Monday 29 July 2013

ನಲ್ಲ .........once again..:))))))))))


ಎಲ್ಲಾ ಸರಿ ನಲ್ಲ..........
ಆದರೆ....
ನನ್ನ ಮನದಲ್ಲಿ 
ನನಗಿಂತ ಹೆಚ್ಚಾಗಿ 
ನೀನೆ ಇರುವುದು 
ನ್ಯಾಯವೇನಲ್ಲ...;)))))))



ಆ ಎಲೆಯ ಮೇಲೆ ಬಿದ್ದ ಹನಿ ...
ಅತಿ ಸುಂದರ ನಲ್ಲ.....
ನಿನ್ನ ಒಲುಮೆಯ ಹಾಗೆ..........
ಆದರೆ 
ನನಗೆ 
ಎಲೆಯ ಮೇಲೆ ಬಿದ್ದ ಆ ಹನಿಗಿಂತ 
ಭುವಿಗೆ ಬಿದ್ದು 
ಬೇರಿಗಿಳಿವ ಹನಿಯೇ ಇಷ್ಟ ನಲ್ಲ....
ಕಂಡೂ ಕಾಣದೆ ನಿನ್ನಿಂದ ನನ್ನೆಡೆಗೆ ಹರಿವ ಜೀವ ನದಿಯ ಹಾಗೆ.....
ನಿನ್ನೊಲುಮೆಯ ಹಣತೆಯಿಂದ ನನ್ನುಸಿರ ಸೊಡರ ಹಚ್ಚಿದ ಹಾಗೆ...:))))




ನೀ
ಹಚ್ಚಿಟ್ಟ ಹಣತೆಗೆ
ಎಣ್ಣೆ ಬತ್ತಿಯ ಅಗತ್ಯವೇ ಇಲ್ಲ ನಲ್ಲ.....
ಹಗಲೆನ್ನದೆ
ರಾತ್ರಿಯೆನ್ನದೆ
ಮನೆ
ಮನವ
ಬೆಳಗುವುದಲ್ಲ..:))))))



ನನಗಿಂತ
ನನ್ನ
ನೆನಪುಗಳೇ ಚೆಂದವಂತೆ ನನ್ನ ನಲ್ಲನಿಗೆ...
ನಾನು ಕರೆದರೂ ಹೋಗೆನಂತೆ
ಅವುಗಳೋ
ಕರೆಯದೆ ಇದ್ದರೂ ಬಂದು
ಹೋಗೆಂದರು ಹೋಗವಂತೆ..:))))

ಎಲ್ಲರಂತವನಲ್ಲ ನನ ನಲ್ಲ...
ಕಣ್ಣ ಕಂಬನಿಯ
ನಗುವಾಗಿಸುವ ಕಲೆ ಬಲ್ಲನಲ್ಲ..:)))

ನಿನ್ನಿರುವಿಕೆಯಲ್ಲಿ
ನಾನು
ಮಳೆಯಲ್ಲಿ
ತೊಯ್ದ
ಇಳೆಯಂತೆ ನಲ್ಲ..........:))))

ನನ್ನದು ಹುಚ್ಚು ಪ್ರೀತಿಯ ಬಿರುಮಳೆ ನಲ್ಲ ....
ಸೆಳೆದೊಯ್ಯುವಂತದ್ದು .......
ನಿನ್ನದೋ ಬೆಚ್ಚನೆಯ ಒಲವಿನ ಹೊಳೆ ನಲ್ಲ....
ಈಜು ಕಲಿಸುವಂತದ್ದು..:)))


ನೀನೆಟ್ಟ ಮಲ್ಲಿಗೆ ಬಳ್ಳಿಗೆ ಈಗ ತುಂಬು ಯೌವನ ನಲ್ಲ......
ಮೈತುಂಬ ಮೊಗ್ಗ ಹೊತ್ತು ಬಿರಿಯಲು ಕಾದಿಹಳಲ್ಲ.............
ಆದರೂ ...
ನಿನ್ನ ಮೇಲೆ ಅದೆಂತಾ ಒಲುಮೆಯೋ ನಲ್ಲ...
ನಾ ಬಳಿ ಹೋದಾಗೆಲ್ಲ ನಿನ್ನ ಪ್ರೀತಿಯನ್ನೇ ಹೇಳುತ್ತಾಳಲ್ಲ...........:))))


