನೆ........
ಇಟ್ಟಂತೆ ..
ತೊಟ್ಟಂತೆ....
ಬೆಳೆಸಿದಂತೆ....
ಹೋಗುವಾಗ
ಪಂಚಭೂತಗಳಲ್ಲಿ ಲೀನವಾದರೂ ....
ಕುರುಹುಗಳ ಉಳಿಸಿ ಹೋಗುವಂತೆ.....


ಬುದ್ಧನಾಗಬೇಕೆಂದು
ಬೋಧಿವೃಕ್ಷದ ಕೆಳಗೆ ಕುಳಿತನವ
ಬದ್ದನಂತೆ...
ಮೀನೊಂದನ್ನ ಕಚ್ಚಿ ತಂದು
ಮರದ ಮೇಲೆ ಕುಳಿತ ಕಾಗೆ
ತಪ್ಪಿ ಬೀಳಿಸಿತದನ
ಅವನ ತಲೆಯ ಮೇಲೆ.....
ಕೆರಳಿದ ಅವನ ಉರಿಗಣ್ಣಿಗೆ ಸಿಲುಕಿ
ಬೂದಿಯಾಯಿತಾ ಕಾಗೆ...
ತನ್ನ ಶಕ್ತಿಗೆ ಸಂತೃಪ್ತನಾದ ಅವ ಮತ್ತೆ
ಬದ್ದನಾಗಿ ಕುಳಿತ ಬುದ್ಧನಂತೆ ..............!!!

ಹುಟ್ಟು ನೀಡಿ ಬಂಧಗಳಿಂದ ಬಂಧಿಸುಯಾದರೆ
ಸಾವ ಕಳುಹಿ ಎಲ್ಲ ತೊರೆಸುವೆಯೇಕೆ ...
ಆ ಮನೆಗೆ ಹೊಸ ಬೆಳಕ ನೀಡುವಾಗ...
ಈ ಮನೆಯ ಬೆಳಕ ನಂದಿಸುವ ಆಟವೇಕೆ...
ಹುಟ್ಟಿನ ಸಿರಿಯೇಕೆ....
ಮರಣ ಮೃದಂಗವೇಕೇ....
ನಿನ್ನ ಲೀಲೆಯ ನಾ ಅರಿಯಲು
ನೀನೀ ಆಟ ಕಟ್ಟುವೆಯಾದರೆ...
ನಾ ನಿನ್ನ ಪ್ರೀತಿಸಬೇಕೆ..
ನಿನಗೆ ಹೆದರಬೇಕೇ..
ನಿನ್ನ ದ್ವೇಷಿಸಬೇಕೇ..
ನಿನ್ನಿರುವಿಕೆಯ ಪ್ರಶ್ನಿಸಬೇಕೆ...!!!??!!!?????

 ಆಚಾರವಿಲ್ಲದ
ನಾಲಿಗೆ
ಗಾಜಿನದಾಗಿದ್ದರೆ.........
ಮಾತನಾಡುವ ಮುನ್ನ
ತನ್ನವರಿಗಾಗಿ ಅಲ್ಲದಿದ್ದರೂ..
ತನಗಾಗಿ
ಚಿಂತಿಸುತ್ತಿದ್ದನೇನೋ.............
ಹೀನ ಮಾನವ...........

ತಿಳಿಗೊಳದ ತಿಳಿನೀರಿಗೆ ಕಲ್ಲುಹಾಕಲೇಕೆ ....
ಆ ತಿಳಿನೀರಿಗಾಗಿ ಕಣ್ಣೀರು ಹಾಕುವ ಮಂದಿಯಿದ್ದಾರೆ...
ಬೇಡವೆಂದವರಿಗೂ ಅನ್ನವಿಕ್ಕಿ ಅನ್ನದ ಬೆಲೆಯೇ ಇಳಿಸುವಿರೆಕೆ...
ಅನ್ನಕ್ಕಾಗಿ ದೇಹವನ್ನೇ ಬೆಲೆ ಕಟ್ಟುವವರಿದ್ದಾರೆ...!!!!!!!

ಹೃದಯದ ಜ್ವಾಲೆಯ ನಂದಿಸಲು
ಕಂಬನಿ ಬಳಸುವೆಯೇಕೆ ಎಲೆ ಮನವೇ...
ಹೊತ್ತಿದ ಜ್ವಾಲೆಯ ಒಲೆಯೆಂದು ತಿಳಿದು
ನಿನ್ನ ಒಡಲ (ತಿಳಿವಿನ) ಹಸಿವ ಬೇಯಿಸಿಕೊ
ಬದುಕ ರೂಪಿಸಿಕೊ...:)))


No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...