Friday, 26 May 2017

ಮಗನಿ/ಳಿಗೊಂದು ಪತ್ರ :
ಮಗ,
ಇದೇನು ಮನೆಯಲ್ಲೇ ಇದ್ದೀನಿ ಹೇಳೋದು ಬಿಟ್ಟು ಏನೋ ಕವಿರತ್ನ ಕಾಳಿದಾಸನ ತರ ಬರೀತಾ ಇದ್ದೀಯಾ ಅಂತ ತರ್ಲೆ ನಗು ನಗ್ತೀಯೇನೋ ಅಲ್ವ ?ಹೇಳಿದ್ರೆ ತಾಳ್ಮೆಯಿಂದ ನೀ ಯಾವತ್ತೂ ಕೇಳಿದ್ದೀಯ ಹೇಳು? ಒಂದೋ ನಗ್ತೀಯ ಅಥವ ಏನಾದ್ರೂ ತರ್ಲೆ ಮಾಡಿ ನಗಿಸಿಬಿಡ್ತೀಯ . ನಾನೂ ಆ ಕ್ಷಣದ ನಿನ್ನ ತುಂಟತನಕ್ಕೆ ನಕ್ಕರೂ ಹೇಳಬೇಕಾಗಿದ್ದನ್ನ ಹೇಳದೆ ಉಳಿದ ದುಗುಡದಲ್ಲೇ ಉಳಿದುಬಿಡ್ತೀನಿ .....
ಈಗಷ್ಟೇ ಹುಟ್ಟಿದಂತೆ ಅನಿಸುವ ನೀನು ಆಗಲೇ ನನಗಿಂತ ಎತ್ತರಕ್ಕೆ ಬೆಳೆದು ನಗುವುದ ನೋಡಿದಾಗ ಅದೇನ್ ಹೆಮ್ಮೆ ಅಂತೀಯಾ ! ಬೆಳವಣಿಗೆ ದೈಹಿಕವಾಗಿ ಮಾತ್ರವಲ್ಲದೆ ಬೌದಿಕವಾಗಿ ಕೂಡ ಅನಿಸದಾಗ ಹೆಮ್ಮೆ ದುಪ್ಪಟ್ಟಾಗುತ್ತದೆ. ವಯೋ ಸಹಜ ನಡವಳಿಕೆಗಳನ್ನ ಬೇಡ ಅನ್ನುವಷ್ಟು ಸಣ್ಣಮನಸ್ಸಿನವಳಲ್ಲ ಬಿಡು..ಆದರೂ ದುಡುಕುತನ ಮಾತ್ರ ಸಲ್ಲದು ಕಣ್ ಮಗ .. ಹೆಜ್ಜೆ ಇಡುವ ಮುನ್ನ, ಮಾತನಾಡುವ ಮುನ್ನ ಒಮ್ಮೆ, ಮತ್ತೊಮ್ಮೆ ಯೋಚಿಸಿಬಿಡು .. ನೀನೇ ಸರಿ ಹೆಜ್ಜೆ ಇಡ್ತೀಯ . ಓದುವಿಕೆಯ ಬಗ್ಗೆಯಾಗಲಿ, ನಿನ್ನ ಕಾಲ ಮೇಲೆ ನೀನು ನಿಲ್ಲಬೇಕೆನ್ನುವ ಬಗ್ಗೆಯಾಗಲಿ , ನೈತಿಕ ಸರಿ ದಾರಿಯ ಬಗ್ಗೆಯಾಗಲಿ ನಿನಗೆ ಹೇಳುವ ಅಗತ್ಯ ಬಂದಿಲ್ಲ ಬರುವುದೂ ಇಲ್ಲ ಅಲ್ವ.. ಎಷ್ಟೇ ಆದ್ರೂ ನೀ ನಮ್ಮ ಮಗ/ಳು ಅಲ್ವ.. (ಐಟ್ ಇದಕ್ಕೇನು ಕಮ್ಮಿ ಇಲ್ಲ ಬಿಡು ಅಂದ್ಯ !! :)...