ಎನ್ನ ಬಾಹುಬಂಧನವೇ
ನಿನ್ನ ಕೊರಳ ಮುತ್ತಿನ ಹಾರ...
ಎಂದು ಬೀಗುತ್ತಿದ್ದೆನಲ್ಲ....
ನಿನ್ನ ಹಾರ ಹಳತು ಈಗ..
ಸಿಕ್ಕಿತೆನಗೆ ಬೇರೆ ಹಾರ...
ನಿನ್ನದಕ್ಕಿಂತ ಸುಂದರ ...
ನಿನ್ನದಕ್ಕಿಂತ ಸುಕೋಮಲ...
ಎಂದ ನಲ್ಲನ ನುಡಿಗೆ
ಕಣ್ಣು ತುಂಬಿ,ಮನವು ಮುದುಡಿತಲ್ಲ..
ಓಡಿ ಬಂದ ಮುದ್ದು ಕುವರಿ
ಬಳಸಿದಾಗ ಅವನ ಕೊರಳ...
ತುಂಟ ನಗೆಯ ಬೀರಿದ ಅವನ ಕಂಡು
ನುಡಿದ ನುಡಿಯ ಅರ್ಥ ತಿಳಿದು ಮೋರೆ ಕೆಂಪಾಯ್ತಲ್ಲ..:)))

ನೀನು...
ನಾನು....
ನನ್ನೊಳಗಿನ ನೀನು...
ನಿನ್ನೊಳಗಿನ ನಾನು ....
ಎಲ್ಲಾ ಕವಿಗಳೇ ನಲ್ಲ...
ನಾ
ಅಕ್ಷರಕ್ಕೆ ನಮಿಸಿ ಕವಿತೆ ಎಂದೇನಲ್ಲಾ.........
ನೀನಾದರೋ...
ಮನದ ಗೋಡೆಗಳ ಮೇಲೆಲ್ಲಾ ಕವನ ಬರೆದು
ಒಳಗೆ ಉಳಿದು ಬಿಟ್ಟೆಯಲ್ಲಾ..................:))))

ಎಷ್ಟು ಚೆಂದ ನಲ್ಲ ನಮ್ಮ ಒಲುಮೆ...
ನನ್ನ ಪ್ರೀತಿಯ ರೀತಿಯ ನೀ ಒಪ್ಪಲಾರೆ....
ನಿನ್ನ ಪ್ರೀತಿಯ ರೀತಿಯ ನಾ ಒಪ್ಪಲಾರೆ....
ಆದರೂ
ಇಬ್ಬರೂ ಬಂಧಿಗಳು ಒಲುಮೆಯೊಳಗೆ ....
ಬೇರ್ಪಡದ ಹಾಗೆ..:))))

ಏಕಾಂತದಲ್ಲೂ
ನಾ
ಏಕಾಂಗಿ ಅಲ್ಲ ನಲ್ಲ.........
ಬಳಿ ನೀನಿಲ್ಲದಿದ್ದರೂ
ನಿನ್ನ ಒಲವಿನ ಬಲ ಇದೆಯಲ್ಲ.........:))))

ನಿನ್ನಿರುವಿಕೆಯೆ
ಸಾಕು ನಲ್ಲ...
ಮನದ ವೀಣೆಯ ತಂತಿ ಮೀಟಿ ಝೇಂಕಾರ ಹೊಮ್ಮಲು.......:)))))


ಪದಗಳ ಆಟ ನೋಡು ನಲ್ಲ....
ನಿನಗಾಗಿ ನಾ ಬರೆಯ ಹೊರಟರೆ...
ಕೈಗೆ ಸಿಗದೇ ಅಡಗಿ ಕುಳಿತು ನನ್ನೇ ಅಣಕಿಸುವವಲ್ಲ ........:))))

ಶಿಶಿರನಿಗೆ
ಪ್ರೇಮದ ಪರಿಭಾಷೆ ಗೊತ್ತು ನಲ್ಲ....
ಸದ್ದೇ ಮಾಡದೆ ಎಲೆಗಳ ಉದುರಿಸಿ...
ಭೂರಮೆಯ ಸದ್ದಿಲ್ಲದೇ ಚುಂಬಿಸುವನಲ್ಲ ..:)))))

