Saturday 3 August 2013

ಸಕ್ಕರೆಯ ಬೊಂಬೆ

ಅಮ್ಮನ ಬಿಳಿಯ ಕತ್ತಲ್ಲಿ 
ಕಪ್ಪು ಮಣಿಯ ಸರ ನೋಡಿದ್ದಾಗೆಲ್ಲ
ನನಗೂ ಅಂತಹದೇ ಸರ ಬೇಕೆಂದು ಅತ್ತಿದ್ದೆ...

ಅಮ್ಮ ತಿಳಿ ಹೇಳಿದ್ದಳು...
ಅದು ಪವಿತ್ರವಾದ ಮಾಂಗಲ್ಯ ಎಂದೂ 
ಅದು ಆಟಕ್ಕೆ ಹಾಕುವ ಸರ ಅಲ್ಲವೆಂದೂ 
ದೊಡ್ಡವಳಾದ ಮೇಲೆ 
ನಿನಗೆಂದೇ ಹುಟ್ಟಿದ ರಾಜಕುಮಾರ 
ಬಂದು ತನ್ನ ಕೈಯಾರೆ ಅದ ತೊಡಿಸಿ ..
ನಿನ್ನನ್ನು ಎತ್ತಿಕೊಂಡು..
ತನ್ನರಮನೆಗೆ ಕರೆದೊಯ್ವನೆಂದು....

ಅಮ್ಮನ ಮಾತಿಗೆ ಪುಟ್ಟ ಕನಸೊಂದು ಗೂಡು ಕಟ್ಟ ತೊಡಗಿತು...
ಯಾವಾಗ ದೊಡ್ಡವಳಾದೇನೋ
ರಾಜಕುಮಾರ ಹೇಗಿರುವನೋ...
ಅವನರಮನೆಗೆ ತಾನೇ ರಾಣಿಯಾದಂತೆ..
ಅವನೊಲವಿಗೆ ತಾನೇ ಅರಗಿಣಿಯಾದಂತೆ....

ದಿನಗಳೆದಂತೆ
ನಾನು ಬೆಳೆದೆ...
ಕನ್ನಡಿಯು ಹೇಳಿತು ನಾನು ರಾಜಕುವರಿಯೇ ಎಂದು...
ಅಪ್ಪ ಅಮ್ಮನ ಮುದ್ದಿನ ಕೂಸು...
ಅಣ್ಣನ ಸಕ್ಕರೆ ಗೊಂಬೆ...
ಇದ್ದದ್ದರಲ್ಲೇ ನಾನು ರಾಜಕುಮಾರಿ ನನ್ನ ಮನೆಗೆ....

ಬಂದನೊಬ್ಬ ರಾಜಕುಮಾರ
ನನ್ನ ಕರೆದೊಯ್ಯಲು..
ನನ್ನ ಕನಸು ನನಸಾದಂತೆ...
ನನಗೊಂದು ಕಪ್ಪುಮಣಿ ಸರ ತಂದಂತೆ...

ರಾಜಕುವರ ತಂದ ಕಪ್ಪುಮಣಿಯ ಬೆಲೆ
ನನ್ನಪ್ಪನ ಜೀವಮಾನದ ದುಡಿಮೆ...
ನನ್ನಮ್ಮನ ಕಣ್ಣ ನೀರು...
ನನ್ನ ಜೀವದ ಹಕ್ಕು ಎಂದು ತಿಳಿಯುವಷ್ಟರಲ್ಲಿ
ನನ್ನ ಕತ್ತ ಸುತ್ತ ಕಪ್ಪು ಮಣಿ ಹೊಳೆಯುತ್ತಿತ್ತು...
ಕನಸು ಗರ್ಭಪಾತವಾಗಿತ್ತು......

ಅಮ್ಮ.....
ಕನಸ ತುಂಬುವ ಮೊದಲು
ಕಸುವ ತುಂಬ ಬಾರದಿತ್ತೆ.....
ಅಪ್ಪ..
ಜೀವಮಾನದ ದುಡಿಮೆ ಅವಳಿಗಾಗಿ ಸುರಿಯುವ ಬದಲು..
ಜೀವನ ನಡೆಸುವ ದುಡಿಮೆ ಕಲಿಸಬಾರದಿತ್ತೆ...
ಅಣ್ಣ..
ನಿನ್ನ ಸಕ್ಕರೆಯ ಬೊಂಬೆಗೆ...
ಸಕ್ಕರೆ ತರುವುದ ಹೇಳಿಕೊಡಬಾರದಿತ್ತೆ.....

ಕಪ್ಪು ಮಣಿಯ ಆಸೆಗೆ ಜೀವ ತೊತ್ತಾಯಿತೇ..??!!

(ಒಂದು ಪುಟ್ಟ 'ಕನಸು' ಕನಸ ಚಿವುಟಿ ಕಣ್ಣೇರು ಹಾಕುವಾಗ ಮನ ನೊಂದುಹೊಯ್ತು...)

1 comment:

  1. ಈಗೀಗ ಹೆಣ್ಣೂ ಮಕ್ಕಳ ಮದುವೆ ಎಂದರೆ ಅದು ಹೆತ್ತವರ 'ನಿಲುವು ದೋಪಿಡಿ' (ಪೂರ್ತಿ ದರೋಡೆ). ಅಷ್ಟು ಕೊಟ್ಟ ಮೇಲೂ ಮಗಳು ನೆಮ್ಮದಿ ಕಾಣುವಳೇ? ಆ ಕರಿ ಮಣಿ ಹಾರಕೂ ಅರ್ಥವಿದೆಯೇ ಪಾಪ ಅದೂ ಅವರಿಗೆ ಗೊತ್ತಿರುವುದಿಲ್ಲ! ಹೆಣ್ಣು ಹೆತ್ತವರ ಕಷ್ಟ ದೇವರಿಗೇ ಪ್ರೀತಿ.

    ReplyDelete

ನೆನ್ನೆ ಮಂಜು ಮತ್ತೆ ನಾನು ಮಹದೇಶ್ವರ ಬೆಟ್ಟಕ್ಕೆ ಹೋಗಿದ್ವಿ. ದರ್ಶನ ಎಲ್ಲಾ ಮುಗಿದ ಮೇಲೆ ಮಂಜು ತಿಂಡಿ ತಿಂದು ಹೊರಡೋಣ ಅಂದ್ರು. ನಾ ಬಸ್ ಪಯಾಣ ಮಾಡೋವಾಗ ಏನೂ ತಿನ್ನೋದಿ...