ಆದ್ರೂ ಮಗ, ನೀನು ಎಷ್ಟೇ ದೊಡ್ಡವನಾ/ಳಾದ್ರೂ ನಮ್ಮ ಮುಂದೆ ನೀ ಚಿಕ್ಕವನೆ/ಳೆ .. ಗಾಡಿ ಹತ್ತಿದ ಕೂಡಲೆ ನೀ ಮಗನೆಂದು, ಅಣ್ಣನೆಂದು, ತಮ್ಮನೆಂದೋ , ಯಾರಿಗೋ ನೀ ಬೇಕಾದವನೆ೦ಬುದನ್ನೇ ಮರೆತು ನಿನ್ನದೇ ಲೋಕ ಸೇರಿಬಿಡುವ ನಿನ್ನ ಬಗ್ಗೆ ನನಗೆ ಬೇಸರವಿದೆ. ನಿನಗೆ ಪೆಟ್ಟಾದರೆ ನಿನ್ನ ದೈಹಿಕ ನೋವಿಗಿಂತ, (ನಿನಗಿಂತ !) ಹೆಚ್ಚಾಗಿ ನೋಯುವ ಮನಸ್ಸುಗಳಿವೆ .ನಿನ್ನ ಸಂತಸಕ್ಕೆಂದೇ ಕೊಡಿಸಿರುವ ಗಾಡಿ ನಿನಗೆ ದುಃಖ/ನೋವು ತಂದರೆ ಅದರ ತಪ್ಪಿತಸ್ಥ ಭಾವ ನಮಗೆ ಮಗ ! ಒಮ್ಮೆ ಪೆಟ್ಟಾದರೆ ಆ ಮಾನಸಿಕ ಹಾಗು ದೈಹಿಕ ನೋವು irreversible! .. ನೀ ನಂಬುವುದಿಲ್ಲ ನೀ ಸಣ್ಣವನಿದ್ದಾಗ ನೀ ಆಟ ಆಡುತ್ತಾ ಪೆಟ್ಟು ಮಾಡಿಕೊಂಡರೆ ನಿನ್ನನ್ನೇ ಬೈದರು ಅದೆಷ್ಟೋ ಬಾರಿ ರಾತ್ರಿಗಳಲ್ಲಿ ನಿನ್ನ ಗಾಯವನ್ನ ಸವರಿ ಕಣ್ಣ ಹನಿ ಹನಿಸಿದ್ದು ಉಂಟು . ಅದೆಷ್ಟೋ ಬಾರಿ ಪತ್ರಿಕೆಗಳಲ್ಲಿ ವಯಸ್ಸಿಗೆ ಬಂದ ಮಕ್ಕಳು ಬಿದ್ದು ಏಟು ಮಾಡಿಕೊಂಡರು ಅಂತಲೋ ಅಥವಾ ಮತ್ತಿನ್ನೇನೋ ಓದಿದಾಗ ಹೃದಯ ಬಾಯಿಗೆ ಬಂದಂತೆ ..ಅಪ್ಪ ನೀ ಗಾಡಿ ತೆಗೆದಾಗೆಲ್ಲ ಹೇಳ್ತಾನೆ ಇರ್ತಾರೆ 'driver friendly ಆಗಿ ಗಾಡಿ ಓಡಿಸು' ಅಂತ ಅಲ್ವ ? ಪ್ಲೀಸ್ , ನಿಧಾವಾಗಿರು. ನೀ ಒಬ್ಬರಿಗೆ ಏಟು ಮಾಡಿ ನೋಯಿಸಿದರೂ, ನೀನೇ ಏಟು ಮಾಡಿಕೊಂಡರೂ , ನಿನಗೆ ಮತ್ಯಾರೋ ಏಟು ಮಾಡಿದರೂ ನೋವು ನಿನಗೆ ಅಂತ ನೆನಪಿರಲಿ..