ಆ ಕವಿತೆ ಎಷ್ಟು ಚೆಂದ ನಲ್ಲ
ಹಾಗೆ ಬರೆಯಲು ನನಗೆ ಬರದಲ್ಲ
ಎಂದೆನೊಮ್ಮೆ ನನ್ನವನಿಗೆ..........
ನಸುನಕ್ಕ ಆವ ........
ಕವಿತೆಗಳೇ ಹಾಗೆ ಗೆಳತಿ....
ಪರಸತಿಯ ಹಾಗೆ.........
ನಮ್ಮದಕ್ಕಿಂತ ಅವರದೇ ಚೆಂದ ಎನಿಸುವ ಹಾಗೆ ಎಂದನಲ್ಲ..........!!!!!!;)

ನೀ ತಂದ ನೂಪುರದ ಬಿನ್ನಾಣಕ್ಕೆ ಸಾಟಿಯೇ ಇಲ್ಲ ನಲ್ಲ.........
ಯಾರ ಇರುವಿಕೆಯ ಪರಿವೆ ಇಲ್ಲದೆ ...
ನಿನ್ನ ನೆನೆದು ಘಲ್ ಅನ್ನುವವಲ್ಲಾ .........:)))))


ನೆಲದ ಮೇಲೆ ಹರಡಿರುವ ಮುತ್ತುಗಳು
ಕಥೆ ಹೇಳಬಲ್ಲವು ನಲ್ಲ.....
ನಿನ್ನೊಲುಮೆ ಅಲೆಯ ತುಂಟಾಟಕ್ಕೆ
ಸೋತು ಉದುರಿದ
ಮೋಹಕ ಕಥೆಯ ಮೌನವಾಗೇ ಹೇಳಬಲ್ಲವಲ್ಲಾ .......:)))))))

ನನ್ನೊಳಗಿನ
ನೀನೆ
ನಿಜವಾದ ಕವಿ ನಲ್ಲ....
ನಾ ನಿನ್ನೊಲವಿನ ಪ್ರತಿಕೃತಿ ಮಾತ್ರ ನಲ್ಲ......:)))

ನಾಳೆ ಪ್ರಳಯವಂತೆ ನಲ್ಲ...
ಎಂದೇನಲ್ಲ..........
ಅದೇನು ಮಹಾ ಬಿಡು ನಲ್ಲೆ....
(20)ವರುಷಗಳ ಹಿಂದೆ ಇದಕ್ಕಿಂತ ಮಹಾ ಪ್ರಳಯ ಎದುರಿಸಿ
ಇನ್ನೂ ಬದುಕಿದ್ದೀನಿ ನೋಡು ಅಂತ ನನ್ನೇ ನೋಡಿ ಹುಸಿನಗುವನಲ್ಲ..........;)))))...


ಮನದ ಭಾವನೆಗಳ ಬಾಗಿಲ ಬಡಿತಕ್ಕೆ......
ನಾ ನೀಡುವ ಉತ್ತರ...
ಕವಿತೆಯ ಝರಿಯಷ್ಟೇ ನಲ್ಲ.................
ನೀ ನೀಡುವ ಉತ್ತರ....
ಮೌನ ಒಲುಮೆಯ ಶರಧಿ ನಲ್ಲ.....:))

ಮೌನವೇ ಬಂಗಾರ ಎನ್ನುವ ನಲ್ಲ
ನಾ ಮೌನವಾದೊಡನೆ ಬೆಚ್ಚಿಬೀಳುವನಲ್ಲ...........
ಕಾರಣ ಕೇಳಿದರೆ....
ನೀ ಮೌನವಾದರೆ ನಲ್ಲೆ.....
ಬಂಗಾರಕ್ಕೆ ಕಾಸು ಎಲ್ಲಿಂದ ತರಲಿ ಎನ್ನುವನಲ್ಲ....;)))))