ಅಪ್ಪನದೂ ಇದೇ ಮಾತು .. ನಾನಾದರೋ ಒಂದೆರಡು ಕಣ್ಣ ಹನಿ ಹಾಕಿಯೋ, ಬೈದೊ ಸಮಾಧಾನ ಮಾಡಿಕೊಳ್ಳುತ್ತೇನೆ , ಆದ್ರೆ ಅಪ್ಪ ವಯಸ್ಸಿಗೆ ಬಂದ ಮಕ್ಕಳನ್ನ ಬಯ್ಯಲೂ ಆಗದೆ ಅಳಲೂ ಆಗದೆ ಕೊರಗಿ ಬಿಡುತ್ತಾರೆ .. ಇನ್ನು ನಿನ್ನ ಹಿಂದೆ ಮುಂದೆ ಹುಟ್ಟಿದ ಹಾಗು ನಿನ್ನನ್ನು ಪ್ರೀತಿಸುವ ಎಲ್ಲರಿಗೂ ನೋವಾಗುತ್ತದೆ .. ನೀನಂದ್ರೆ ನಮ್ಮ ಜೀವ ...
ನನಗೆ ಗೊತ್ತು ಇಷ್ಟ್ ಓದೋ ಅಷ್ಟ್ರಲ್ಲಿ ನೀ ನನ್ನ ಅದೆಷ್ಟ್ ಬೈಕೊಂಡಿರ್ತೀಯ ಅಂತ . ಬೈಕೋ, ನೀನಲ್ಲದೆ ಮತ್ಯಾರಾದ್ರು ಬೈದ್ರೆ ಗೊತ್ತಲ್ಲ :)
Love you maga
ನಿನ್ನ
ಅಮ್ಮ..
ಆತ ಆಕೆ ಬೇರೆಯಾಗಿದ್ರು . ಅವರದೇ ಕಾರಣಗಳು ,, ಈಗ ಇಬ್ರು ಒಳ್ಳೆಯ ಗೆಳೆಯಗೆಳತಿಯರು .. ಒಬ್ಬ ಮಗಳು ಅಪ್ಪನೊಂದಿಗೇ ಇದ್ದಾಳೆ .. ಬೇರೆ ಇದ್ದರೂ ಮಾತನಾಡುತ್ತಾರೆ . ಮಗಳು ಕೂಡ ಅಮ್ಮನೊಂದಿಗೆ ಒಳ್ಳೆಯ ಟರ್ಮ್ಸ್ ಅಲ್ಲಿದ್ದಾಳೆ .. 
ಮೊನ್ನೆ ಮೊನ್ನೆ ಒಂದು ಮದುವೆ ಮನೆಗೆ ಆಕೆ ಬಂದಿದ್ಳು .. ಈತನೂ ಬಂದಿದ್ದ .. ಈಕೆಯನ್ನ ಕಂಡ ಈತನ ಮನೆಯ ಕೆಲವರು ಈಕೆಯನ್ನ ಚೆಂದ ಮಾತನಾಡಿಸಿದರು .. ಆಕೆ ಕೂಡ ವಿಶ್ವಾಸದಿಂದ ಮಾತನಾಡಿದಳು.. ಮದ್ವೆ ಮನೆಯಲ್ಲಿ ಕೆಲವರ ಮುಖದಲ್ಲಿ ಈ ವಿಶ್ವಾಸವನ್ನ ಕಂಡು ಹಲವು ಪ್ರಶ್ನೆಗಳು "ಒಂದ್ ತರಾ " ನಗು ಕೂಡ ಕಾಣ್ತು ..ಅದನ್ನ ಬಿಟ್ ಬಿಡೋಣ ಬಿಡಿ ... ಆದರೆ ಈತ ಅವನಾಗೆ ಯಾರನ್ನೂ ಮಾತನಾಡಿಸಲಿಲ್ಲ .. ಅವರೂ ಕೂಡಾ ಮಾತನಾಡಿಸಲಿಲ್ಲ . ಮದ್ವೆ ಮುಗಿತು .. 
"ಅವಳು ಎಲ್ಲರನ್ನೂ ಮಾತನಾಡಿಸಿದಳು ..ನೋಡು ಅಷ್ಟೆಲ್ಲಾ ಆಗಿದ್ರು ಅವಳು ಅವನ ಕಡೆಯವರನ್ನ ಎಷ್ಟ್ ಚೆನ್ನಾಗಿ ಮಾತನಾಡಿಸಿದ್ಲು . ಎಷ್ಟ್ ಒಳ್ಳೆಯವಳು ಇವ್ನೆ ಸರಿ ಇಲ್ಲವೇನೋ ' ಅಂದ್ಕೊಂಡ ಮಂದಿ ಒಂದಷ್ಟಾದ್ರೆ .. "ಇಂತಹ ನಾಟಕಕ್ಕೆ ಬೇರೆ ಆಗಿದ್ದ್ಯಾಕೆ" ಅಂದವರು ಮತ್ತೊಂದಷ್ಟು.. 
ಇಲ್ಲಿ ಒಳ್ಳೆಯವರು ಕೆಟ್ಟವರು ಅನ್ನುವ ಪ್ರಶ್ನೆ ಬರೋದಿಲ್ಲ ... ಐದು ಬೆರಳು ಸಮನಾಗಿರೋದಿಲ್ಲವಲ್ಲ .. ಜೊತೆಗೆ ಕೆಲವೊಮ್ಮೆ ಸಮಯ ಸಂಧರ್ಭ ಕೂಡ ಕಾರಣವಾಗಿಬಿಡುತ್ತದೆ !! ಗಂಡು ಮಾತ್ರ ತಪ್ಪು ಮಾಡೋದು ಹೆಣ್ಣು ತಪ್ಪೆ ಮಾಡೋದಿಲ್ಲ ಅಂತೇನು ಇಲ್ಲವಲ್ಲ !! ಹಾಗೆ ತಪ್ಪುಗಳಾದ ಮೇಲೆ ಮಾತೇ ಆಡಿಸಬಾರದು ಎಂಬ ನಿಯಮ ಕೂಡ ಇಲ್ಲ !! ಹೀಗೆ ಚೆನ್ನಾಗಿರ್ತಿವಿ ಅಂದ್ರೆ ಇರ್ಲಿ ಬಿಡಿ ಅನಿಸೋ ಹಾಗೆ ..ಮಾತಿನಿಂದ ಮತ್ತೊಬ್ಬರನ್ನ ನೋಯಿಸುವ ಹಕ್ಕು ದೇವರೂ ಕೂಡ ನೀಡಿಲ್ಲ .. ಒಬ್ಬರನ್ನ, ಒಂದು ಸಂಬಂಧವನ್ನ ವಿಶ್ಲೇಷಿಸುವ ಹಕ್ಕು ಅದಕ್ಕೆ ಸಂಬಂಧಪಟ್ಟವರಿಗೆ ಮಾತ್ರವಿರುತ್ತದೆ ಅಲ್ಲವೇ .. ಮಾತನಾಡುವ ಮುನ್ನ ಯೋಚಿಸಿದರೆ ಒಳ್ಳೆಯದೇನೋ ..ಬದುಕು ಅಂದ್ರೆ ಹೊಂದಾಣಿಕೆ .. ಕೆಲವ್ರು ತಮ್ಮವರಿಗಾಗಿ ಆರ್ಥಿಕ ಸ್ವಾಸ್ಥಕ್ಕಾಗಿ , ಸಾಮಾಜಿಕ ಸ್ಥಾನಕ್ಕಾಗಿ ಹೊಂದಿಕೊಂಡು ಹೋದರೆ ಕೆಲವರಿಗೆ ಅದರ ಅಗತ್ಯ ಕಾಣೋದಿಲ್ಲ... 