ಹರಿದ ಸೀರೆಯ ಸೆರಗೂ
ಕಥೆ ಹೇಳಬಲ್ಲದು ನಲ್ಲೆ ಎಂದ ನನ ನಲ್ಲ......
ನಾ ಸೋಜಿಗದ ನೋಟ ಬೀರಿದ ಪರಿಗೆ...
'ಈ ಸೀರೆ ನೋಡು,...
ಅಂದು ನೀ ಮುನಿದು ಮುಂದೆ ಹೋದಾಗ
ನಾ ಸೆರಗೆಳೆದ ತಪ್ಪಿಗೆ ....
ಬಂದ ಬೋನಸ್ ಹಣವೆಲ್ಲ ಸುರಿದು
ಹೊಸ ಸೀರೆಯ ತರಿಸಿಕೊಟ್ಟ ಸೀರೆಯಲ್ಲವೇ ಇದು ' ಎನ್ನುವನಲ್ಲ....;)))!!!!!!!

ಅಗಾಧ ಜೀವನ ಸಾಗರದಲ್ಲಿ ಈಜಿ ಗೆದ್ದು ಬಂದೆ ನಲ್ಲ...
ನಿನ್ನ ಒಂದು ಹನಿ ಕಣ್ಣ ನೀರಲ್ಲಿ ಮುಳುಗಿ ಹೋದೆನಲ್ಲ..:))))

ನಿನ್ನೊಡನೆ ಇರುವ ಪ್ರತಿದಿನವೂ ನನಗೆ ದೀಪಾವಳಿ ನಲ್ಲ...
ನೀನಿಲ್ಲದ ದೀಪಾವಳಿಯು ಖಾಲಿ ಜೋಳಿಗೆಯಂತಾಯಿತಲ್ಲ...:))))


ಕವಿ ನಾನಲ್ಲ ನಲ್ಲ
ನಿನ್ನ ಒಲುಮೆಯ ಕವಿತೆಯಷ್ಟೇ ನಾ ಎಂದೇ ನಲ್ಲನಿಗೆ....
ನೀ ಕವಿಯೋ ಕವಿತೆಯೋ ನಾನರಿಯೆ ನಲ್ಲೆ....
ನನ್ನ ಪಾಲಿಗೆ ನೀ....
ನಾ ಹಚ್ಚಿಟ್ಟ ಪ್ರೀತಿಯ ಹಣತೆ ಎನ್ನುವನಲ್ಲ.... :)))
ಸದ್ದು ಮಾಡಬೇಡ ಗೆಜ್ಜೆಯೇ...
ನೀನು ಹೊಮ್ಮಿಸುವ ಪಿಸುದನಿಗೆ
ನಲ್ಲನಿಗೆ ತಿಳಿದು ಹೋದೀತು
ನಾನವನಿಗೆ ಕಾಯ್ವೆನೆಂದು ........:))))

ಬಲು ಅಪರೂಪ ನಲ್ಲ ನಿನ್ನ ಪ್ರೀತಿಯ ಪರಿ....
ನನ್ನ ಪ್ರೇಮವ ಕದ್ದೊಯ್ಯಲೂ ಇಲ್ಲ...
ನನ್ನಲ್ಲಿ ಪ್ರೇಮವ ಉಳಿಸಲೂ ಇಲ್ಲ...:))))

ನಲ್ಲನ ಪ್ರೀತಿ ಸೊಗಸು...
ನಡುವೆಲ್ಲೋ ಮೂಡುವ ಮುನಿಸೂ ಸೊಗಸು...
ಪ್ರೀತಿಯ ಉತ್ತುಂಗದಲ್ಲೂ...
ವೇದನೆಯ ಉತ್ಕಟತೆಯಲ್ಲೂ..
ಬದುಕ ಕಟ್ಟುವ ಜಾಣ್ಮೆ ಅತಿ ಸೊಗಸು.....:))))

ಒಲುಮೆ ಅಂದ್ರೆ
ನೀ ನನ್ನ ಎಷ್ಟು ಬಾರಿ ನಗಿಸಿದೆ ಅನ್ನುವುದಲ್ಲ........
ನೀ ಎಷ್ಟು ಬಾರಿ ನನ್ನ ಅಳುವ ನಗುವಾಗಿಸಿದೆ ಅನ್ನುವುದು ನಲ್ಲ...........:)))

No comments:

Post a Comment

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...