Feeling....ಒಂದೊಳ್ಳೆ ಮಳೆ ಬಂದು ಮನುಷ್ಯನ ಕೆಟ್ಟತನವೆಲ್ಲ ಕೊಚ್ಚಿಹೋಗಲಿ ಅನಿಸುವ ಹಾಗೆ ...

Wednesday, 19 April 2017

ಹೀಗೊಬ್ಬ ಅವಳು :))))  ( ವಿಶ್ವ ವಾಣಿಗೆ ಬರೆದದ್ದು )
ಭೂಮಿ ತೂಕದವಳು ನನ್ನ ಸೊಸೆ..ಮೊದಲಿನ ಹಾಗಿಲ್ಲ ಅಂತ ಅತ್ತೆ ಹೇಳುವಾಗೆಲ್ಲ ನಕ್ಕು ಬಿಡುತ್ತಾಳೆ ಆಕೆ .
ಆಕೆಯೇನು ಅತ್ತೆ ಇಷ್ಟ ಪಟ್ಟು ಮಗನಿಗೆ ತಂದುಕೊಂಡ ವಧುವಲ್ಲ   ಪ್ರೀತಿ ಮಾಡಿ ಹಠಕ್ಕೆಬಿದ್ದು ಮದುವೆಯಾದವಳು . ಆಕೆಯ ಹೆತ್ತವರಿಗೂ ಈ ಮದುವೆ ಇಷ್ಟವಿರಲಿಲ್ಲ.. ಮಗಳ ಓದುವಿಕೆಗೆ ರೂಪಕ್ಕೆ ಇನ್ನಷ್ಟು ಒಳ್ಳೆಯ ಗಂಡ ಸಿಗುವನೆಂಬ ಆಸೆ.  ಮಗ ಮತ್ತ್ಯಾರನ್ನಾದ್ರು ಮದುವೆಯಾಗಿದ್ರೆ ಒಂದಷ್ಟು ವರದಕ್ಷಿಣೆ ಬರ್ತಾ ಇತ್ತೇನೋ ಅನ್ನೋ ಸಿಟ್ಟೆನೋ ! ಸೊಸೆಯನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ.  ಸೊಸೆ ಒಂದು ಅವಘಢಕ್ಕೆ ಸಿಲುಕಿದಾಗ ಆಕೆಯ ಸಿಟ್ಟಿಗೆ  ಇನ್ನಷ್ಟು  ತುಪ್ಪ ಸುರಿದಂತ್ತಾಯ್ತು. 'ಹಾಳಾದೋಳ ಮುಖ ಕೂಡ ಹಾಳಾಗಬೇಕಿತ್ತು ' ಅನ್ನೋ ಮಾತು ಕೇಳಿದಾಗ ಮನದ ಕಡೆಯ ತಂತುವಿನಲ್ಲೂ ನೋವು. ಹೆತ್ತವರ, ಅಣ್ಣತಮ್ಮಂದಿರ ಹರಕೆ, ಆರೈಕೆ, ಹಾರೈಕೆಗಳ ಫಲವಾಗಿ ಸಾವನ್ನ ಗೆದ್ದು ಉಳಿದೆ ಬಿಟ್ಟಳು. ಒಂದಷ್ಟು  ದಿನಗಳ ನಂತರ  ಗಂಡ ಆಕೆಯ ತವರಿನಿಂದ ಕರೆದೊಯ್ಯಲು ಬಂದಾಗ ಹೆತ್ತವರ ವಿರೋಧದ ನಡುವೆಯೂ ಹೊರಟು  ನಿಂತಳು . ಬದಲಾಗಿರಬಹುದೇನೋ ಅತ್ತೆ ಎಂದುಕೊಂಡಳು. ಅತ್ತೆಗೆ ಅದೇ ಸಿಟ್ಟು. ಮತ್ತೆ ಕರೆ ತಂದ ಮಗನ ಮೇಲೂ ಕೋಪ. ಈಗ ಆ ಕೋಪ ಮಕ್ಕಳಾಗಿಲ್ಲ ಅನ್ನುವ ರೂಪ ಪಡೆದುಕೊಂಡಿತ್ತು . 'ಇವ್ಳಿಗೆ ಮಕ್ಕಳಾಗೋದಿಲ್ಲ ಗೊಡ್ಡು ಹಸು ತಂದು ಕಟ್ಟಿಕೊಂಡಿದ್ದೀಯ ಕಣೋ' ಅಂತ ಹರಿಹಾಯುವಾಗ ಮಗ ಮೂಗನಾಗಿ ಹೋಗುತ್ತಿದ್ದ . ಮನೆಯ ತೊರೆದರೆ ಆಪಾದನೆ ಹೆಂಡತಿಯ ಮೇಲೆ ಬರುತ್ತದೆ ಎಂದು ಸಹಿಸಿಕೊಂಡ. ಹೆಂಡತಿಯ ಮೇಲಿನ ಪ್ರೀತಿ ತೋರಿಸಲೂ ಅಂಜುತ್ತಿದ್ದ. ಹೆಂಡತಿ ಬಸುರಿ ಆದಾಗ ಆಕೆಯ  ಬಯಕೆಗಳನ್ನ ತೀರಿಸಲೂ ಹೆದರುತ್ತಿದ್ದ.  ಈಕೆ ಒಂದಷ್ಟು  ತಿರುಗಿ ಮಾತನಾಡಿದರೂ ರೌದ್ರಾವತಾರದ ಅತ್ತೆಯ ಮುಂದೆ ಈಕೆಯದೇನೂ ನಡೆಯಿತ್ತಿರಲಿಲ್ಲ. ಮಗ ಹುಟ್ಟಿದ ಮೇಲೆ ಖರ್ಚಿನ ನೆಪ ಒಡ್ಡಿ ಜಗಳವಾದ ಮೇಲೆ ಮಗ ಬೇರೆಯದೇ ಮನೆ ಮಾಡಿದ . ಮತ್ತೊಬ್ಬ ಮಗಳಾದಳು . ಮಗು ಪುಟ್ಟದಿರುವಾಗಲೇ ಗಂಡನಿಗೆ ಅಪಘಾತವಾದಾಗ ಹೆತ್ತವರ ಸಹಕಾರದಿಂದ ಗಂಡನನ್ನ ಉಳಿಸಿಕೊಂಡಳು. ಅತ್ತೆ ಏನು ಬದಲಾಗಲಿಲ್ಲ . ನೋಡಿದಾಗೆಲ್ಲ ಕುಹಕ.
ಒಂದಷ್ಟು ವರುಷಗಳ ವನವಾಸ, ಅಜ್ಞಾತವಾಸಗಳ ನಂತರ ಈಗೆಲ್ಲ ಬದಲಾಗಿದೆ.  ಗಂಡಹೆಂಡತಿ  ಚೆನ್ನಾಗಿದ್ದಾರೆ . ಬೆಳೆದ ಮಕ್ಕಳು ಅವರ ಆಸೆಯಂತೆ ಒಳ್ಳೆಯ ಪ್ರಜೆಗಳಾಗುವತ್ತ ಸಾಗಿದ್ದಾರೆ. ವಯಸ್ಸಾದ ಅತ್ತೆ ಆಗಾಗ ಬರುತ್ತಾರೆ . ಉಳಿದ ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ಮನೆಯಲ್ಲಿ ಆಗುವ ನೋವು ಅಪಮಾನಗಳ ಬಗ್ಗೆ ಹೇಳಿಕೊಳ್ಳುತ್ತಾರೆ.. 'ಯಾರಿಗೆ ಹೇಳಲಿ ಮಗ'  ಎನ್ನುವಾಗ ಆಕೆ ಅವರ ಕಣ್ಣೀರಿಗೆ  ಜೊತೆಯಾಗುತ್ತಾಳೆ. ತನ್ನ ಕೈಲಾದದ್ದು ಪ್ರೀತಿಯಿಂದ ಮಾಡಿ ಹಾಕುತ್ತಾಳೆ  ತಮ್ಮಲ್ಲೇ ಉಳಿಯುವಂತೆ ಹೇಳುತ್ತಾಳೆ. 'ತೀರಾ ಆಗದೆ ಹೋದಾಗ ಬರುತ್ತೇನೆ ಬಿಡು ನನಗಿನ್ಯಾರಿದ್ದಾರೆ; ಎನ್ನುತ್ತಾರೆ... ಹೊರಟಾಗ ಕಣ್ಣ ತುಂಬ ನೀರು ತುಂಬಿಕೊಳ್ಳುತ್ತಾರೆ . ಭೂಮಿ ತೂಕದವಳು ನನ್ನ ಸೊಸೆ ಎನ್ನುತ್ತಾರೆ.. ಈಕೆ ನಕ್ಕುಬಿಡುತ್ತಾಳೆ ಸುಮ್ಮನೆ .. ಹಾಗೆ ಸುಮ್ಮನೆ .....
ಅತ್ತೆ ಹೋದ ಮೇಲೆ ಈಕೆ ದೇವರನ್ನ ಕೇಳುತ್ತಾಳೆ 'ದೇವ್ರೇ, ಈಕೆ ಕೈಲಾಗದೆ ಹೋಗಿ ಯಾರಿಗೂ ಹೊರೆಯಾಗದಂತಿರಲಿ, ನೋಯದಂತಿರಲಿ, ಅಭಿಮಾನದಿಂದ(ದುರಭಿಮಾನ!!) ಬದುಕಿದ ಜೀವ ಅದನ್ನ ತಡೆಯಲಾರದು , ' ಎಂದು. ಗಂಡ ಅದ್ ಹೇಗೆ ತಾಳ್ಮೆ ಕಲಿತೆ ಎಂದರೆ ತನ್ನ ಸ್ವಾರ್ಥದ   ಕಾರಣ ಹೇಳುತ್ತಾಳೆ  !! 'ನಾ ನಿಮ್ಮಮ್ಮನನ್ನ ನೋಡಿಕೊಂಡ್ರೆ ದೂರದ್ಲಲಿರುವ  ನನ್ನ ತಾಯಿಯನ್ನ ಮತ್ಯಾರದ್ರು ನೋಡಿಕೊಳ್ಳುತ್ತಾರೆ' ಎನ್ನುತ್ತಾಳೆ.
ಈಕೆ  ಯಾರು ಎಂದೇನೂ ಹುಡುಕ ಹೋಗಬೇಡಿ .... ನಿಮ್ಮ  ಮನೆಯಲ್ಲೊಬ್ಬಳೋ , ಇಲ್ಲ ಅಲ್ಲೇ ಎದುರು ಮನೆಯಲ್ಲೋ, ಪಕ್ಕದ ಮನೆಯಲ್ಲೋ ಇರ್ತಾಳೆ .. ಕ್ಷಮಿಸುತ್ತಲೇ ಹೋಗುತ್ತಾಳೆ , ತನಗಾಗಿ, ತನ್ನವರಿಗಾಗಿ .... ಕೆಲವೊಮ್ಮೆ ನಗುತ್ತಾ ... ಕೆಲವೊಮ್ಮೆ ಅಳುತ್ತಾ .. ಅವನಿಯಂತೆ:))))

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...